ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳು ಪ್ರಜಾಪ್ರಭುತ್ವದ ತಳಹದಿಯಾಗಿವೆ. ಪ್ರಜಾಪಭುತ್ವ ಯಶಸ್ವಿಗೆ ಪ್ರಬುದ್ಧ ಹಾಗೂ ಜಾಗರೂಕ ಮತದಾರರಿಂದಲೇ ಸಾಧ್ಯ, ಪ್ರೌಢ ಹಾಗೂ ಪದವಿ ಪೂರ್ವ ಹಂತದಿಂದಲೇ ಮತದಾನದ ಮಹತ್ವ ಹಾಗೂ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಲ್ಲಿ ಈ ಕುರಿತು ಅರಿವು ಮೂಡಿಸಲು ಪ್ರಬಂಧ, ಚಿತ್ರಕಲೆ, ರಸಪ್ರಶ್ನೆಯಂತಹ ಅನೇಕ ಸ್ಫರ್ಧೆಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಬಿ. ಎಸ್. ರಾಠೋಡ ಅಭಿಪ್ರಾಯಪಟ್ಟರು.
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಗರದ ಬಾಲಕಿಯಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಶಾರದಾ ಸಭಾ ಭವನದಲ್ಲಿ ಇತ್ತಿಚಿಗೆ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಮತದಾನ ಜಾಗೃತಿಗಾಗಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಯಶಸ್ವಿ ಪ್ರಜಾಪ್ರಭುತ್ವ ಹೊಂದಿದ ದೇಶ ನಮ್ಮದ್ದಾಗಿದೆ. ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಇ.ಎಲ್.ಸಿ. ನೋಡಲ್ ಅಧಿಕಾರಿಗಳಾದ ಪ್ರೊ.ಎಂ.ಬಿ.ರಜಪೂತ ಪ್ರಾಸ್ತಾವಿಕ ಮಾತನಾಡಿ, ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನ ಮುಖ್ಯವಾಗಿದೆ. ದೇಶದ ಭವಿಷ್ಯ ರೂಪಿಸುವಲ್ಲಿ ಮತದಾನ ಮಹತ್ವದ ಪಾತ್ರ ವಹಿಸುತ್ತದೆ.ಎಲ್ಲರೂ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ ಎಂದು ಮತದ ಮಹತ್ವವನ್ನು ವಿವರಿಸಿದರು. ಪ್ರಾಚಾರ್ಯರಾದ ಸಿ.ಬಿ.ನಾಟೀಕಾರ ಮಾತನಾಡಿ, ಪ್ರತಿಯೊಬ್ಬರೂ ನಮೂನೆ-೬ ಅನ್ನು ತುಂಬಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ಮತದಾನ ಜಾಗೃತಿ ಕುರಿತಾಗಿ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕುಮಾರಿ ಸೋನು ಕೆಂಗಾರ, ಇಂಗ್ಲೀಷ ಪ್ರಬಂಧ ಸ್ಪರ್ಧೆಯಲ್ಲಿ ಕು.ಅಕ್ಷತಾ ಪೂಜಾರಿ, ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ಕು.ಲಕ್ಷ್ಮೀ ಕೋರಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ಕು.ವಿನೂತಾ ಮೋರೆ ಹಾಗೂ ಕು.ಭಾಗ್ಯ ಅಲಕೋಪರ ಅವರು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ತಾಲೂಕಾ ಇ.ಎಲ್.ಸಿ ನೋಡಲ್ ಅಧಿಕಾರಿಗಳಾದ ಕೆ.ಎ.ಹೊಸಟ್ಟಿ, ಟಿ.ಬಿ.ಕಾರದಾನಿ, ಪ್ರೊ. ಎನ್.ಬಿ,ಪೂಜಾರಿ ಪ್ರೊ.ಪಿ.ಜಿ.ಘಿರಡಿ, ಪ್ರೊ. ಮಲ್ಲಮ್ಮ ಮಾಲಿಪಾಟೀಲ, ಮಂಜುಳಾ ಪೂಜಾರ, ಪ್ರೊ. ಎಸ್.ಸಿ.ತೋಳನೂರ ವಿಜಯಲಕ್ಷ್ಮೀ ಹಿರೇಮಠ, ರುಕ್ಸಾನಾ, ಪ್ರೊ. ಸಿದ್ದಪ್ಪ ತಳ್ಳಿ, ಬಸವರಾಜ ಪವಾರ ಹಾಗೂ ಪ್ರತಿಭಾ ಓತಗೇರಿ ಉಪಸ್ಥಿತರಿದ್ದರು.

