ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನಾಡಿನಲ್ಲಿರುವ ಮಠಗಳ ದಾಸೋಹ ಹಸಿವು ನೀಗಿಸಿದರೆ ಅದರಡಿಯಲ್ಲಿರುವ ಶೈಕ್ಷಣಿಕ ಕೇಂದ್ರಗಳು ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯ ರೂಪಿಸುವ ಕೈಂಕರ್ಯ ಶ್ಲಾಘನೀಯ ಎಂದು ಗುಳೇದಗುಡ್ಡದ ನಿವೃತ್ತ ಪ್ರಾಧ್ಯಾಪಕ ಎಂ.ಪಿ.ನೀಲಕಂಠಮಠ ಹೇಳಿದರು.
ಪಟ್ಟಣದ ಈರಕಾರ ಮುತ್ಯಾ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕವು ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಮತ್ತು ಸನ್ಮಾನ ಸಮಾರಂಭದಲ್ಲಿ ದಾಸೋಹ ಮತ್ತು ಶೈಕ್ಷಣಿಕ ಕ್ರಾಂತಿಯಲ್ಲಿ ಮಠಗಳು ಕುರಿತು ಮಾತನಾಡಿದ ಅವರು, ೧೮೫೬ ರಲ್ಲಿ ಚಿತ್ರದುರ್ಗದ ಜಗದ್ಗುರುಗಳು, ಡೆಪ್ಯೂಟಿ ಚನ್ನಬಸಪ್ಪನವರು ಮೊದಲ ಘಟದಲ್ಲಿ ದಾಸೋಹ ಆರಂಭ ಮಾಡುವ ಜೊತೆಗೆ ಅಕ್ಷರ ದಾಸೋಹವನ್ನು ಆರಂಭಿಸಿದರು. ದ್ವಿತೀಯ ಘಟದಲ್ಲಿ ಧಾರವಾಡದ ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಮೂರನೇ ಘಟಕದಲ್ಲಿ ಬಂಥನಾಳ ಶ್ರೀಗಳು, ಬಾಗಲಕೋಟದಲ್ಲಿ ಗುರುಬಸವ ಸ್ವಾಮೀಜಿ, ಸುತ್ತೂರು, ತುಮಕೂರು, ಭಾಲ್ಕಿ, ಗುಳೇದಗುಡ್ಡದ ಗುರುಸಿದ್ದೇಶ್ವರರು, ಧಾರವಾಡದ ಮುರಘಾಮಠ, ಹುಬ್ಬಳ್ಳಿಯ ಮೂರುಸಾವಿರ ಮಠ, ಗದಗದ ತೋಂಟದಾರ್ಯ ಮಠ ಸೇರಿದಂತೆ ಅನೇಕ ಮಠಗಳು ಈ ನಿಟ್ಟಿನಲ್ಲಿ ಕೈಂಕರ್ಯ ಮಾಡುತ್ತಿವೆ. ಸಾಲಿಮಠವು ಇದರಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದರು.
ವಿದ್ಯಾದಾನ, ಅನ್ನದಾನ ಸೇರಿದಂತೆ ದಾನಗಳಲ್ಲಿ ೧೬ ವಿಧಗಳಿವೆ. ಇದರಲ್ಲಿರುವ ಕನ್ಯಾದಾನ ಎಂಬುವದನ್ನು ನೋಡಿದರೆ ಕನ್ಯಾ ಎಂಬುವದು ವಸ್ತುನಾ ಎಂದು ಪ್ರಶ್ನೆ ಎದುರಾಗುತ್ತದೆ. ಈ ಕಾರಣದಿಂದಾಗಿ ಇದನ್ನು ದಾನಗಳಿಂದ ಹೊರಗಿಡಬೇಕೆಂದು ಅಭಿಪ್ರಾಯ ಪಟ್ಟ ಅವರು, ಗುರು-ಲಿಂಗ-ಜಂಗಮ ಬಗ್ಗೆ ಭಕ್ತಿ ಹೊಂದಿರಬೇಕು. ವೀರಶೈವ ಲಿಂಗಾಯತ ಅನ್ನದೇ ತತ್ವವೇ ಶ್ರೇಷ್ಠ ಎಂಬುವದನ್ನು ಅರಿತುಕೊಂಡು ನಡೆಯಬೇಕಾದ ಅಗತ್ಯವಿದೆ. ಮಠಗಳ ಸಂಸ್ಕ್ರತಿಯಲ್ಲಿ ಬೆಳೆಯುವವರು ಉನ್ನತ ವಿಚಾರಧಾರೆ ಹೊಂದಿರುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವ್ಹಿ.ಸಿ.ನಾಗಠಾಣ ಮಾತನಾಡಿ, ದಕ್ಷಿಣ ಕರ್ನಾಟಕದಲ್ಲಿ ವೀರಶೈವ, ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಅನ್ನುವ ರೂಢಿಯಿದೆ. ಇವೆರಡೂ ಒಂದೇಯಾಗಿದೆ. ಹಿಂದೆ ಸಿದ್ದರಾಮಯ್ಯನವರ ಬೆಂಬಲದೊಂದಿಗೆ ಎಂ.ಬಿ.ಪಾಟೀಲರು, ಬಸವರಾಜ ಹೊರಟ್ಟಿ, ವಿನಯ ಕುಲಕರ್ಣಿ ಇವರೆಲ್ಲರೂ ಸೇರಿ ಲಿಂಗಾಯತ ಹೋರಾಟ ಆರಂಭಿಸಿ ಗೊಂದಲ ಸೃಷ್ಟಿಸಿದರು. ವಿಜಯಪುರದಲ್ಲಿನ ವೀರಶೈವ ಲಿಂಗಾಯತ ಭವನದಲ್ಲಿ ಸಮಾಜದ ಬಡಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಲಿಂಗಾಯತ ಎಂದು ಕಟ್ಟುನಿಟ್ಟಾಗಿ ಹೇಳುವವರು ತಮ್ಮ ಮನೆಗಳಲ್ಲಿನ ಜಗಲಿಗಳ ಮೇಲೆ ಕೇವಲ ಲಿಂಗವೊಂದನ್ನೇ ಇರಿಸಿ ಪೂಜೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಸಾನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಾನಗಲ್ ಕುಮಾರಸ್ವಾಮೀಜಿಯವರು ಮಹಾಸಭಾ ಹುಟ್ಟು ಹಾಕಿದರು. ಇಂದು ಲಿಂಗಾಯತ, ವೀರಶೈವ ಬೇರೆ ಬೇರೆ ಎಂದು ಹೇಳುತ್ತಿರುವದು ಸರಿಯಾದುದಲ್ಲ. ಇವೆರಡು ಒಂದೇ ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಸಾಹಿತಿ ಸಹದೇವ ಗುಡದಿನ್ನಿ ಮಾತನಾಡಿದರು.
ವೇದಿಕೆಯಲ್ಲಿ ಮಹಾಸಭಾದ ನಿರ್ದೇಶಕ ಬಿ.ಎಸ್.ಬಿರಾದಾರ ಇದ್ದರು. ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ಸಂಗಮ ಪ್ರಾಸ್ತವಿಕವಾಗಿ ಮಾತನಾಡಿದರು. ಶಿವು ಹೆರಕಲ್ ಪ್ರಾರ್ಥಿಸಿದರು. ಶಶಿ ಪಾಟೀಲ ಸ್ವಾಗತಿಸಿದರು. ಪ್ರಭಾಕರ ಖೇಡದ ನಿರೂಪಿಸಿದರು. ಶ್ರೀಶೈಲ ಶಿರಗುಪ್ಪಿ ವಂದಿಸಿದರು. ಬಸವನಬಾಗೇವಾಡಿಯ ಎಲ್ಟಿ ನಂ-೨ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಜ್ಞಾನಭಾರತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ವಚನ ನೃತ್ಯ ಜರುಗಿತು. ಇದೇ ಸಂದರ್ಭದಲ್ಲಿ ಮಹಾಸಭಾದ ಇಂಡಿ ತಾಲೂಕಿನ ಅಧ್ಯಕ್ಷ ಪ್ರಭುಲಿಂಗ ಕತ್ತಿ, ಮುದ್ದೇಬಿಹಾಳದ ವೆಂಕನಗೌಡ ಪಾಟೀಲ, ಸಿಂದಗಿಯ ಅಶೋಕ ವಾರದ, ವಿಜಯಪುರದ ಬಸವರಾಜ ಇಟ್ಟಂಗಿ, ಬಸವನಬಾಗೇವಾಡಿ ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

