ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿದ್ಯಾರ್ಥಿಗಳು ಶ್ರದ್ಧೆ, ನಂಬಿಕೆ, ಆತ್ಮವಿಶ್ವಾಸ ಇಟ್ಟುಕೊಳ್ಳುವ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಳೇವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಸಂಗಮೇಶ ಪೂಜಾರಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ ಎಂದರೆ ಶಿಸ್ತು. ಇಂದು ವಿಜ್ಞಾನವೇ ಯುಗಧರ್ಮವಾಗಿದೆ. ವಿಜ್ಞಾನದಲ್ಲಿಯಾಗಿರುವ ಅನೇಕ ಸಂಶೋಧನೆಗಳಿಂದ ಜಗತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ವಿಜ್ಞಾನಧರ್ಮವನ್ನು ಇಟ್ಟುಕೊಂಡು ಧರ್ಮವನ್ನು ನೋಡಬೇಕು. ನಂಬಿಕೆ, ಶ್ರದ್ಧೆ ಇಟ್ಟುಕೊಂಡು ಇಡೀ ಸಮುದಾಯ ಬದುಕುತ್ತದೆ. ಜಗತ್ತಿನ ಅಭಿವೃದ್ಧಿಗೆ ವಿಜ್ಞಾನ ಪೂರಕವಾಗಿದೆ. ಧರ್ಮದಲ್ಲಿ ವಿಜ್ಞಾನ ಹೆಚ್ಚು ತರುವಂತಾಗಬಾರದು. ಅಕ್ಷರ ಕಲಿತವರು ರಾಕ್ಷಸರಾಗಬೇಕಾಗುತ್ತದೆ. ಮೌಲ್ಯಯುತವಾಗಲು ಸಾಧ್ಯವಾಗುವುದಿಲ್ಲ . ಪ್ರತಿಯೊಬ್ಬರೂ ಸಮಸ್ಯೆ ನಮ್ಮವು ಅಂದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆಧುನಿಕತೆಯಲ್ಲಿ ಸಮಯ, ಹಣ, ಶ್ರಮ ಕಡಿಮೆಯಾಗುವಂತೆ ಮಾಡುವ ಕಡೆಗೆ ಹೆಚ್ಚು ಯುವಜನಾಂಗ ಗಮನ ಹರಿಸಬೇಕು. ನಮ್ಮ ದೇಶವು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದೆ. ಕೋವಿಡ್ ಲಸಿಕೆಯನ್ನು ಅನೇಕ ದೇಶಗಳಿಗೆ ಕಳುಹಿಸಿಕೊಟ್ಟಿದ್ದು ನಮ್ಮ ವೈಜ್ಞಾನಿಕ ಸಾಧನೆಯ ಮೈಲುಗಲ್ಲುಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡುವಂತಾಗಬೇಕೆಂದರು.
ಪಿಎಸ್ಐ ಆರ್.ಐ.ದುಂಡಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಂಡರೆ ತಾವು ಅಂದುಕೊಂಡ ಗುರಿ ತಲುಪಲು ಸಾಧ್ಯ. ಇಂದು ವಿದ್ಯಾರ್ಥಿಗಳಲ್ಲಿ ಹೆಚ್ಚು ಅಶಿಸ್ತು ಕಂಡುಬರುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕೆಟ್ಟ ಚಟಗಳಿಗೆ ದಾಸರಾಗದೇ ಉತ್ತಮ ಅಧ್ಯಯನ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಉತ್ತಮ ಅಧ್ಯಯನ ಮಾಡದೇ ಹೋದರೆ ಮುಂದೆ ಪಶ್ಚಾತ್ತಾಪ ಪಡುವಂತಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ರಾಮಚಂದ್ರ ಪವಾರ ವಹಿಸಿದ್ದರು. ವೇದಿಕೆಯಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ, ನಿವೃತ್ತ ಮುಖ್ಯಗುರು ಎಸ್.ಕೆ.ಚಿಕರಡ್ಡಿ, ಸೈನಿಕ ಶಾಲೆಯ ಪ್ರೊ.ಎಂ.ಎಂ.ಕಿನಾಳ ಇದ್ದರು. ಎಂ.ಕೆ.ಯಾದವ ಸ್ವಾಗತಿಸಿದರು. ಅರ್ಚನಾ ದಂಡಾವತಿ ನಿರೂಪಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ೨೫ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ತಳೇವಾಡದ ಎಸ್ಬಿಎನ್ಎನ್ಜಿಎಚ್ಎಸ್ ಶಾಲೆಯ ಸುನೀಲ ಚವ್ಹಾಣ ಅವರ ತಂಡ (ಪ್ರಥಮ), ಬಸವನಬಾಗೇವಾಡಿಯ ಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ಸ್ವಾತಿ ನಾಯ್ಕರ್ ಅವರ ತಂಡ(ದ್ವಿತೀಯ), ಮಸಬಿನಾಳದ ಎನ್ಇಎಚ್ಎಸ್ ಪ್ರೌಢಶಾಲೆಯ ಸ್ನೇಹಾ ಲಮಾಣಿ (ತೃತೀಯ) ಬಹುಮಾನ ಪಡೆದುಕೊಂಡರು. ಸಮಾಧಾನಕರ ಬಹುಮಾನವನ್ನು ಬಸವನಬಾಗೇವಾಡಿಯ ಜಿಜಿಎಚ್ಎಸ್ ಶಾಲೆಯ ಸುಕನ್ಯಾ ಮುಟೇಕರ, ತಳೇವಾಡದ ಎಸ್ಬಿಎನ್ಎನ್ಜಿಎಚ್ಎಸ್ ಶಾಲೆಯ ಶ್ರೀಶೈಲ ಮರಣೂರ, ಬಸವನಬಾಗೇವಾಡಿಯ ಬಿಇಎಂಎಸ್ ಶಾಲೆಯ ಸಮರ್ಥ, ರಿತೀಷಾ ನಾಗೋಡ ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮಃ ಬೆಳಗ್ಗೆ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಗೊಳಸಂಗಿ ಆರ್.ಎ.ಡಿ.ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಎಸ್.ಕೆ.ಚಿಕರಡ್ಡಿ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ವಿಷಯ ಗ್ರಾಮೀಣ ಪ್ರದೇಶವಾಗಿರಲಿ, ಯಾವುದೇ ಪ್ರದೇಶವಾಗಿರಲಿ ಎಲ್ಲರಿಗೂ ಒಂದೇಯಾಗಿದೆ. ಇದನ್ನು ಆಸಕ್ತಿಯಿಂದ ಅಧ್ಯಯನ ಮಾಡುವಂತಾಗಬೇಕು. ವಿದ್ಯಾರ್ಥಿಗಳು ಸಂಶೋಧನಾತ್ಮಕ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ವಿಜಯಪುರ ಸೈನಿಕ ಶಾಲೆಯ ಭೌತಶಾಸ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಂ.ಕಿನಾಳ ಮಾತನಾಡಿದರು. ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ರಾಮಚಂದ್ರ ಪವಾರ ಪ್ರಾಸ್ತವಿಕವಾಗಿ ಮಾತನಾಡಿದರು. ಎಂ.ಕೆ.ಯಾದವ ಸ್ವಾಗತಿಸಿದರು. ಅರ್ಚನಾ ದಂಡಾವತಿ ನಿರೂಪಿಸಿದರು. ಲಕ್ಷ್ಮಣ ಬ್ಯಾಡಗಿ ವಂದಿಸಿದರು.

