ಕೈಗೆತ್ತಿಗೊಂಡ ೨೬೮೬ ಪ್ರಕರಣಗಳಲ್ಲಿ ಒಟ್ಟು ೧೬೯೫ ಪ್ರಕರಣಗಳು ರಾಜಿ ಸಂಧಾನ ಮೂಲಕ ಇತ್ಯರ್ಥ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು. ಲೋಕ ಅದಾಲತ್ನಲ್ಲಿ ನಾಲ್ಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಒಟ್ಟು ೮೩೯೮ ಬಾಕಿಯಿರುವ ಪ್ರಕರಣಗಳಲ್ಲಿ ೨೬೮೬ ಪ್ರಕರಣಗಳನ್ನು ಕೈಗೆತ್ತಿಗೊಂಡು ಇದರಲ್ಲಿ ಒಟ್ಟು ೧೬೯೫ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.
ಅವುಗಳಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ ಪ್ರಕರಣಗಳು, ಮೆಂಟೆನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್ಎಸಿ ಇಸಿ ಪ್ರಕರಣಗಳು, ಎಂವಿಸಿ ಇಸಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಅಬಕಾರಿ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು ಒಟ್ಟು ಸೇರಿ ೩೬೧೪ ಪ್ರಕರಣಗಳಲ್ಲಿ ೨೭೬೧ ಪ್ರಕರಣಗಳು ರಾಜಿ ಸಂಧಾನದ ಮೂಲಕ ವಿವಿಧ ನ್ಯಾಯಾಽಶರು ಇತ್ಯರ್ಥಪಡಿಸಿದರು.
ವಿಚ್ಛೇಧನ ಕೋರಿ ನ್ಯಾಯಾಲಯ ಮೆಟ್ಟಿಲೇರಿದ ಒಂದು ಜೋಡಿಯು ನ್ಯಾಯಾಧೀಶೆ ತೇಜಶ್ವಿನಿ ಸೊಗಲದ ಅವರ ಸಮ್ಮುಖದಲ್ಲಿ ನಡೆದ ಯಶಸ್ವಿ ಸಂಧಾನದದಲ್ಲಿ ಪುಷ್ಪಮಾಲೆ ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತೆ ಒಂದಾದರು.
ವಿವಿಧ ಪ್ರಕರಣಗಳನ್ನು ತಾಲೂಕು ಸೇವಾ ಸಮಿತಿ ಅಧ್ಯಕ್ಷೆ, ನ್ಯಾಯಾಧೀಶೆ ತಯ್ಯಾಬಾ ಸುಲ್ತಾನಾ, ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಈಶ್ವರ ಮುಸ್ಮಲಾರಿ, ಸಮಿತಿಯ ಸದಸ್ಯ ಕಾರ್ಯದರ್ಶಿ, ಸಿವ್ಹಿಲ್ ನ್ಯಾಯಾಧೀಶೆ ತೇಜಶ್ವಿನಿ ಸೊಗಲದ, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಅವರು ಇತ್ಯರ್ಥಪಡಿಸಿದರು.
ಲೋಕ ಅದಾಲತ್ನಲ್ಲಿ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ವಕೀಲರು, ಕಂದಾಯ ಇಲಾಖೆಯ ಅಧಿಕಾರಿಗಳು, ವಿಮಾ ಕಂಪನಿಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಕ್ಷಿದಾರರು, ನ್ಯಾಯಾಲಯದ ಸಿಬ್ಬಂದಿ ಭಾಗವಹಿಸಿದ್ದರು.

