ಹಿರಿಯ ಲೇಖಕ ಚನ್ನವೀರಸ್ವಾಮಿ ಹಿರೇಮಠ ಸರ್ವಾಧ್ಯಕ್ಷತೆಯಲ್ಲಿ ಆಲಮೇಲ ತಾಲ್ಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನ B*
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಶನಿವಾರ ದಿ.೧೪ರಂದು ಆಲಮೇಲ ತಾಲ್ಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದ್ದು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ತಿಳಿಸಿದರು.
ಹಿರಿಯ ಲೇಖಕ, ಕಲಾವಿದ ಚನ್ನವೀರಸ್ವಾಮಿ ಹಿರೇಮಠ ಅವರು ಸಮ್ಮೇಳನಾಧ್ಯಕ್ಷರಾಗಿದ್ದು, ಬೆಳಿಗ್ಗೆ ಧ್ವಾಜಾರೋಹಣದೊಂದಿಗೆ ಸಮ್ಮೇಳನ ಸಡಗರಕ್ಕೆ ಚಾಲನೆ ಸಿಗಲಿದೆ. ಬೆ.೮.೩೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಚಾಲನೆ ನೀಡುವರು. ಬೆಳಿಗ್ಗೆ ೧೦ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಶಾಸಕ ಅಶೋಕ ಮನಗೂಳಿ ಉದ್ಘಾಟನೆವ ನೆರವೇರಿಸುವರು. ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಮಾಜಿ ಶಾಸಕ ರಮೇಶ ಭೂಸನೂರ ಸ್ಮರಣ ಸಂಚಿಕೆ ಹಾಗೂ ಸಮ್ಮೇಳನಾಧ್ಯಕ್ಷರ ನುಡಿಪುಸ್ತಕವನ್ನು ಮಾಜಿ ಶಾಸಕ ಅರುಣ ಶಹಾಪೂರ ಬಿಡುಗಡೆ ಮಾಡುವರು. ಸಮ್ಮೇಳನಾಧ್ಯಕ್ಷ ಚನ್ನವೀರಸ್ವಾಮಿ ಹಿರೇಮಠ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಿದ್ಧರಾಮ ಉಪ್ಪಿನ ಕಸಾಪ ಧ್ವಜ ಹಸ್ತಾಂತರಿಸಲಿದ್ದಾರೆ, ವಿವಿಧ ಮಠಾದೀಶರು, ಗಣ್ಯರು, ಸಾಹಿತಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಬೆ.೧೨.೩೦ಕ್ಕೆ ಗೋಷ್ಠಿ೧ : ’ವಚನ ಸಾಹಿತ್ಯ’ ಕುರಿತಾಗಿ ವಿಜಯಪುರದ ನ್ಯಾಯವಾದಿ ಮಹ್ಮದಗೌಸ್ ಹಾಗೂ ಶಿಲ್ಪಾ ಬಸ್ಮೆ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಸಾಹಿತಿ ಸಿ.ಎಂ.ಬಂಡಗಾರ ಗೋಷ್ಠಿಯನ್ನು ಉದ್ಘಾಟನೆ ಮಾಡಲಿದ್ದು ವಿವೇಕಾನಂದ ಪಾಟೀಲ ಅಧ್ಯಕ್ಷತೆ ವಹಿಸುವರು, ಶಂಕರಾನಂದ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ.
ಮ. ೨.೩೦ಕ್ಕೆ ೨ನೇ ಗೋಷ್ಠಿಯಲ್ಲಿ ’ಜಾನಪದ ಸಂಭ್ರಮ’ ವಿಷಯದಲ್ಲಿ ತಾಳಿಕೋಟೆಯ ಅಶೋಕ ಹಂಚಲಿ ಹಾಗೂ ಶಿವಲೀಲಾ ಮುರಾಳ ಉಪನ್ಯಾಸ ನೀಡಲಿದ್ದಾರೆ. ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಾಳನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಜಾನಪದ ವಿದ್ವಾಂಸ ಪ್ರೊ.ಬಿ.ಎನ್.ಪಾಟೀಲ ಉದ್ಘಾಟನೆ ಮಾಡಲಿದ್ದಾರೆ. ಬ್ರಹ್ಮಕುಮಾರಿ ರೇಣುಕಾ ಅಕ್ಕ ಸಾನಿಧ್ಯವಹಿಸಲಿದ್ದಾರೆ.
ಸಂಜೆ ೪.೩೦ಕ್ಕೆ ೩ನೇ ಗೋಷ್ಠಿ ’ಕವಿಗೋಷ್ಠಿ’ ನಡೆಯಲಿದ್ದು ಹಿರಿಯ ಕವಿಯತ್ರಿ ಭಾರತಿ ಪಾಟೀಲ ಉದ್ಘಾಟನೆ ಮಾಡುವರು, ಸಾಹಿತಿ ರಾ.ಶಿ.ವಾಡೇದ ಅಧ್ಯಕ್ಷತೆ ವಹಿಸಲಿದ್ದಾರೆ. ಆರೂಢಮಠದ ಬಸವಲಿಂಗ ಶರಣರು ಸಾನಿಧ್ಯವಹಿಸಲಿದ್ದಾರೆ. ೨೪ಜನ ಕವಿಗಳು ತಮ್ಮ ಕವಿತೆ ವಾಚಿಸಲಿದ್ದಾರೆ.
ಸಂಜೆ ೭ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದ್ದು ಕಸಾಪ ತಾಲ್ಲೂಕು ಅಧ್ಯಕ್ಷ ಶಿವಶರಣ ಗುಂದಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೋಶಾಧ್ಯಕ್ಷ ರಮೇಶ ಬಂಟನೂರು ನಿರ್ಣಯಗಳ ಮಂಡನೆ ಮಾಡಲಿದ್ದಾರೆ.
ಸಂಜೆ ೭.೩೦ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ಪ್ರೊ.ಶಾಂತೂ ಹಿರೇಮಠ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವಿಧ ಮಠಾದೀಶರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನೂರಕ್ಕೂ ಹೆಚ್ಚುಜನ ಸಾಧಕರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ.
ಮೆರವಣಿಗೆಯಲ್ಲಿ ಕಲಾತಂಡಗಳು ಹಾಗೂ ಸಾಂಸ್ಕೃತಿಕ ಸೌರಭದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಕಲಾಪ್ರದರ್ಶನ ಮಾಡಲಿದ್ದಾರೆ ಎಂದು ಅಧ್ಯಕ್ಷ ಶಿವಶರಣ ಗುಂದಗಿ ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷರ ಪರಿಚಯ
ಚನ್ನವೀರಸ್ವಾಮಿ ಹಿರೇಮಠ ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮದವರು. ಜನ್ಮಭೂಮಿ ಕಡಣಿಯಾದರೆ ಕರ್ಮಭೂಮಿ ಗದಗ ಅವರ ಕಾರ್ಯಕ್ಷೇತ್ರ, ಎಳೆವಯಸ್ಸಿನಲ್ಲಿ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರವನ್ನು ಅರಸಿಕೊಂಡು ಹೋದವರು ಕಡಣಿ ಶಾಸ್ತ್ರಿಗಳೆಂದು ಎಲ್ಲರಿಗೂ ಪರಿಚಿತರಾಗಿದ್ದಾರೆ. ಹತ್ತಕ್ಕೂ ಹೆಚ್ಚು ಸೃಜನ ಮತ್ತು ಸೃಜನೇತರ ಕೃತಿಗಳನ್ನು, ಇಪ್ಪತ್ತಕ್ಕೂ ಹೆಚ್ಚು ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ. ಸಂಘಟನೆಯಲ್ಲಿ ಇವರದು ಅಮೋಘಕಾರ್ಯ, ಬೇರೆಬೇರೆ ರಾಜ್ಯಗಳಲ್ಲೂ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಕಲಾವಿಕಾಸ ಪರಿಷತ್ತು ಹುಟ್ಟುಹಾಕಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಮಾಡುವಲ್ಲಿ ಪ್ರಮುಖ ಪಾತ್ರ ಇವರದು.
ಸಂಘಟನೆ ಮತ್ತು ಹೋರಾಟ ಎರಡನ್ನೂ ಮೈಗೂಡಿಸಿಕೊಂಡ ಶಾಸ್ತ್ರಿಗಳು ಪುರಾಣ ಪ್ರವಚನಗಳನ್ನು ನಾಡಿನಾದ್ಯಂತ ನೀಡಿದ್ದಾರೆ. ಕಲಾವಿದರಾಗಿಯೂ ಪೇಂಟಿಂಗ್ ಚಿತ್ರಗಳನ್ನು ಬಿಡಿಸುವದರಲ್ಲಿ ನಿಪುಣರು. ಕಲೆ, ಸಾಹಿತ್ಯ ಸಂಗೀತ, ಸಂಘಟನೆ ಮತ್ತು ಹೋರಾಟದ ಬದುಕು ಚನ್ನವೀರಸ್ವಾಮಿಗಳದ್ದು. ಇಂದು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಭಾಜನರಾಗಿದ್ದಾರೆ.

