ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಗ್ರಂಥಾಲಯಗಳು ಜ್ಞಾನದ ಹೆಬ್ಬಾಗಿಲುಗಳಾಗಿವೆ. ಪ್ರತಿಯೊಬ್ಬರೂ ಗ್ರಂಥಾಲಯಗಳ ಲಾಭವನ್ನು ಪಡೆದುಕೊಳ್ಳಬೇಕೆಂದು ಎಂದು ವಿಜಯಪುರದ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದ ಗ್ರಂಥಪಾಲಕ ಡಾ.ಎಂ.ಎಂ.ಬಾಚಲಾಪೂರ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಪ್ರಸ್ತುತ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದರೂ ವಿದ್ಯಾರ್ಥಿಗಳಲ್ಲಿ ಜ್ಞಾನದ ಮಟ್ಟ ಏರುಗತಿಯಲ್ಲಿ ಕಂಡುಬರುತ್ತಿಲ್ಲ. ಹತ್ತು ಹದಿನೈದು ವರ್ಷಗಳ ಹಿಂದೆ ಹಳ್ಳಿಗಳಲ್ಲಿನ ಗ್ರಂಥಾಲಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಓದುಗರು ಸಿಗುತ್ತಿದ್ದರು. ಆದರೆ ಇಂದು ಓದುವ ಹವ್ಯಾಸ ಕಡಿಮೆಯಾಗುತ್ತಿದಯೇ ಎಂಬ ಪ್ರಶ್ನೆ ಮೂಡುವಂತಾಗಿದೆ. ನಿರಂತರ ಓದುವಿಕೆಯನ್ನು ಇಟ್ಟುಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್, ಇಂದಿನ ರಾಜ್ಯಸಭೆ ಸದಸ್ಯೆ ಡಾ.ಸುಧಾಮೂರ್ತಿ ಅವರಂತಹ ವ್ಯಕ್ತಿಗಳು ನಮಗೆ ಆದರ್ಶವಾಗಬೇಕಿದೆ ಎಂದರು.
ಪ್ರಪಂಚದಲ್ಲಿಯೇ ಭಾರತವು ಒಂದು ತುಂಬಾ ವಿಶಿಷ್ಠ ದೇಶವಾಗಿದೆ. ನಾಗರಿಕತೆಗಳು ಕಣ್ಣು ಬಿಡುವದಕ್ಕಿಂತ ಮುನ್ನವೇ ದೇಶದಲ್ಲಿ ಸ್ಥಿರವಾದ ಜೀವನ ನಡೆದಿತ್ತು.ಪ್ರಪಂಚವು ಅಕ್ಷರಜ್ಞಾನ ಪಡೆಯುವಾಗಲೇ ಪ್ರಾಚೀನ ಭಾರತದಲ್ಲಿ ಸರ್ವಶ್ರೇಷ್ಠವಾದ ಗ್ರಂಥಾಲಯಗಳು ತಲೆಯೆತ್ತಿದ್ದು ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು. ಸಮಾರಂಭದಲ್ಲಿ ರಾಜ್ಯಶಾಸ್ತ್ರ, ಐಕ್ಯೂಎಸಿ ಸಂಯೋಜಕ ದಿಲೀಪಕುಮಾರ, ಗ್ರಂಥಾಲಯ ಸಹಾಯಕ ಸಿಬ್ಬಂದಿ ರೇಣುಕಾ ಹೇರಾನವರ ಇತರರು ಇದ್ದರು. ಕೀರ್ತಿ ಬೀರಕಬ್ಬಿ ಸ್ವಾಗತ ಗೀತೆ ಹಾಡಿದರು. ಡಾ.ಬಿ.ಎಂ.ಸಾಲವಾಡಗಿ ಸ್ವಾಗತಿಸಿದರು. ಪ್ರೀತಿ ಚವ್ಹಾಣ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ರಂಗೋಲಿ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

