ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಪ್ರಸ್ತುತ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ತಯಾರಿಗೆ ಮಕ್ಕಳು ಈಗಿಂದಲೇ ಮಾನಸಿಕವಾಗಿ ಸಿದ್ದತೆಗೊಳ್ಳಬೇಕು. ಆ ದಿಸೆಯಲ್ಲಿ ಎಲ್ಲ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷಾ ಮುಖ್ಯ ವಾಹಿನಿಗೆ ತರಲು ಶಿಕ್ಷಕರು ಪ್ರಯತ್ನಿಸಬೇಕಲ್ಲದೇ ಫಲಿತಾಂಶ ಸುಧಾರಣೆಗೆ ನಿರಂತರ ಶ್ರಮ ವಹಿಸಬೇಕು ಎಂದು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉಪನಿದೇ೯ಶಕರ ಕಚೇರಿಯ ವಿಜ್ಞಾನ ವಿಷಯ ಪರಿವೀಕ್ಷಕ ಎಂ.ಎಸ್.ನ್ಯಾಮಗೌಡ ಸಲಹೆಯಿತ್ತರು.
ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆಗೆ ಪರೀಕ್ಷಾ ಪೂರ್ವ ತಯಾರಿ ಹಾಗೂ ಪಠ್ಯ ವಿಷಯ ಕುರಿತು ಸಂವಾದ ನಡೆಸಿದ ಅವರು, ಪರೀಕ್ಷೆಗೆ ಸಿದ್ದರಾಗಲು ಈಗಿನಿಂದಲೇ ಸಕಲ ಓದಾಭ್ಯಾಸದ ತಯಾರಿ ಮಾಡಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸನ್ನದ್ಧರಾಗಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಮಕ್ಕಳ ಕಲಿಕಾ ಹಾಗೂ ಫಲಿತಾಂಶ ಪ್ರಗತಿಗೆ ಶಿಕ್ಷಕರು ಒತ್ತು ನೀಡಬೇಕು. ಈ ಬಾರಿ ಗ್ರೇಡ್ ಅಂಕಗಳಿಲ್ಲ.ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿವೆ. ಕಟ್ಟುನಿಟ್ಟಾಗಿ ಪರೀಕ್ಷೆಗಳು ಜರುಗಲಿವೆ. ಇದನ್ನು ಮಕ್ಕಳು ಹಾಗೂ ಶಿಕ್ಷಕರು ಸೂಕ್ಷ್ಮತೆಯಿಂದ ಗಮನಿಸಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ಮುಂದಾಗಬೇಕು ಎಂದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಕಡ್ಡಾಯವಾಗಿ ಯತ್ನಿಸಿ. ಪರೀಕ್ಷಾ ಫಲಿತಾಂಶವೇ ನಮಗೆಲ್ಲ ಮುಖ್ಯ ಮಾನದಂಡ. ಇದನ್ನು ಮನಗಂಡು ಅಚ್ಚುಕಟ್ಟಾಗಿ ಸಮನ್ವಯತೆಯಿಂದ ಕಾಯಕ ಗೈದು ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಪ್ರೇರೇಪಿಸಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ನಿತ್ಯ ಬೆಳಿಗಿನ ಜಾವ ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರಿಗೆ ಪೋನ ಕರೆ ಮಾಡಲಾಗುತ್ತಿದೆ. ಮಕ್ಕಳನ್ನು ಎಬ್ಬಿಸಿ ಅಭ್ಯಾಸದಲ್ಲಿ ನಿರತರಾಗುವಂತೆ ಮುತುವರ್ಜಿ ವಹಿಸಬೇಕೆಂದು ಕೋರಲಾಗುತ್ತಿದೆ. ತಮ್ಮ ಶಿಕ್ಷಕರ ಕರೆಗೆ ಸ್ಪಂದಿಸಿ ಮಕ್ಕಳನ್ನು ಎಬ್ಬಿಸಿ ಅಭ್ಯಾಸ ಪ್ರಕ್ರಿಯೆಯಲ್ಲಿ ಪಾಲಕರು ಸಹಕಾರ ನೀಡುತ್ತಿದ್ದಾರೆ.ಶಾಲೆಯಲ್ಲಿ ಗುಂಪು ಅಭ್ಯಾಸ, ರಸಪ್ರಶ್ನೆ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಪಾಠ ಪ್ರವಚನ ನಡೆಸಲಾಗುತ್ತಿದೆ.ಮಕ್ಕಳ ಅಭ್ಯುದಯಕ್ಕೆ ಇಲ್ಲಿ ಕಾಳಜಿ ವಹಿಸಲಾಗಿದೆ.ಫಲಿತಾಂಶ ವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಈ ವೇಳೆ ವಿಷಯ ಪರಿವೀಕ್ಷಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಷಯ ಪರಿವೀಕ್ಷಕ ಎಂ.ಎಸ್.ನ್ಯಾಮಗೌಡ ಅವರನ್ನು ಶಾಲೆ, ಸಂಸ್ಥೆಯ ಪರವಾಗಿ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಹಾಗೂ ಸಿಬ್ಬಂದಿಗಳು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ವಿಶ್ರಾಂತ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ, ಗುಲಾಬಚಂದ ಜಾಧವ, ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಸಹನಾ ಕಲ್ಯಾಣಿ (ಹತ್ತಳ್ಳಿ), ಪ್ರಮೀಳಾ ತೇಲಸಂಗ ಇತರರಿದ್ದರು.

