ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಭಗವದ್ಗೀತೆ ಭಗವಂತ ಕೊಟ್ಟ ಹಾಲು. ಅದು ಅತ್ಯಂತ ಪೌಷ್ಠಿಕವಾಗಿದ್ದು, ಭಗವಂತನ ಮಕ್ಕಳಾದ ನಮಗೆಲ್ಲ ತಾಯಿಯ ಹಾಲಿದ್ದಹಾಗೆ. ಇವತ್ತು ಕಲಬೆರಿಕೆ ಹಾಲನ್ನ ಕುಡಿದು ನಮ್ಮ ಆರೋಗ್ಯವನ್ನು ಸಾಕಷ್ಟು ಹಾಳು ಮಾಡಿಕೊಂಡಿದ್ದೇವೆ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಯತಿವರೇಣ್ಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಶ್ರೀ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ರವಿವಾರ ಭಗವದ್ಗೀತಾ ಅಭಿಯಾನ ತಾಲೂಕು ಸಮೀತಿ ಮತ್ತು ಶ್ರೀ ರಾಘವೇಂದ್ರ ಮಠದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತಾ ಅಭಿಯಾನ ಜಾಗೃತಿ ಕಾರ್ಯಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಕಲಬೆರೆಕೆ ಹಾಲುಗಳಿಂದ ನಮ್ಮ ಬದುಕು ಹಾಳಾಗುತ್ತಿದೆ. ಸಧ್ಯ ಶುದ್ಧ ವಿಚಾರ ಶುದ್ಧ ಹಾಲಿನ ಮೂಲಕ ಆರೋಗ್ಯವಂತರಾಗುವ ಅವಶ್ಯಕತೆ ನಮಗೆಲ್ಲ ಇದೆ. ಹಾಗಾಗಿ ಭಗವದ್ಗೀತೆ ಎಂಬ ಹಾಲನ್ನ ಎಲ್ಲರು ಕುಡಿಯಿರಿ. ಸಾಧ್ಯವಾದಷ್ಟು ಜನಕ್ಕೆ ಕುಡಿಸಿ ಸಮಾಜವನ್ನು ಪುಷ್ಠವನ್ನಾಗಿಸಿ ಎನ್ನುವದು ನಮ್ಮ ಕಳಕಳಿ ಎಂದರು.
ಈ ಬಾರಿಗೆ ಭಗವದ್ಗೀತಾ ಜಯಂತಿ ಡಿ.೧೧ ರಂದು ಬಂದಿದೆ. ಆದಿನ ಸಮಗ್ರ ಭಗವದ್ಗೀತೆ ಪಠಣ ಮಾಡುವ ರೂಢಿ ನಮಗೆ ಬರಬೇಕು. ದೇವಸ್ಥಾನಗಳಲ್ಲಿ, ಶಾಲೆಗಳಲ್ಲಿ ಭಗವದ್ಗೀತೆಯನ್ನು ಪಠಿಸುವ ರೂಢಿಯನ್ನು ನಾವು ತರಬೇಕು. ಹಾಗಾದಾಗ ಮಾತ್ರ ನಮ್ಮ ಜೀವನದಲ್ಲಿ ಭಗವದ್ಗೀತೆ ಹಾಸು ಹೊಕ್ಕಾಗಿ ಪ್ರವೇಶ ಮಾಡುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶೀವಾಚಾರ್ಯರು ಮಾತನಾಡಿ ಭಾರತದಲ್ಲಿ ಎಷ್ಟೋ ಜನ ಪಂಚಾಗವನ್ನು, ವೇದಗಳನ್ನು ವಿರೋಧ ಮಾಡುವ ಎಡಪಂತೀಯರ ವಾದಗಳಿಗೆ ಧರ್ಮಗ್ರಂಥಗಳು ತತ್ತರಿಸಿ ಹೋಗುತ್ತಿವೆ. ಭಾರತದ ಸಂಸ್ಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಚರ್ವಿತ, ಚರ್ವಣ ವಿತಂಡ ವಾದ ಮಾಡಿವವರಿಗೆ ಉತ್ತರಿಸುವದು ಕಷ್ಟವಾಗಿದೆ ಎಂದರು.
ತಂಗಡಗಿಯ ಹಡಪದ ಅಪ್ಪಣ್ಣ ಸಂಸ್ಥಾನ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು ಮಾತನಾಡಿ ಭಗವಂತ ಅಂದರೆ ಕರಪೂರದ ಗೊಂಬೆ ಎಂದು ಭಾವಿಸಿದ್ದೇವೆ. ಯಾರ ಮನಸ್ಸು ಪವಿತ್ರವಾಗಿದೆಯೋ, ಯಾರ ಮನಸ್ಸು ಸ್ವಚ್ಛವಾಗಿದೆಯೋ ಅಲ್ಲಿ ಭಗವಂತನಂನ್ನು ಕಾಣಲು ಸಾಧ್ಯ. ಮನುಕುಲವನ್ನು ಬಿತ್ತಿ ಬೆಳೆಯಲು ಭಗವದ್ಗೀತಾ ಅಭಿಯಾನ ಪ್ರಾರಂಭಿಸಲಾಗಿದೆ. ಜಾತಿ ಮತ ಪಂಥ ಎನ್ನದೇ ಎಲ್ಲರೂ ಭಾಗಿಯಾಗಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ತಂಗಡಗಿಯ ಸಿದ್ಧಾರೂಢ ಮಠದ ಮಾಧವಾನಂದ ಭಾರತೀ ಮಹಾಸ್ವಾಮಿಗಳು, ಪಟ್ಟಣದ ಕಡಕೋಳ ಆಶ್ರಮದ ಶೋಭಾತಾಯಿ ಶರಣಮ್ಮನವರು, ರೂಢಗಿ ಮಾದರ ಚನ್ನಯ್ಯ ಆಶ್ರಮದ ಶರಣಮ್ಮನವರು ಸಾನಿಧ್ಯವಹಿಸಿದ್ದರು. ಮುಖಂಡ ಪ್ರಭು ಕಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನ ಸ್ಪರ್ದೆಯಲ್ಲಿ ಭಾಗಿಯಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಮೆಡಲ್ ನೀಡಿ ಗೌರವಿಸಲಾಯಿತು. ಶಿಕ್ಷಕಿ ರಂಜಿತಾ ಹೆಗಡೆ ಮತ್ತು ಸಂಗಡಿಗರು ಗೀತ ಮಠಣ ಮಾಡಿದರು.
ಅಭಿಯಾನ ಸಮಿತಿಯ ತಾಲೂಕು ಅಧ್ಯಕ್ಷ ಶ್ರೀಶೈಲ ದೊಡಮನಿ, ಸಂಚಾಲಕ ರಾಮಚಂದ್ರ ಹೆಗಡೆ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರಮುಖರಾದ ಎಸ್.ಆರ್.ಪಾಟೀಲ, ಶ್ರೀನಿವಾಸ ಗಜೇಂದ್ರಗಡ, ಪ್ರಭಾ ಹೆಬ್ಬಾರ, ರವೀಂದ್ರ ಬಿರಾದಾರ, ವಿ.ಜಿ.ಪಾಟೀಲ ಸೇರಿದಂತೆ ಮತ್ತೀತರರು ಇದ್ದರು.
“ಡಿಜಿಲೀಕರಣ, ಮೊಬೈಲಗಳು ಬಂದಾದ ಮೇಲೆ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಭಗವದ್ಗೀತೆಯ ವಿವರವನ್ನು ಸೊಗಸಾಗಿ ಕನ್ನಡದಲ್ಲಿ ವಿವರಿಸಲಾದ ಪುಸ್ತಕವನ್ನು ಪ್ರತೀ ಶಾಲಾ ಕಾಲೇಜುಗಳಿಗೆ ಮತ್ತು ಹಳ್ಳಿಗಳಿಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕು.”
– ಡಾ.ಚನ್ನವೀರ ಶಿವಾಚಾರ್ಯರು
ಭಾವೈಕ್ಯತಾ ಹಿರೇಮಠ, ಕುಂಟೋಜಿ
“ಶಾಲೆಗಳಲ್ಲಿ ಭಗವದ್ಗೀತೆಯನ್ನು ಹೇಳಿಕೊಡಲು ಸರ್ಕಾರ ಮುಂದಾಗುತ್ತಿಲ್ಲ. ಜನಗಳ ಕಡೆಯಿಂದ ಒಮ್ಮತದ ಅಭಿಪ್ರಾಯ ಬೇಕು ಎನ್ನುತ್ತಾರೆ. ವಿಶ್ವದ ಮೇಧಾವಿಗಳು ಭಗವದ್ಗೀತೆಯನ್ನು ಮೆಚ್ಚಿದ್ದಾರೆ. ಅಂತಹ ಭಗವದ್ಗೀತೆ ನಮ್ಮ ನೆಲದಲ್ಲಿ ಹುಟ್ಟಿದೆ. ನಾವೇ ಅದನ್ನು ಓದದಿದ್ದರೆ ದೊಡ್ಡ ಅನ್ಯಾಯ.”
– ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು
ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಯತಿವರೇಣ್ಯರು

