ಭಾರತದ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾದ ಸಾಧಕಿ ಕು.ಸಮೈರಾ ಹುಲ್ಲೂರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ
ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ಭಾರತದ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾಗಿರುವ ವಿಜಯಪುರದ ಸಾಧಕಿ ಕುಮಾರಿ ಸಮೈರಾ ಹುಲ್ಲೂರವರ ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಸರಕಾರದ ಪರವಾಗಿ ಸಾಧಕಿ ಸಮೈರಾ ಹುಲ್ಲೂರ ಅವರನ್ನು ಸನ್ಮಾನಿಸಿ, “ವಿಜಯಪುರ ಸಾಧಕರ ತವರೂರು ಬಸವ ನಾಡಿನ ಈ ನೆಲದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊರತೆ ಇಲ್ಲ, ಈಗ ಅಂಥ ಸಾಧಕರ ಪಟ್ಟಿಗೆ ಸೇರುವುದರ ಮೂಲಕ ಅತೀ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾಗಿರುವ ಕುಮಾರಿ ಸಮೈರಾ ಹುಲ್ಲೂರ್ ಸಾಧನೆ ವಿದ್ಯಾರ್ಥಿನಿಯರಿಗೆ ಮಾದರಿಯಾದದ್ದು, ಸಾಧಿಸಬೇಕೆಂಬ ದೃಢಸಂಕಲ್ಪ ಇರುವವರು ಯಾವ ಎತ್ತರಕ್ಕೆ ಬೇಕಾದರೂ ಹಾರಬಲ್ಲರು, ಏರಬಲ್ಲರು ಎನ್ನುವುದನ್ನು ಸಮೈರಾ ತೋರಿಸಿಕೊಟ್ಟಿದ್ದಾಳೆ. ಅವಳನ್ನು ನಾಡಿನ ಜನತೆ ಪರವಾಗಿ ಅಭಿನಂದಿಸಿ, ಸನ್ಮಾನಿಸಲು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷನಾಗಿ ನನಗೆ ಅತ್ಯಂತ ಸಂತೋಷವೆನಿಸುತ್ತದೆ ಎಂದು ಸಂಗಮೇಶ ಬಬಲೇಶ್ವರ ಹೇಳಿದರು.
ಶಿಕ್ಷಣ ತಜ್ಞರು, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬಸವರಾಜ್ ಕೌಲಗಿ ರವರು ಮಾತನಾಡಿ “ಇಡೀ ದೇಶ ವಿಜಯಪುರದ ಕಡೆಗೆ ತಿರುಗಿ ನೋಡುವ ಹಾಗೆ ಸಾಧನೆ ಮಾಡಿದ ಈ ಮಗುವಿನ ಸಾಧನೆ ನಿಜಕ್ಕೂ ಅನನ್ಯವಾದದ್ದು, ಅವಳು ಇನ್ನು ಎತ್ತರಕ್ಕೆ ಬೆಳೆಯಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಸಮಾಜಸೇವಕ, ಸಾಧಕೀಯ ಅಜ್ಜ ಇಮಾಮ್ ಹುಲ್ಲೂರ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

