ತಿಕೋಟಾ ನೂತನ ಮಹಾವಿದ್ಯಾಲಯಲ್ಲಿ ರಕ್ತದಾನ ಶಿಬಿರ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಆರೋಗ್ಯವಂತರು ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯ ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಬ್ಲಡ್ ಬ್ಯಾಂಕ್ ನಿರ್ದೇಶಕ ಡಾ.ಪ್ರಕಾಶ ಪಾಟೀಲ ಹೇಳಿದರು.
ತಿಕೋಟಾ ಪಟ್ಟಣದ ಬಿ.ಎಲ್.ಡಿ.ಸಂಸ್ಥೆಯ ನೂತನ ಮಹಾವಿದ್ಯಾಲಯಲ್ಲಿ ಶ್ರೀ ಬಿ.ಎಮ್.ಪಾಟೀಲ ಆಸ್ಪತ್ರೆ ಹಾಗೂ ನೂತನ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪಘಾತ ಮತ್ತು ಇನ್ನಿತರ ತುರ್ತು ಸಂದರ್ಭದಲ್ಲಿ ರಕ್ತ ತೀರಾ ಅವಶ್ಯಕವಾಗಿರುತ್ತದೆ. ನಮ್ಮ ನಮ್ಮ ಮನೆಗಳಲ್ಲಿ ಯಾರಿಗಾದರೂ ರಕ್ತದ ಅವಶ್ಯಕತೆ ಬಿದ್ದಾಗ ರಕ್ತದಾನ ಶಿಬಿರಗಳ ಉಪಯೋಗ ತಿಳಿಯುತ್ತದೆ. ಹೀಗಾಗಿ ವರ್ಷದಲ್ಲಿ ಎರಡು, ಮೂರು ಬಾರಿ ರಕ್ತದಾನ ಮಾಡಿದರೆ ತುರ್ತು ಚಿಕಿತ್ಸಾ ಘಟಕಗಳಲ್ಲಿರುವ ಎಷ್ಟೋ ರೋಗಿಗಳಿಗೆ ಸಹಕಾರಿಯಾಗುವ ಮೂಲಕ ಒಂದಾದರೂ ಜೀವ ಉಳಿಸಿದಂತಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಎಷ್ಟೋ ಜನ ದೇಹದ ರಕ್ತದಲ್ಲಿನ ಕೊಬ್ಬಿನಾಂಶ ಹೆಚ್ಚಾಗಿ ಹೃದಯಾಘಾತ ಹಾಗೂ ಇತರೆ ರೋಗಗಳಿಗೆ ತುತ್ತಾಗಿ ಮರಣ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ. ಶಿಬಿರಗಳಲ್ಲಿ ನಾವು ಕಡ್ಡಾಯವಾಗಿ ವ್ಯಕ್ತಿಯ ಸಂಪೂರ್ಣ ಆರೋಗ್ಯ ಪರೀಕ್ಷೆ ಮಾಡಿಯೇ 300ಮಿ.ಲೀ. ಪಡೆಯುತ್ತೇವೆ. ಈ ಕಾರಣವಾಗಿ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದು ಉತ್ತಮ ಬೆಳವಣಿಗೆ ಎನಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ .ಆರ್.ಬಿ.ಶಿರಸಂಗಿ ಅವರು ಮಾತನಾಡಿ, ಇವತ್ತು ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಕೃತಕವಾಗಿ ರಕ್ತ ತಯಾರಿಸಲು ಸಾಧ್ಯವಾಗಿಲ್ಲ. 1992ರಿಂದ 2007ರ ತನಕ ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡಿದ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಆರ್.ಬಿ.ಶಿರಸಂಗಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ರವೀಂದ್ರಗೌಡ, ಡಾ. ರವಿಚಂದ್ರ ವಾಲೀಕಾರ, ಡಾ.ಮಲ್ಲಿನಾಥ ಹೂಗಾರ, ಶ್ರೀದೇವಿ ಪಾಟೀಲ, ಗಣೇಶ ಕಾಂಬ್ಳೆ, ಡಾ. ಕೃಷ್ಣಮೂರ್ತಿ, ಪಿ.ವ್ಹಿ. ಪಾಟೀಲ, ಎಸ್.ಎಲ್. ರಾಠೋಡ, ಡಾ.ಸಂತೋಷ ಬಿ. ನವಲಗುಂದ, ಬಿ.ಎಲ್.ಡಿ.ಇ. ಸಂಸ್ಥೆಯ ವೈದ್ಯಕೀಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು,
ಶಿವಮೂರ್ತಿ ಚಿಕನರ್ತೀ ನಿರೂಪಿಸಿದರು, ಗಣೇಶ ಕಾಂಬ್ಳೆ ವಂದಿಸಿದರು.

