ಬಸವನಬಾಗೇವಾಡಿಯಲ್ಲಿ ಉದ್ಘಾಟನೆ | ೧೦೦೮ ಮಹಾತ್ಮ ಪೂಜ್ಯರ ಪಾದಪೂಜೆ | ಲಕ್ಷಾಂತರ ಜನರು ಭಾಗಿ | ಬ್ರಿಗೇಡ್ ಅಧ್ಯಕ್ಷ ಸೋಮೇಶ್ವರ ಸ್ವಾಮೀಜಿ ಘೋಷಣೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಹಿಂದು ಧರ್ಮದ ರಕ್ಷಣೆ, ಹಿಂದು ಸಮಾಜಕ್ಕೆ ತೊಂದರೆಯಾದರೆ ಅಲ್ಲಿ ಧ್ವನಿ ಎತ್ತುವದು, ಸಮಾಜದ ಹಿಂದುಳಿದ ದಲಿತ ಎಲ್ಲ ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಉದ್ಧೇಶಗಳನ್ನು ಮುಂದಿಟ್ಟುಕೊಂಡು ಉತ್ತರ ಕರ್ನಾಟಕದ ಎಲ್ಲ ಮಠಾಧೀಶರು ಸಮಾಲೋಚನೆ ಮಾಡಿದ ಕ್ರಾಂತಿವೀರ ಬ್ರಿಗೇಡ್ ಅಸ್ತಿತ್ವ ಬಂದಿದೆ. ಈ ಬ್ರಿಗೇಡ್ ಅನ್ನು ೨೦೨೫ ನೇ ಫೆಬ್ರುವರಿ ೪ ರಂದು ಕ್ರಾಂತಿಪುರುಷ ವಿಶ್ವಗುರು ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಉದ್ಘಾಟಿಸಲಾಗುವದು ಎಂದು ಕ್ರಾಂತಿವೀರ ಬ್ರಿಗೇಡ್ದ ಅಧ್ಯಕ್ಷ ಮಕಾನಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಯಲ್ಲಾಲಿಂಗ ಮಠದ ಕಲ್ಯಾಣ ಮಂಟಪದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೨ ನೇ ಶತಮಾನದಲ್ಲಿ ಬಸವೇಶ್ವರರು ಸಮಾನತೆಯನ್ನು ತರಲು ಕ್ರಾಂತಿ ಮಾಡಿದರು. ಈ ಭಾಗದ ಮಠಾಧೀಶರರು ಹಿಂದು ಸಮಾಜ-ಧರ್ಮದ ರಕ್ಷಣೆಗಾಗಿ ಕ್ರಾಂತಿಪುರುಷನ ನೆಲದಿಂದಲೇ ಕ್ರಾಂತಿವೀರ ಬ್ರಿಗೇಡ್ ಆರಂಭವಾಗಬೇಕೆಂಬ ಆಶಯ ಹೊದಿದ್ದಾರೆ. ಈ ಬ್ರಿಗೇಡ್ ಉದ್ಘಾಟನೆ ದಿನ ಫೆ. ೪ ರಂದು ೧೦೦೮ ಮಹಾತ್ಮ ಪೂಜ್ಯರ ಪಾದಪೂಜೆ ನೆರವೇರಲಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಈ ಕಾರ್ಯಕ್ರಮದಲ್ಲಿ ಜಾತ್ಯಾತೀತ, ಪಕ್ಷಾತೀತವಾಗಿ ಭಾಗವಹಿಸಬೇಕು. ನಾವು ಯಾವುದೇ ರಾಜಕೀಯ ಮಾಡದೇ ಕೇವಲ ಧರ್ಮದ ರಕ್ಷಣೆ ಮಾಡುವುದೇ ನಮ್ಮ ಉದ್ದೇಶವಾಗಿದೆ. ಸಮಾಜದಲ್ಲಿರುವ ಒಡೆಯರ, ಪೂಜಾರಿ, ದೇವಸ್ಥಾನದ ಅರ್ಚಕರ ಮಕ್ಕಳಿಗೆ ಪೂಜಾ ವಿಧಿ-ವಿಧಾನ ಕಲಿಸಬೇಕೆಂಬ ಉದ್ದೇಶದಿಂದ ಪಾಠಶಾಲೆಯೊಂದನ್ನು ನಮ್ಮ ಬ್ರಿಗೇಡ್ದಿಂದ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಹಿಂದು ಸಮಾಜದ ಮಠ-ಮಂದಿರಗಳ, ರೈತ ಬಾಂಧವರ ಆಸ್ತಿ ವಕ್ಫ್ ಮಂಡಳಿಗೆ ಹೋದರೆ ಹೋರಾಟ ಮಾಡಲಾಗುವದು. ಆಳಂದ ತಾಲೂಕಿನ ಸಾವಳೇಶ್ವರ ಗ್ರಾಮದ ಬೀರಪ್ಪ ದೇವಸ್ಥಾನದ ಆಸ್ತಿಯಲ್ಲಿ ವಕ್ಫ್ ಬಂದಾಗ ಕೂಡಲೇ ನಾವು ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಕನಕದಾಸ ಜಯಂತಿಯೊಳಗೆ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದಾಗ ಕೂಡಲೇ ೨೦ ನಿಮಿಷದಲ್ಲಿ ಜಿಲ್ಲಾಧಿಕಾರಿಗಳು ಇದನ್ನು ಸರಿಪಡಿಸಿದ್ದರು ಎಂದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ಕೌಲಗುಪ್ಪಿಯ ಅಮರೇಶ್ವರ ಮಹಾರಾಜರು, ವರ್ಚಗಲ್ದ ನಿತ್ಯಾನಂದ ಸ್ವಾಮೀಜಿ, ಗದಗದ ಶಿವಕುಮಾರ ಸ್ವಾಮೀಜಿ, ಜಮಖಂಡಿಯ ಪ್ರಭು ಸ್ವಾಮೀಜಿ, ಭತಗುಣಕಿಯ ಮಹಾರಾಜರು, ಮದಗೂಂಡೇಶ್ವರ ಸ್ವಾಮೀಜಿ, ಬಿಳಿಆನಿ ಸಿದ್ದಮಹಾರಾಜರು, ಕೆಂಚರಾಯ ಮಹಾರಾಜರು, ಲಾಯಪ್ಪ ಪೂಜಾರಿ, ಅಭಿನವ ಸಿದ್ದಾನಂದ ಪೂಜ್ಯರು, ಮಾಳಪ್ಪ ಪೂಜ್ಯರು,ಪರಮಾನಂದ ಪೂಜ್ಯರು, ರಾಜಶೇಖರ ಯರನಾಳ, ಬಸವರಾಜ ಬಾಳಿಕಾಯಿ, ಈರನಗೌಡ ಹಳೆಗೌಡರ, ಗೋವಿಂದ ಕೊಪ್ಪ, ಮಲ್ಲಿಕಾರ್ಜುನ ಒಡೆಯರ, ಶಾಂತಕುಮಾರ ಚಳಕೇರಿ, ಅಂಬರೀಶ ಕಾಮನಕೇರಿ, ಅಶೋಕ ಒಡೆಯರ, ಕಾಶೀನಾಥ ಚನ್ನವೀರ, ಸಿದ್ದಪ್ಪ ಮುದ್ದಣ್ಣನವರ, ಸುನೀಲ ಬಾಗೇವಾಡಿ, ಸಿದ್ರಾಮಪ್ಪ ಹತ್ತಿ, ಶಿಲ್ಪಾ ಕುದರಗೊಂಡ ಸೇರಿದಂತೆ ಇತರರು ಇದ್ದರು.

“ಅನೇಕ ಮಠಾಧೀಶರರು ಸಮಾಲೋಚನೆ ಮಾಡಿ ಕ್ರಾಂತಿವೀರ ಬ್ರಿಗೇಡ್ಗೆ ಮಾರ್ಗದರ್ಶಿ ಮಂಡಳಿ ರಚಿತವಾಗಿದೆ. ಶೀಘ್ರದಲ್ಲಿಯೇ ಇದರ ಕಮೀಟಿ ರಚನೆಯಾಗಲಿದೆ. ಫೆ.೪ ರಂದು ನಡೆಯುವ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಕಾರ್ಯಕ್ರಮ ರಾಜ್ಯದ ಇತಿಹಾಸ ಪುಟದಲ್ಲಿಯೇ ಅದ್ಭುತವಾಗಿ ನಡೆಯಲಿದೆ. ಹಿಂದು ಧರ್ಮ, ಹಿಂದುತ್ವ ವಿಷಯ ಬಂದಾಗ ಯಾರಿಗೂ ನಾನು ಸೊಪ್ಪು ಹಾಕುವದಿಲ್ಲ. ಕ್ರಾಂತಿವೀರ ಬ್ರಿಗೇಡ್ವು ಹಿಂದು ಧರ್ಮ, ಹಿಂದುತ್ವ ರಕ್ಷಣೆಗಾಗಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಎಲ್ಲರೂ ಭಾಗವಹಿಸಬಹುದು.”
– ಕೆ.ಎಸ್.ಈಶ್ವರಪ್ಪ
ಮಾಜಿ ಉಪ ಮುಖ್ಯಮಂತ್ರಿ

