ಮಹಿಳಾ ವಿವಿಯಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಪರಶುರಾಮ ಬಾಸಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು ಈ ಅವಕಾಶಗಳನ್ನು ಪಡೆದುಕೊಳ್ಳಬೇಕಾದರೆ ಹೆಚ್ಚು ಹೆಚ್ಚು ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಪತ್ರಕರ್ತ ಪರಶುರಾಮ ಬಾಸಗಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಓರಿಯೆಂಟೇಶನ್ ಕಾರ್ಯಕ್ರಮ ತ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಬರವಣಿಗೆಯ ಕೌಶಲ್ಯ, ವಿಮರ್ಶಾತ್ಮಕ ಚಿಂತನೆ, ತಂತ್ರಜ್ಞಾನ ಜ್ಞಾನ, ಮತ್ತು ಸ್ಪಷ್ಟ ಸಂವಹನವು ಮಾಧ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಮಾಧ್ಯಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಕೌಶಲ್ಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕೇವಲ ಅಧ್ಯಯನ ಮಾತ್ರವಲ್ಲ, ಉತ್ತಮ ಬರವಣಿಗೆಯ ಕೌಶಲ್ಯ, ವಿಚಾರಧಾರೆಗಳು, ಹಾಗೂ ವಿಭಿನ್ನ ಭಾಷೆಗಳ ಪ್ರಭುತ್ವವು ಮುಖ್ಯ. ವಿಶ್ಲೇಷಣೆ, ತೀಕ್ಷ್ಣ ನೋಟ, ಮತ್ತು ನಿರಂತರವಾಗಿ ಕಲಿಯುವ ಹಂಬಲ ನಿಮ್ಮ ಯಶಸ್ಸಿಗೆ ದಾರಿ ತೋರುತ್ತವೆ. ಹೊಸ ವಿಚಾರಗಳನ್ನು ಅನ್ವೇಷಿಸಲು ಮತ್ತು ನಿಮ್ಮ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು ನಿರಂತರ ಪ್ರಯತ್ನ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ನಾಯಕ್ ಮಾತನಾಡಿ ಪತ್ರಿಕೋದ್ಯಮ ವೃತ್ತಿಯಲ್ಲಿ ಯಶಸ್ಸು ಪಡೆಯಬೇಕಾದರೆ ನಿರಂತರ ಪ್ರಯತ್ನ ಮತ್ತು ಕಾರ್ಯ ತತ್ಪರತೆ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿಭಾಗದ ಹಳೆಯ ವಿದ್ಯಾರ್ಥಿನಿಯರಾದ ಶ್ರುತಿ ಬೆಳ್ಳುಂಡಗಿ, ಮಲ್ಲಮ್ಮಾ ಪುಜಾರಿ, ಲಕ್ಷ್ಮಿ ಎಸ್, ದೀಪಿಕಾ ಖತ್ರಿ, ದೀಕ್ಷಾ ಮುಚ್ಚಂಡಿ, ಮತ್ತು ಖುದಿಜಾ ಖಾನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿನಿ ಸುಷ್ಮಾ ಪವಾರ ಸ್ವಾಗತಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನ ಕೋಲಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಫಿಲೋಮಿನಾ ನಿರೂಪಿಸಿದರು, ಪವಿತ್ರಾ ಕಂಬಾರ ವಂದಿಸಿದರು.

“ಪತ್ರಿಕೋದ್ಯಮದ ಪಾತ್ರವು ಅತ್ಯಂತ ಮಹತ್ವದ್ದಾಗಿದೆ, ಅದು ಸಮಾಜದ ಕಣ್ಣಾಗಿರುವಂತೆ ಕಾರ್ಯನಿರ್ವಹಿಸುತ್ತದೆ. ಕೇವಲ ಪಠ್ಯಾಧಾರಿತ ಅಧ್ಯಯನ ಮಾತ್ರ ಸಾಕಾಗದೇ, ವೃತ್ತಿಪರ ಕೌಶಲ್ಯಗಳನ್ನು ಕಲಿತು ಅನುಭವದಿಂದ ನಿಮ್ಮ ಕಾರ್ಯತತ್ತ್ವವನ್ನು ಸುಧಾರಿಸುವುದು ಮುಖ್ಯ. ಕೌಶಲ್ಯಗಳನ್ನು ಅರಿತು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿದರೆ, ಉದ್ಯೋಗ ಅವಕಾಶಗಳು ಸ್ವತಃ ನಿಮ್ಮತ್ತ ಚಲಿಸುತ್ತವೆ. ಪಠ್ಯವನ್ನು ಓದುವುದರ ಜೊತೆಗೆ ವಿಮರ್ಶಾತ್ಮಕ ಚಿಂತನೆ ಹಾಗೂ ಸದೃಢ ಕೌಶಲ್ಯಗಳಿಂದ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು.”
– ಪ್ರೊ.ಓಂಕಾರ ಕಾಕಡೆ
ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಮಹಿಳಾ ವಿವಿ, ವಿಜಯಪುರ

