ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಗಳನ್ನು ಅರ್ಥೈಸಿಕೊಂಡು ಅವರ ದಾರಿಯಲ್ಲಿ ಸಾಗುವುದೇ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದು ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಹೇಳಿದರು.
ಬುದ್ಧವಿಹಾರ ನಿರ್ಮಾಣ ಸಮಿತಿ, ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಇಂದು ನಗರದ ಸಾರಿಪುತ್ರ ಬೋಧಿಧಮ್ಮ ಬುದ್ಧವಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೬೮ನೆಯ ಮಹಾಪರಿನಿರ್ವಾಣದ ನಿಮಿತ್ಯವಾಗಿ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಗವಾನ ಬುದ್ಧ, ಬಸವಣ್ಣ ಮತ್ತು ಡಾ. ಅಂಬೇಡ್ಕರ್ ಇವರಾರೂ ಅವತಾರಿಪುರುಷರಲ್ಲ. ಅವರೆಲ್ಲ ತಮ್ಮ ವೈಯಕ್ತಿಕ ಶ್ರಮ ಮತ್ತು ಸಾಧನೆಯಿಂದ ವಿಶ್ವಮಾನವರಾಗಿ ಬೆಳೆದು ನಿಂತವರು. ಅವರನ್ನು ದೇವರು ಮಾಡಿ ಆರಾಧಿಸುವ ಬದಲಾಗಿ ಅವರನ್ನು ಅನುಸರಿಸಬೇಕು ಎಂದು ಹೇಳಿದರು.
ಭಾರತದ ಎಲ್ಲಾ ಜಾತಿ ಜನಾಂಗದವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿದ್ದಾರೆ. ಆದರೆ ವೈದಿಕವಾದಿಗಳು ಈ ಸಂವಿಧಾನ ಬೇಡವೆಂದು ಹೇಳುತ್ತಿದ್ದಾರೆ. ಮೊದಲಿನಿಂದಲೂ ಸಂವಿಧಾನವನ್ನು ವಿರೋಧಿಸುತ್ತ ಬಂದಿರುವ ವೈದಿಕರು ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಸಮಾನತೆಯನ್ನು ಬಯಸುವ ಎಲ್ಲ ವರ್ಗದವರು ಸಂವಿಧಾನವನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಫಾದರ್ ಟಿಯೊಲ್ ಮಾತನಾಡಿ, ಪ್ರಶ್ನೆಗಳನ್ನು ಕೇಳಬೇಕು ಮತ್ತು ಅದಕ್ಕೆ ಉತ್ತರವನ್ನು ಶೋಧಿಸುವ ಕೆಲಸವಿಂದು ನಡೆಯಬೇಕಿದೆ. ಸಂವಿಧಾನವನ್ನು ಸದ್ಬಳಕೆ ಮಾಡಿಕೊಂಡು ಶೋಷಿತ ಸಮುದಾಯಗಳನ್ನು ಮುಂಚೂಣಿಗೆ ತರಲು ಪ್ರಯತ್ನಿಸಬೇಕು. ನಮ್ಮ ಎಲ್ಲ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರಗಳಿವೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾದಿಕಾರದ ಸದಸ್ಯೆ ಶ್ರೀಮತಿ ದಾಕ್ಷಾಯಿಣಿ ಹುಡೇದ ಅವರು ಮಾತನಾಡಿ, ಈ ದೇಶಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿದ ಕೊಡುಗೆಯನ್ನು ಯಾರೂ ಮರೆಯುಂತಿಲ್ಲ. ಅವರು ಶೋಷಿತ ವರ್ಗಗಳು ವಿಶೇಷವಾಗಿ ಕಾರ್ಮಿಕರು ಮತ್ತು ಮಹಿಳೆಯರ ಮಾನವೀಯ ಹಕ್ಕುಗಳನ್ನು ಕೊಡಿಸುವುದಕ್ಕಾಗಿ ತಮ್ಮ ಜೀವನದ ಕೊನೆಯ ಕ್ಷಣದ ವರೆಗೂ ಹೋರಾಡಿದರು. ಮಹಿಳೆಯರ ಸ್ಥಾನಮಾನಕ್ಕಾಗಿ ಸಂಸತ್ತಿನಲ್ಲಿ ಅವರು ತಂದ ಹಿಂದೂ ಕೋಡ್ ಬಿಲ್ ಬಿದ್ದುಹೋದಾಗ ತಮ್ಮ ಮಂತ್ರಿಪದವಿಗೆ ರಾಜೀನಾಮೆ ನೀಡಿದರು. ಮಹಿಳೆರ ಹಕ್ಕುಗಳಿಗಾಗಿ ಅಧಿಕಾರ ತ್ಯಾಗಮಾಡಿದ ಏಕೈಕ ನಾಯಕರು ಅಂಬೇಡ್ಕರ್ ಎಂದು ಹೇಳಿದರು.
ಮಾನವಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಭುಗೌಡ ಪಾಟೀಲ, ಮೌಲಾನಾ ಅಬ್ದುಲಹನೀಫ್ ಮೊಕಾಶಿ ಮಾತನಾಡಿದರು. ಬುದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಯಡಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಭಂತೆ ಬೋಧಿಕೀರ್ತಿ ಸಾನಿಧ್ಯ ವಹಿಸಿದ್ದರು.
ಮೇ ಸಾಹಿತ್ಯ ಬಳಗದ ಕಲಾತಂಡದ ಸಹೋದರಿಯರ ಕ್ರಾಂತಿಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಚೆನ್ನು ಕಟ್ಟಿಮನಿ ಸ್ವಾಗತಿಸಿದರು. ಅನಿಲ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಸಂಜು ಕಂಬಾಗಿ ವಂದಿಸಿದರು. ಪ್ರತಾಪ ಚಿಕ್ಕಲಕಿ ನಿರೂಪಿಸಿದರು.
ಮಹಾನಗರಪಾಲಿಕೆ ಸದಸ್ಯೆ ಆರತಿ ಶಹಾಪುರ, ಬಸವ ಚಿಂತಕ ಡಾ. ಜೆ.ಎಸ್. ಪಾಟೀಲ, ಬುದ್ಧವಿಹಾರ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ಉಪಾಧ್ಯಕ್ಷ ಸಾಬು ಚಲವಾದಿ, ನಿರ್ದೇಶಕರಾದ ರಾಜು ತೊರವಿ, ದಶವಂತ ಗುನ್ನಾಪುರ, ಅಪ್ಪು ನಾಗಠಾಣ, ಪೀರಪ್ಪ ನಡುವಿನಮನಿ, ಭೀಮಶಿ ಹಿಪ್ಪರಗಿ, ಬಿ.ಎಸ್. ಬ್ಯಾಳಿ, ಕೆ.ಎಂ. ಶಿವಶರಣ, ಚಿದಾನಂದ ನಿಂಬಾಳ, ರಮೇಶ ಕವಲಗಿ, ಉಮೇಶ ಹೆಂಡೆಗಾರ, ಬಸವಚಿತ ಹಗುಣದಾಳ, ಆರ್.ಎಚ್. ಬನಸೋಡೆ, ಸದಾಶಿವ ಗುನ್ನಾಪುರ, ದಸ್ತಗಿರ ಉಕ್ಕಲಿ, ಎಂ.ಜಿ. ಆನಂದ, ವೈ.ಎಚ್.ಲಂಬು, ಸಿ.ಆರ್. ತೊರವಿ, ಎನ್.ಎಸ್. ಶಿವನಾಕರ, ಚಿದಾನಂದ ಹೊನವಾಡಕರ, ರಮೇಶ ಯಡಹಳ್ಳಿ, ಬಸವರಾಜ ಹೋಳ್ಕರ, ಕೆ.ಎಂ. ಕೂಡಲಗಿ, ವಿದ್ಯಾವತಿ ಅಂಕಲಗಿ, ಮಹಾದೇವಿ ಗೋಕಾಕ, ಭಾರತಿ ಹೊಸಮನಿ ಸೇರಿದಂತೆ ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳು, ದಲಿತ ಮುಖಂಡರು ಉಪಸ್ಥಿತರಿದ್ದರು.

