೧೪ ವರ್ಷ ವಯೋಮಿತಿಯ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಐಶ್ವರ್ಯ ಬಿರಾದಾರ
ಉದಯರಶ್ಮಿ ದಿನಪತ್ರಿಕೆ
ವರದಿ: ರೇಖಾ ಪಿ.ಗದ್ಯಾಳ
ತಿಕೋಟಾ: 68 ನೇ ರಾಷ್ಟ್ರ ಮಟ್ಟದ ಹದಿನಾಲ್ಕು ವರ್ಷ ವಯೋಮಿತಿಯ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಕರ್ನಾಟಕ ಕಬ್ಬಡಿ ತಂಡದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ತಿಗಣಿಬಿದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ ಐಶ್ವರ್ಯ ಅಶೋಕ ಬಿರಾದಾರ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಕಬಡ್ಡಿಯ ತವರೂರು ಮಹಾರಾಷ್ಟ್ರದ ಅಮರಾವತಿಯಲ್ಲಿ ಇದೇ ಡಿಸೆಂಬರ್ 10 ರಿಂದ 12 ರವರೆಗೆ ನಡೆಯುವ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಗಳಲ್ಲಿ ದೇಶದ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುತ್ತಿದ್ದು, ಕರ್ನಾಟಕ ರಾಜ್ಯದ ಪರವಾಗಿ ಇರುವ ಈ ತಂಡದಲ್ಲಿ ವಿಜಯಪುರ ಜಿಲ್ಲೆಯಿಂದ ಭಾಗವಹಿಸುತ್ತಿರುವ ಏಕೈಕ ವಿಧ್ಯಾರ್ಥಿನಿ ಐಶ್ವರ್ಯ ಆಗಿದ್ದಾಳೆ.
ಶಾಲೆಯಲ್ಲಿ ಉತ್ತಮ ಪ್ರದರ್ಶನ ನೀಡಿ ರಚನೆಯಾದ ಈ ಶಾಲೆಯ ಕಬ್ಬಡಿ ತಂಡವು ನಾಗರಾಳದಲ್ಲಿ ನಡೆದ ಕ್ಲಸ್ಟರ್ ಹಂತ, ಗುಣದಾಳದಲ್ಲಿ ನಡೆದ ವಲಯ ಮಟ್ಟದ ಹಂತ, ತಿಕೋಟಾದಲ್ಲಿ ನಡೆದ ತಾಲ್ಲೂಕ ಮಟ್ಟದ ಹಂತದಲ್ಲಿ ಪ್ರಥಮ ಸ್ಥಾನ ಪಡೆಯಿತು. ನಂತರ ಜಿಲ್ಲಾ ಮಟ್ಟ, ವಿಭಾಗ ಮಟ್ಟ, ರಾಜ್ಯ ಮಟ್ಟದ ಹಂತದವರೆಗೆ ಈ ಶಾಲೆಯ ಕಬ್ಬಡಿ ತಂಡದ ಹಲವು ವಿಧ್ಯಾರ್ಥಿಗಳು ಉತ್ತಮ ಪ್ರದರ್ಶನದ ಅರ್ಹತೆಯ ಮೇರೆಗೆ ಆಯ್ಕೆಯಾಗುತ್ತಾ ಸಾಗಿ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಈ ತಂಡದ ಒಬ್ಬಳು ವಿಧ್ಯಾರ್ಥಿನಿ ಆಯ್ಕೆಯಾಗಿದ್ದಾಳೆ ಎಂದು ತರಬೇತಿ ನೀಡಿದ ಈ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ ದೇಸಾಯಿ ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡುತ್ತಾ ಕ್ರೀಡಾ ಚಟುವಟಿಕೆಯಲ್ಲೂ ಆಸಕ್ತಿಯಿಂದ ಪ್ರದರ್ಶನ ನೀಡಿದ ವಿಧ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಿಗೆ, ಮುಖ್ಯೋಪಾಧ್ಯಾಯ ಬಿ.ಎಸ್.ಕೊಟ್ಯಾಳ ಅವರಿಗೆ, ಶಾಲಾ ಸಿಬ್ಬಂದಿಗಳಿಗೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಹಳೆಯ ವಿಧ್ಯಾರ್ಥಿಗಳು, ಗ್ರಾಮಸ್ಥರು ಆಭಿನಂದನೆ ಸಲ್ಲಿಸಿ ರಾಷ್ಟ್ರ ಮಟ್ಟದಲ್ಲಿ ಗೆದ್ದು ಶಾಲೆಯ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.

“ಜಿಲ್ಲೆಯ ಸಣ್ಣ ಹಳ್ಳಿಯ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುತ್ತಿರುವದು ಹೆಮ್ಮೆ. ಕಬಡ್ಡಿ ಗ್ರಾಮೀಣ ಕ್ರೀಡೆ ಭಾರತದ ಸೊಗಡು, ನಶಿಸಿ ಹೋಗುತ್ತಿರುವ ಕ್ರೀಡೆಯಲ್ಲಿ ಇದು ಒಂದು. ಈ ಸಂದರ್ಭದಲ್ಲಿ ಈ ವಿಧ್ಯಾರ್ಥಿನಿಯ ಸಾಧನೆ ಸಂತಸ ತಂದಿದೆ. ಮಹಿಳೆಯರು ಹೆಚ್ಚು ಆಟಗಳಲ್ಲಿ ಭಾಗವಹಿಸಬೇಕು. ಪುರುಷ ಪ್ರಧಾನ ಆಟಗಳಲ್ಲಿ ಸರಿಸಮಾನವಾಗಿ ಮಹಿಳೆಯರು ಮಿಂಚುತ್ತಿರುವದು ಹೆಮ್ಮೆ. ಈ ವಿಧ್ಯಾರ್ಥಿನಿ ಜಿಲ್ಲೆಗೆ ಮಾದರಿಯಾಗಿದ್ದು ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ.”
– ಡಾ. ಎಂ.ಬಿ.ಪಾಟೀಲ್
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವರು

“ಕರ್ನಾಟಕ ತಂಡದಿಂದ ಆಯ್ಕೆಯಾಗಿ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ತುಂಬಾ ಖುಷಿಯಾಗಿದೆ. ಈ ಖುಷಿಯ ಹಿಂದೆ ನಮ್ಮ ಶಿಕ್ಷಕರ ಪ್ರೋತ್ಸಾಹದ ಶ್ರಮವಿದೆ.
– ಐಶ್ವರ್ಯ ಬಿರಾದಾರ
ಕಬಡ್ಡಿ ಕ್ರೀಡಾಪಟು, ತಿಗಣಿಬಿದರಿ

“ಶಿಕ್ಷಕರ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿಯ ಕ್ರೀಡಾ ಪ್ರತಿಭೆ ಹಾಗೂ ಕ್ರೀಡಾ ಭವಿಷ್ಯ ಉಜ್ವಲವಾಗಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ.”
– ಪ್ರಮೋದಿನಿ ಬಳೋಲಮಟ್ಟಿ
ಬಿಇಓ ವಿಜಯಪುರ ಗ್ರಾಮೀಣ ವಲಯ

