ಸಿಂದಗಿಯಲ್ಲಿ ಭಾರತೀಯ ಜನತಾ ಪಕ್ಷದಿಂದ ಎತ್ತಿನ ಬಂಡಿಯ ಮೂಲಕ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಈ ಭಾಗದ ಬಹುತೇಕ ರೈತರು ಕೃಷಿ ಇಲಾಖೆಯಲ್ಲಿ ೨೦೨೪-೨೪ನೇ ಸಾಲಿನಲ್ಲಿ ವಿತರಿಸಿದ ತೊಗರಿ ಬೀಜಗಳನ್ನು ಖರೀದಿಸಿ ಬೆಳೆದಿದ್ದಾರೆ. ಎತ್ತರಕ್ಕೆ ಬೆಳೆದ ಬೆಳೆ ಹೂವುಗಳು ಉದುರಿ ಕಾಯಿ ಕಟ್ಟದೆ ಶೇ.೫೦ರಷ್ಟು ಬೆಳೆಗಳು ಹಾಳಾಗಿವೆ ಎಂದು ಮಾಜಿ ಶಾಸಕ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಸಿಂದಗಿ ಮತ್ತು ಆಲಮೇಲ ತಾಲೂಕಿನ ರೈತರು ಬೆಳೆದ ತೊಗರಿ ಬೆಳೆ ಈ ಬಾರಿ ನಷ್ಟದಲ್ಲಿದ್ದು ಕೂಡಲೇ ಸಂಭಂಧಿಸಿದ ಅಧಿಕಾರಿಗಳು ಸರ್ವೆಮಾಡಿಸಿ ಸರಕಾರಕ್ಕೆ ವಾಸ್ತವಿಕ ವರದಿಯನ್ನು ಸಲ್ಲಿಸಿ ಸೂಕ್ತ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಸಿಂದಗಿ ಮಂಡಲದ ವತಿಯಿಂದ ಎತ್ತಿನ ಬಂಡಿಯ ಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರ ಮತ್ತು ತಾಲೂಕು ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅನ್ನದಾತ ತೀವ್ರ ಸಂಕಷ್ಟದ ಬದುಕನ್ನು ಎದುರಿಸುತಿದ್ದಾನೆ. ಇದಕ್ಕೆ ಸಂಬಂದಿಸಿದಂತೆ ಈ ಭಾಗದ ಅನೇಕ ರೈತರು ಅಧಿಕಾರಿಗಳೇ ಹಾಳಾಗುತ್ತಿರುವ ಬೆಳೆಗಳ ಬಗ್ಗೆ ವಿವಿರಿಸಿದರೂ ಅಧಿಕಾರಿಗಳು ಸರ್ವೇ ಕಾರ್ಯ ಮಾಡಿಲ್ಲ ಮತ್ತು ಹೊಲಗಳಿಗೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ರಮೆಶ ಭೂಸನೂರ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರೈತ ಮೋರ್ಚಾ ತಾಲೂಕಾಧ್ಯಕ್ಷ ಪೀರು ಕೆರೂರ ಮಾತನಾಡಿ, ರೈತರ ವಿಷಯದಲ್ಲಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ರೈತರಿಗೆ ಅನ್ಯಾಯವಾದಾಗ ನಾವು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ. ಕೂಡಲೇ ಜಿಲ್ಲಾಧಿಕಾರಿಗಳು ಸರ್ವೇ ಕಾರ್ಯ ಆರಂಬಿಸುವಂತೆ ಆದೇಶ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲು ಮುಂದಾಗುವಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಾವಿರಾರು ರೈತರೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ ಅವರು ಪ್ರತಿಭಟನಾ ಕಾರರ ಬೇಡಿಕೆಗಳಾದ ಹಾನಿ ಒಳಗಾದ ತೊಗರಿ ಬೆಳೆಯನ್ನು ಡ್ರೊಣದ ಮೂಲಕ ಸರ್ವೆ ಕಾರ್ಯ ಮಾಡುವುದು, ರೈತ ಸಂಪರ್ಕ ಕೆಂದ್ರದಲ್ಲಿ ರೈತರಿಗೆ ವಿತರಿಸಿದ ತೊಗರಿ ಬೀಜಗಳ ನೈಜತೆ ಮತ್ತು ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ಕಳಪೆ ಬೀಜ ವಿತರಿಸಿದ ಖಾಸಗಿ ಎಜೆನ್ಸಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು, ವಿಮೆ ಮಾಡದೆ ಇರುವ ತೊಗರಿ ಬೆಳೆದ ನಷ್ಟಕ್ಕೆ ಒಳಗಾದ ರೈತರಿಗೂ ಸರಕಾರವೇ ಪರಿಹಾರ ನೀಡಬೇಕು ಎಂಬ ಅನೇಕ ಬೇಡಿಕೆಗಳ ಈಡೇರಿಕೆಗೆ ರೈತರು ಮತ್ತು ಬಿಜೆಪಿ ಮುಂಖಂಡರು ಮನವಿ ಸಲ್ಲಿಸಿದರು.
ಪ್ರತಿಭಟನಾ ಮೆರವಣಿಗೆಯು ಡಾ.ಅಂಬೇಡ್ಕರ ವೃತ್ತದಿಂದ ಎತ್ತಿನ ಗಾಡಿಗಳ ಮೂಲಕ ಪ್ರಾರಂಭವಾಗಿ ಟಿಪ್ಪು ವೃತ್ತ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ಸಾಗಿ ಕೃಷಿ ಇಲಾಖೆಗೆ ಸಾಗಿ ಕೆಲ ಕಾಲ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಸಿದ್ದು ಬುಳ್ಳಾ, ಈರಣ್ಣ ರಾವೂರ, ಗೋಲ್ಳಾಳಪ್ಪಗೌಡ ಪಾಟೀಲ, ಶ್ರೀಶೈಲ ಚಳ್ಳಗಿ, ಶಿವುಕುಮಾರ ಬಿರಾದಾರ, ಗುರುಲಿಂಗಪ್ಪ ಅಂಗಡಿ, ಗುರು ತಳವಾರ, ಪ್ರಶಾಂತ ಕದ್ದರಕಿ, ವಿಠ್ಠಲ ಪೂಜಾರಿ, ಸಮಿ ಬಿಜಾಪೂರ, ನೀಲಮ್ಮ ಯಡ್ರಾಮಿ ಅನುಸುಬಾಯಿ ಪಾರಗೊಂಡ, ಚೇತನ ರಾಂಪೂರ, ಅಶೋಕ ನಾರಾಯಣಪೂರ, ವೀರುಪಾಕ್ಷಿ ಗಂಗನಳ್ಳಿ, ಮಂಜುನಾಥ ನಾಯ್ಕೋಡಿ, ಸತೀಶ ಬಿರಾದಾರ, ಶಿವರಾಜ ಕೆಂಗನಾಳ, ಸಲೀಂ ಬಾಗವಾನ, ಮಲ್ಲನಗೌಡ ಬಗಲಿ ಸೇರಿದಂತೆ ಅನೇಕ ರೈತರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

