ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿದ್ಯಾರ್ಥಿ ದೆಸೆಯೆಯಲ್ಲಿಯೇ ಭವಿಷ್ಯದ ಮುಂದಾಲೋಚನೆ ರೂಢಿಸಿಕೊಳ್ಳಬೇಕಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಾಣೇಶ ಜೋಶಿ ಹೇಳಿದರು.
ಪಟ್ಟಣದ ಅಭ್ಯುದಯ ಶಾಲೆಯಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ—೨೦೨೪ ಸಂಬಂಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಸಮಗ್ರತೆ ಸಂಸ್ಕೃತಿಯ ಮೇಲೆ ನಿಂತಿದೆ. ಅದನ್ನು ರಾಮಾಯಣ, ಮಹಾಭಾರತದಂತಹ ಆದರ್ಶ ಗ್ರಂಥಗಳು ಎತ್ತಿ ಹಿಡಿಯುತ್ತಿವೆ. ಭಗವದ್ಗೀತಾ ಅಭಿಯಾನದಂತಹ ವಿಶಿಷ್ಠ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಬದುಕಿಗೆ ಅರ್ಥವನ್ನು ತರುವ ಕಾರ್ಯವನ್ನು ಸರ್ಣವಲ್ಲೀ ಶ್ರೀಗಳು ನಡೆಸುತ್ತಿದ್ದಾರೆ. ನಾವೆಲ್ಲ ಜಾಗೃತಗೊಳ್ಳಬೇಕಾಗಿದೆ. ಅಲ್ಲದೆ ಸಾಧನೆಯ ಪಥದಲ್ಲಿ ಸಾಗುವಾಗ ಮೂಕನಾಗಿರಬೇಕು. ಸಾಧನೆಯ ಗುರಿಯನ್ನು ಮುಟ್ಟುವ ಗಮನವೊಂದೆ ಇರಬೇಕು. ವಿದ್ಯಾರ್ಥಿಗಳು ಭಗವದ್ಗೀತೆಯ ಅಧ್ಯಯನದ ಮೂಲಕ ಬೆಳಕಿನ ದಾರಿ ಕಂಡುಕೊಳ್ಳ ಬೇಕಾಗಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಚ್.ಮುದ್ನಾಳ ಮಾತನಾಡಿ ನಾವು ಪ್ರತಿ ಕ್ಷಣದಲ್ಲೂ ಸರಿಯೋ? ತಪ್ಪೋ? ಎನ್ನುವುದನ್ನ ಯೋಚಿಸುತ್ತಿರಬೇಕು. ಕೆಟ್ಟದ್ದನ್ನು ಪ್ರಾರಂಭದ ಹಂತದಿಂದಲೇ ಕೈಬಿಡುತ್ತಿರಬೇಕು. ಭಗವಂತ ನಮ್ಮಿಂದ ಏನನ್ನೂ ಅಪೆಕ್ಷೆ ಪಡುವುದಿಲ್ಲ. ನಾವು ಅವನಿಗೆ ಸಮರ್ಪಣಾ ಭಾವದಿಂದ ನೀಡುವ ಪ್ರವೃತ್ತಿ ರೂಢಿಸಿಕೊಳ್ಳ ಬೇಕಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಮ್.ಎನ್.ಮದರಿ ಮಾತನಾಡಿ ಮಕ್ಕಳು ದೇಶಕ್ಕೆ ಉತ್ತಮ ಪ್ರಜೆಯಾಗಿ ನಿರ್ಮಾಣ ಹೊಂದಬೇಕಾದರೆ ಭಗವದ್ಗೀತೆಯ ಆದರ್ಶದ ಅಡಿಯಲ್ಲಿ ಚಿಂತನೆ ನಡೆಸಬೇಕು ಎಂದರು.
ಈ ವೇಳೆ ಸಂಸ್ಥೆಯ ನಿರ್ದೇಶಕಿ ಶ್ರೀದೇವಿ ಮದರಿ, ಆಡಳಿತಾಧಿಕಾರಿ ಕಿರಣ ಮದರಿ, ವ್ಯವಸ್ಥಾಪಕ ಬಸವರಾಜ ಬಿಜ್ಜೂರ, ಪ್ರಾಚಾರ್ಯ ಎಮ್.ಎಮ್.ಧನ್ನೂರ, ಬಿ.ಎಸ್.ಮೇಟಿ, ಉಪನ್ಯಾಸಕರುಗಳಾದ ಪ್ರಶಾಂತ ಬಿರಾದಾರ, ರವಿ ಚಲವಾದಿ, ಮುನಿಯಾರ ನಾಯಕ್, ಸಿದ್ದು ಹೊಕ್ರಾಣಿ, ಬಸು ಗುಡದಿನ್ನಿ, ಪ್ರೀಯಾಂಕ ಮೇಟಿ ಸೇರಿದಂತೆ ಮತ್ತೀತರರು ಇದ್ದರು. ಪ್ರಶಿಕ್ಷಕಿ ರಂಜಿತಾ ಹೆಗಡೆ ಮತ್ತು ಜ್ಞಾನ ಭಾರತಿ ವಿದ್ಯಾ ಮಂದಿರದ ಗೀತ ಗಾಯನ ತಂಡದವರು ಭಗವದ್ಗೀತೆಯ ೯ ನೇ ಅಧ್ಯಾಯವನ್ನು ಸಾಮೂಹಿಕವಾಗಿ ಪಠಿಸಿದರು. ಶಿಕ್ಷಕ ಮಂಜುನಾಥ ಪಡದಾಳಿ ಸ್ವಾಗತಿಸಿದರು. ಸಂಚಾಲಕ ರಾಮಚಂದ್ರ ಹೆಗಡೆ ಆಶಯದ ನುಡಿಗಳನ್ನಾಡಿದರು. ಮುಖ್ಯಗುರು ಎಚ್.ಬಿ.ಜಾಯವಡಗಿ ವಂದಿಸಿದರು.

