ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರಿ ನೇತೃತ್ವದಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕಚೇರಿಯಲ್ಲಿ ಬುಧವಾರ ಅವರ ಆಪ್ತ ಸಹಾಯಕರಿಗೆ ೧೯೯೫ರ ಅವಧಿ ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನದ ಕುರಿತು ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಧ್ವನಿ ಎತ್ತುವಂತೆ ಮನವಿ ಸಲ್ಲಿಸಲಾಯಿತು.
ಅವರು ಸಲ್ಲಿಸಿದ ಮನವಿಯಲ್ಲಿ ನಮ್ಮ ಒಕ್ಕೂಟದ ಬೇಡಿಕೆಯಾಗಿರುವ ರಾಜ್ಯದಲ್ಲಿ ೧೯೯೫ರ ನಂತರದಲ್ಲಿ ಸ್ಥಾಪನೆಯಾಗಿರುವ ಖಾಸಗಿ ಶಾಲಾ-ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸಲು ಕುರಿತು ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಜರುಗುವ ಸರ್ಕಾರದ ಅಧಿವೇಶನದಲ್ಲಿ ನಮ್ಮ ಒಕ್ಕೂಟದ ಬೇಡಿಕೆಯ ಕುರಿತು ಶಾಸಕರು ಸವಿಸ್ತಾರವಾಗಿ ಚರ್ಚೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದು ನಮ್ಮ ಬೇಡಿಕೆಯ ಈಡೇರಿಸುವಂತೆ ಕೇಳಿಕೊಳ್ಳುತ್ತೇವೆ. ೧೯೯೫ರ ನಂತರದಲ್ಲಿ ಖಾಸಗಿ ಶಾಲಾ-ಕಾಲೇಜುಗಳನ್ನು ಸರ್ಕಾರದ ವೇತನ ಅನುದಾನಕ್ಕೆ ಒಳಪಡಿಸುವ ವಿಚಾರ ಸರ್ಕಾರದ ಮುಂದೆ ಇದೆಯೇ, ಎಷ್ಟು ವರ್ಷಗಳವರೆಗೆ ವೇತನ ಅನುದಾನ ಒಳಪಡಿಸಲು ಸರ್ಕಾರದ ನಿರ್ಧಾರವೇನು ಎಂಬ ಪ್ರಶ್ನೆಗಳನ್ನು ಅಧಿವೇಶನದಲ್ಲಿ ಚುಕ್ಕಿ ಪ್ರಶ್ನೆ ಕೇಳುವ ಮೂಲಕ ಸರ್ಕಾರದ ಗಮನ ಸೆಳೆಯಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಲ್ಲಿಕಾರ್ಜುನ ತುಪ್ಪದ, ಕಾರ್ಯದರ್ಶಿ ಲಕ್ಷ್ಮೀ ಮಾನೆ, ಎಂ.ಡಿ.ಶೇಖ, ರಾಜೀವ ಹೊಸೂರು, ಪ್ರಾಣೇಶ ಜೋಶಿ, ಸೋಮಶೇಖರ ನಾಗರಬೆಟ್ಟ, ಶ್ರೀಶೈಲ ಪರಮಗೊಂಡ, ರಾಯಗೊಂಡ ಬಿರಾದಾರ, ಎಂ.ಡಿ.ಮುಲ್ಲಾ, ಸಂದೀಪ ಶಿರಶ್ಯಾಡ, ಲಕ್ಷ್ಮಣ ನಾಶಿ, ರಾಜಶೇಖರ ಪಾಟೀಲ, ಮಲ್ಲಿಕಾರ್ಜುನ ಆಸಂಗಿ ಇತರರು ಇದ್ದರು. ಡಿ.೧೧ ರಂದು ಅಧಿವೇಶನದ ದಿನದಂದು ಈ ಬೇಡಿಕೆಯ ಕುರಿತು ಒಕ್ಕೂಟದಿಂದ ಧರಣಿ ಮಾಡಿ ಸರ್ಕಾರಕ್ಕೆ ಒತ್ತಾಯ ಮಾಡಲಾಗುವದು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರಿ ತಿಳಿಸಿದ್ದಾರೆ.

