ಉದಯರಶ್ಮಿ ದಿನಪತ್ರಿಕೆ
ಚಡಚಣ:ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಬೇಕಾದರೆ ದೃಡ ಸಂಕಲ್ಪ ಮಾಡಬೇಕೆಂದು ಇಸ್ರೋ ವಿಜ್ಞಾನಿ ಸಂಜೀವ ಗೌರ ಹೇಳಿದರು.
ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿಜ್ಞಾನಿಗಳಾಗಬೇಕಾದರೆ ಕಷ್ಟ ಪಟ್ಟು ಓದಬೇಕಾಗುತ್ತದೆ. ಸಂಶೋದನೆ ಎಂಬುವದು ಒಂದರೆಡು ದಿನದಲ್ಲಿ ಆಗುವಂತಹದಲ್ಲ ಅದಕ್ಕೆ ನಿರಂತರ ಅಧ್ಯಯನ ಬೇಕಾಗುತ್ತದೆ. ಇಸ್ರೋ ಸಂಸ್ಥೆಯಲ್ಲಿ ಅನೇಕ ವಿಜ್ಞಾನಿಗಳು ಹಳ್ಳಿಯಿಂದಲೆ ಬಂದವರಾಗಿದ್ದಾರೆ. ಸಾಧನೆ ಮಾಡಲು ದೃಡ ಮನಸ್ಸಿದ್ದರೆ ಸಾಕು ಎಂದು ಹೇಳಿದರು.
ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಚಂದ್ರಯಾನ-೩ ರಲ್ಲಿ ದೇಶದ ವಿಜ್ಞಾನಿಗಳು ಮಾಡಿದ ಸಾದನೆಯ ಕುರಿತು ಹೇಳಿದರು. ಇದಲ್ಲದೆ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳು ಯಾವ ರೀತಿ ಜೀವನ ನಡೆಸುತ್ತಾರೆ ಅಲ್ಲಿ ಅವರು ಎದುರಿಸುವ ಸಮಸ್ಯೆಗಳ ಕುರಿತು ಸವಿಸ್ಥಾರವಾಗಿ ಹೇಳಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಎಸ್.ಎಸ್. ಚೋರಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ವಿ.ಸಿ.ಬಾಡನ ಆಗಮಿಸಿದ್ದರು.
ಪ್ರೊ ಮೆಹಬೂಬ ಭಾಷಾ ವಂದಿಸಿದರು. ಪ್ರೊ ಶ್ರೀಶೈಲ ಕಾಮಗೊಂಡ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

