ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ವಿಜಯಪುರ: ಉತ್ತರ ಕರ್ನಾಟಕದ ಜಾತ್ರೆಗಳು ವಿಶೇಷತೆಯಿಂದ ಕೂಡಿರುತ್ತವೆ. ಅದರಲ್ಲಿ ಛಟ್ಟಿ ಅಮಾವಾಸ್ಯೆಯ ಸಂದರ್ಭದಲ್ಲಿ ನಡೆಯುವ ವಿಜಯಪುರ ಜಿಲ್ಲೆಯ ಅರಕೇರಿ ಜಾಲಗೇರಿ ಭಾಗದ ಮುಮ್ಮಟ್ಟಿಗುಡ್ಡದ ಅಮೋಘಸಿದ್ದೇಶ್ವರನ ಜಾತ್ರೆಗೆ ಉತ್ತರ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟç ಸೇರಿದಂತೆ ವಿವಿಧೆಡೆಯಿಂದ ನೂರಾರ ಪಲ್ಲಕ್ಕಿಗಳ ಭೇಟಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಿತು. ಈ ವೇಳೆ ಭಕ್ತರು ಕ್ವಿಂಟಾಲ್ಗಟ್ಟಲೇ ಭಂಡಾರ ಪಲ್ಲಕ್ಕಿಗಳ ಮೇಲೆ ಎರಚಿದ್ದರಿಂದ ಇಡೀ ಅಮೋಘ ಸಿದ್ದೇಶ್ವರ ದೇವಾಸ್ಥಾನದ ೧೦೦ ಎಕರೆ ಪ್ರಾಂಗಣ ಭಂಡಾರಮಯವಾಗಿತ್ತು. ಈ ಜಾತ್ರೆಯನ್ನು ಭಂಡಾರದೊಡೆಯನ ಜಾತ್ರೆ ಎಂದೇ ಕರೆಯಲಾಗುತ್ತದೆ.
ಕೈಲಾಸವಾಸಿಯಾಗಿದ್ದ ಅಮೋಘ ಸಿದ್ದೇಶ್ವರ, ಶಿವ-ಪಾರ್ವತಿಯರ ಸೇವಕರಾಗಿದ್ದರು. ಅಮೋಘ ಸಿದ್ಧೇಶ್ವರನ ಸೇವೆಗೆ ಶಿವ-ಪಾರ್ವತಿಯರು ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷ ಭಕ್ತಿ ಕರುಣಿಸಿ ಭೂಲೋಕಕ್ಕೆ ಬಂದ ಅಮೋಘ ಸಿದ್ದೇಶ್ವರ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದರಂತೆ.
ಸಾವಿರಾರು ವರ್ಷಗಳ ಹಿಂದೆ ಅರಕೇರಿ ಜಾಲಗೇರಿ ಗ್ರಾಮದ ಮಧ್ಯೆದ ಮುಮ್ಮಟ್ಟಿಗುಡ್ಡದಲ್ಲಿ ನೆಲೆಸಿರುವ ಅಮೋಘ ಸಿದ್ದೇಶ್ವರ ಹಲವು ಪವಾಡಗಳ ಮೂಲಕ ಭಕ್ತರ ಉದ್ಧಾರ ಮಾಡುತ್ತಿದ್ದಾರೆ. ಭಕ್ತರ ಕಷ್ಟ ಪರಿಹರಿಸೋ ಪವಾಡ ಪುರುಷರಾಗಿದ್ದಾರೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಮೂರು ದಿನಗಳ ಕಾಲ ಛಟ್ಟಿ ಅಮಾವಾಸ್ಯೆಯಂದು ಅಮೋಘ ಸಿದ್ಧೇಶ್ವರ ಜಾತ್ರೆ ನಡೆಯುತ್ತದೆ. ಇಲ್ಲಿಯ ಮತ್ತೊಂದು ವಿಶೇಷತೆ ಎಂದರೆ ಜಾತ್ರೆಗೆಂದು ವಿವಿಧ ಗ್ರಾಮಗಳಿಂದ ಭಕ್ತರು ಪಲ್ಲಕ್ಕಿಗಳನ್ನು ಹೊತ್ತುತರುತ್ತಾರೆ.
ಏಕಕಾಲದಲ್ಲಿ ಲಕ್ಷಾಂತರ ಜನರು ಹಾಗೂ ಇನ್ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಒಂದೆಡೆ ಸೇರುವ ಏಕೈಕ ಜಾತ್ರೆ ಇದಾಗಿದೆ. ಜಾತ್ರೆಗೆ ಆಗಮಿಸೋ ಪಲ್ಲಕ್ಕಿಗಳು ಭಂಡಾರಮಯವಾಗಿ ಭಕ್ತರ ಹರ್ಷೋದ್ಗಾರದ ಮಧ್ಯೆ ಅಮೋಘ ಸಿದ್ದೇಶ್ವರ ಗದ್ದುಗೆಯ ದರ್ಶನ ಮಾಡಿಸಲಾಗುತ್ತದೆ. ಬಳಿಕ ದೇಗುಲದ ಮುಂಭಾಗದಲ್ಲಿ ಪಲ್ಲಕ್ಕಿಗಳ ನೃತ್ಯ ನೆರವೇರಿಸಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಇಡೀ ಜಾತ್ರೆ ಭಂಡಾರಮಯವಾಗಿರುತ್ತದೆ. ಹರಕೆ ಹೊತ್ತ ಭಕ್ತರು ಪಲ್ಲಕ್ಕಿಗಳಿಗೆ ಭಂಡಾರವನ್ನು ಎರಚುತ್ತಾರೆ. ಭಂಡಾರ ಜಾತ್ರೆ, ಬಂಗಾರ ಜಾತ್ರೆ ಎಂದು ಭಕ್ತರು ಮೂರು ದಿನಗಳ ಕಾಲ ಸಂಭ್ರಮದಿಂದ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.
ಮಧ್ಯಾಹ್ನ ೨.೩೦ಕ್ಕೆ ಆರಂಭವಾಗುವ ಪಲ್ಲಕ್ಕಿಗಳ ಉತ್ಸವ ಸಂಜೆ ೭ರವರೆಗೆ ನಡೆಯುತ್ತದೆ. ವೇಳೆ ಅಮೋಘಸಿದ್ದ ಮಹಾರಾಜರ ಬಳಿ ಬೇಡಿಕೊಂಡ ಹರಕೆ ತೀರಿದ ಭಕ್ತರು ಭಂಡಾರ, ಖಾರೀಕ್ ಹಾಗೂ ಕುರಿ ಉಣ್ಣೆಯನ್ನು ನಡರೆದ ನೂರಾರು ಪಲ್ಲಕ್ಕಿಗಳ ಮೇಲೆ ಹಾರಿಸುವುದು ವಾಡಿಕೆ.
ಯಾವುದೇ ಜಾತಿ ಮತ, ಪಂಥ ಭೇದವಿಲ್ಲದೇ ಎಲ್ಲರೂ ಈ ಜಾತ್ರೆಯಲಾಗುವುದು ವಿಶೇಷ. ಈ ವರ್ಷದ ಗುಡ್ಡಾಪುರದ ದಾನಮ್ಮದೇವಿ ಜಾತ್ರೆ ಮತ್ತು ಅರಕೇರಿಯಲ್ಲಿನ ಅಮೋಘಸಿದ್ದೇಶ್ವರನ ಜಾತ್ರೆಗಳನ್ನು ಒಟ್ಟಿಗೆ ಮೂರು ದಿನಗಳ ಕಾಲ ಆಚರಿಸಲಾಗುತ್ತಿದೆ. ಮಹಾರಾಷ್ಟç ಕರ್ನಾಟಕ ಗಡಿಭಾಗದ ಅರಕೇರಿ, ಜಾಲಗೇರಿ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ.


