ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದ ಓರೆ ಕೋರೆಗಳನ್ನು ತಿದ್ದುತ್ತಾ ಸಮಾಜದ ವಿವಿಧ ರಂಗಗಳ ಮೇಲೆ ಬೆಳಕು ಛಲ್ಲುತ್ತಾ ತಮ್ಮ ಜೀವನವನ್ನೇ ಸಮಾಜಕ್ಕೆ ಮುಡುಪಾಗಿಡುತ್ತಾ ಬಂದಿರುವ ,ಕವಿ ಸಾಹಿತಿಗಳ ಆರ್ಥಿಕ ಸ್ಥಿತಿ ಬಹಳಷ್ಡು ಕಡೆ ಚಿಂತಾಜನಕವಾಗಿರುತ್ತದೆ. ಕವಿ ಸಾಹಿತಿಗಳು ಆರ್ಥಿಕವಾಗಿಯೂ ಸಮರ್ಥರಾದರೆ ಸಮಾಜಕ್ಕೆ ಮತ್ತಷ್ಡು ಕೊಡುಗೆ ನಿರೀಕ್ಷಿಸಲು ಸಾಧ್ಯವಾಗುತ್ತದೆ, ಕಾರಣ ರಾಜ್ಯ ಮತ್ತು ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮತ್ತು ಇತರ ಸೌಲಭ್ಯಗಳಲ್ಲಿ ಕವಿ ಸಾಹಿತಿಗಳಿಗೆ ಮೀಸಲಾತಿ ಕಲ್ಪಿಸಬೇಕೆಂದು ಕವಿಪೀಠದ ಜನಕ ಕಪ್ಪುಕೋಟಿನ ಕವಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.
ಅವರು ಧಾರವಾಡದಲ್ಲಿ ನಡೆದ ಪ್ರಥಮ ರಾಜ್ಯಮಟ್ಟದ ಕವಿಪೀಠ ಮಹಾ ಸಮ್ಮೇಳನ ಹಾಗೂ ಕನ್ನಡ ನುಡಿ ಸಂಭ್ರಮದ ಸರ್ವಾಧ್ಯಕ್ಷರಾಗಿ ಸಮರ್ಥವಾಗಿ ಮಾಹಾ ಸಮ್ಮೇಳಮದ ಯಶಸ್ವಿಗೊಳಿಸಿ ವಿಜಯಪುರಕ್ಕೆ ಆಗಮಿಸಿರುವ ಅವರಿಗೆ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಮ್ಮ ಸಮಾಜದಲ್ಲಿಯ ಕವಿ- ಸಾಹಿತಿಗಳಿಗೆ ಸಮ್ಮೇಳನಗಳಿಗೆ ಹೋಗಿ ಬರಲು ಉಚಿತ ಬಸ್ ಪಾಸ್ ಸೌಲಭ್ಯ ಸಹ ಕಲ್ಪಿಸಬೇಕಾದದ್ದು ಅಗತ್ಯವಿದೆ, ವಿಶೇಷವಾಗಿ ರಾಜ್ಯದಲ್ಲಿ ನಿರ್ಮಿಸಲಾಗುತ್ತಿರುವ ಖಾಸಗಿ ಅಥವಾ ಸರಕಾರಿ ಬಡವಾಣೆಗಳಿಗೆ ಅವುಗಳಲ್ಲಿಯ ರಸ್ತೆಗಳಿಗೆ ಸಾಧಕ ಕವಿ- ಸಾಹಿತಿ- ಕಲಾವಿದರ ಹೆಸರುಗಳನ್ನು ಕಡ್ಡಾಯವಾಗಿ ಇಡುವ ವಿಶೇಷ ಆದೇಶವನ್ನು ಸರಕಾರ ಜಾರಿಮಾಡಬೇಕೆಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಮಲ್ಲಿಕಾರ್ಜುನ ಭೃಂಗಿಮಠ ಅವರಿಂದ ಕವಿಪೀಠದ ಪರಿಕಲ್ಪನೆ ಜನ್ಮ ತಾಳಿ ಮಹಾ ಸಮ್ಮೇಳನ ಆಗುವವರೆಗೆ ಬೆಳೆದದ್ದು ವಿಜಯಪುರಕ್ಕೆ ಇದೊಂದು ಐತಿಹಾಸಿಕ ಕೀರ್ತಿ ಎಂದ ಅವರು ಇಂದಿನ ಯುವ ಪೀಳಿಗೆಗೆ ಹಿಂದಿನ ,ವರ್ತಮಾನದ ಕವಿ ಸಾಹಿತ್ಯ ಸಾಧಕರನ್ನುಪರಿಚಯಿಸುವ ಇಂತಹ ಕವಿಪೀಠ ಮಹಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭೃಂಗಿಮಠ ಅವರಿಗೆ ಆಯ್ಕೆ ಮಾಡಿದ್ದು ಅವರು ಅದನ್ನು ಸಮರ್ಥವಾಗಿ ನಿಭಾಯಿಸಿದ್ದು ಶ್ಲಾಘನೀಯವಾಗಿದೆ ಎಂದರು.
ಸಾಹಿತಿ ಮರುಗೇಶ ಸಂಗಮ ಅವರು ಮಾತನಾಡಿ, ಭೃಂಗಿಮಠರ ಕ್ರಿಯಾತ್ಮಕ ಸಾಹಿತ್ಯ ಸಾಂಸ್ಕೃತಿಕ ಸೇವೆ ಇತರರಿಗೆ ಮಾದರಿಯಾಗಿದೆ, ಕವಿ, ಸಾಹಿತಿಗಳಿಗೆ ವಿಶೇಷ ಯೋಜನೆಗಳನ್ನು ಸರಕಾರ ರೂಪಿಸಬೇಕಿದೆ ಎಂದರು.
ಚೇತನ ಮಹಾವಿದ್ಯಾಲಯದ ಪ್ರೊ. ಎ.ಎಸ್ ಕೊಳಮೇಲಿ, ಅಧ್ಯಕ್ಷತೆ ವಹಿಸಿದ್ದ ಜಿ.ವಿ.ಮಠ, ರೇವಣಸಿದ್ದಯ್ಯ ಭೃಂಗಿಮಠ ಅವರು ಮಾತನಾಡಿದರು.
ಋಷೀಲ ಭೃಂಗಿಮಠ ಸ್ವಾಗತಿಸಿದರು, ಹಿರಿಯರಾದ ನೀಲಮ್ಮ ಆರಾಧ್ಯ, ಡಾ ಶ್ವೇತಾ ಮಠ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

