ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಪರಿಶ್ರಮದಿಂದ ಸಾಧನೆ ಮಾಡುವ ಮೂಲಕ ತಮ್ಮ ಮನೆಗೆ, ತಾವು ಕಲಿಯುವ ಕಾಲೇಜಿಗೆ, ಊರಿಗೆ ಕೀರ್ತಿ ತರುವ ತರಬೇಕೆಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕಾಲೇಜಿನ ವಿವಿಧ ಘಟಕಗಳ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ನಿರಂತರ ಅಧ್ಯಯನದಲ್ಲಿ ತೊಡಗುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು. ಕಾಲೇಜಿನ ಅಭಿವೃದ್ಧಿಗೆ ಸದಾ ನಿಮ್ಮೊಂದಿಗೆ ಇರುವುದಾಗಿ ಹೇಳಿದರು.
ಬೀಳಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂಪತ್ ಲಮಾಣಿ ಮಾತನಾಡಿ, ಸರ್ಕಾರಿ ಕೆಲಸ ಗಿಟ್ಟಿಸುವುದು ಸಾಧನೆ ಅಲ್ಲ. ಸ್ವಾವಲಂಬನೆ, ಸ್ವಾಭಿಮಾನದ ಬದುಕೇ ನಿಜವಾದ ಸಾಧನೆ. ಬಡತನ ಮತ್ತು ಹಸಿವು ಶಾಪವಲ್ಲ. ಸಾಧಕರಿಗೆ ಅದು ಎಂದು ವರವಾಗಬೇಕು. ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ಅರುಣಿಮಾ ಸಿನ್ಹ ಜಗತ್ತಿನ ಏಳು ಪರ್ವತಗಳನ್ನು ಏರಿದ್ದು ನಮಗೆ ಸ್ಪೂರ್ತಿ. ಪದವಿ ಶಿಕ್ಷಣದ ಹಂತದ ಅವಧಿಯಲ್ಲಿ ಅಗಾಧ ಸಾಧನೆ ಮಾಡಲು ಅರ್ಪಣಾಭಾವದಿಂದ ಓದಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನೀಲಪ್ಪ ಹೊಸಮನಿ ಮಾತನಾಡಿ, ಗೂಗಲ್ ಮ್ಯಾಪ್ ನಂಬಿ ವಿದ್ಯಾರ್ಥಿ ಜೀವನ ಯಾವುದೇ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ನಿಮ್ಮಲ್ಲಿರುವ ಬೌದ್ಧಿಕ ಶಕ್ತಿಯನ್ನು ಬಳಸಿಕೊಂಡು ಸಾಧಕರ ಪ್ರಭಾವಳಿ ಹೊಂದಬೇಕೆಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಅಮಿತ ಮಿರ್ಜಿ, ಎನ್ಎಸ್ಎಸ್ ಘಟಕದ ಸಂಚಾಲಕ ಡಾ.ಎಚ್.ಎಂ.ನಾಟೀಕಾರ, ಡಾ.ರೇಣುಕಾ ಅಂಬಲಿ, ಡಾ.ಪ್ರಶಾಂತ ನಾಯಕ, ಡಾ.ಬಾನು, ಮಮತಾ ಎನ್., ಇಸ್ಮಾಯಿಲ್ ಶಫಿವುಲ್ಲಾ, ಪ್ರಿಯಾಂಕಾ ಜಿಂದೆ ಇತರರು ಇದ್ದರು. ಪ್ರಾಧ್ಯಾಪಕ ಶ್ರೀಶೈಲ ಬಳವಾಟ ಪ್ರಾಸ್ತವಿಕವಾಗಿ ಮಾತನಾಡಿದರು. ಭೀಮಶಿ ಹಡಪದ ಸ್ವಾಗತಿಸಿದರು. ಪ್ರೊ.ಲೀಲಾವತಿ ನಿರೂಪಿಸಿದರು. ಎಸ್.ಬಿ.ವಾಲೀಕಾರ ವಂದಿಸದರು. ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಯನ್ನು, ಕಾಲೇಜಿಗೆ ಹೊಸದಾಗಿ ಬಂದ ಬೋಧಕರನ್ನು, ಪಿಎಚ್ಡಿ ಪದವಿ ಪಡದೆ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

