ಅತ್ಯುತ್ತಮ ಪ್ರಕಾಶನಕ್ಕೆ ನೀಡುವ ದಿ. ಎಂ.ಸಿ.ಮನಗೂಳಿ ದತ್ತಿ ಪ್ರಶಸ್ತಿಗೆ ಸಾಧನಾ ಪ್ರಕಾಶನ ಆಯ್ಕೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ನೀಡುವ ೨೦೨೪ನೇ ಸಾಲಿನ ಅತ್ಯುತ್ತಮ ಪ್ರಕಾಶನಕ್ಕೆ ನೀಡುವ ದಿ. ಎಂ.ಸಿ.ಮನಗೂಳಿ ದತ್ತಿ ಪ್ರಶಸ್ತಿಯನ್ನು ಬೆಂಗಳೂರಿನ ಸಾಧನಾ ಪ್ರಕಾಶನಕ್ಕೆ, ಹಿರಿಯ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರಿಗೆ ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ ಹಾಗೂ ಉತ್ತಮ ಮುಖಪುಟ ಕಲಾವಿದರಿಗೆ ನೀಡುವ ಬೆರಗು ಮುಖಪುಟ ವಿನ್ಯಾಸ ಪ್ರಶಸ್ತಿಗೆ ಗದಗದ ವಾಸುದೇವ ರಾವುತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ತಿಳಿಸಿದ್ದಾರೆ.
ಅತ್ಯುತ್ತಮ ಪ್ರಕಾಶನಕ್ಕೆ ನೀಡುವ ದಿ. ಎಂ.ಸಿ.ಮನಗೂಳಿ ದತ್ತಿ ಪ್ರಶಸ್ತಿಯು ೨೫ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ, ಶಾಸಕ ಅಶೋಕ ಮನಗೂಳಿ ಅವರು ತಮ್ಮ ತಂದೆಯವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿಸಿದ್ದು ಮೊದಲ ವರ್ಷದ ಈ ಪ್ರಶಸ್ತಿಗೆ ಬೆಂಗಳೂರಿನ ಸಾಧನಾ ಪ್ರಕಾಶನವು ಕಳೆದ ನಾಲ್ಕು ದಶಕಗಳಿಂದ ನಿರಂತರ ಪುಸ್ತಕೊದ್ಯಮದಲ್ಲಿ ತೊಡಗಿಕೊಂಡಿದೆ, ಈವರೆಗೆ ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು ಅವರ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿಗೆ ಹ.ಮ.ಪೂಜಾರ ಅವರನ್ನು ಆಯ್ಕೆ ಮಾಡಲಾಗಿದ್ದು, ಕಳೆದ ಐದು ದಶಕಗಳಿಂದ ಮಕ್ಕಳ ಸಾಹಿತ್ಯರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೧೦ಸಾವಿರ ರೂ. ನಗದು ಹಾಗೂ ಪ್ರಶಸ್ತಿಫಲಕ ಒಳಗೊಂಡಿದೆ. ಮುಖಪುಟ ವಿನ್ಯಾಸಕ್ಕೆ ನೀಡುವ ಪ್ರಶಸ್ತಿಯು ೫ಸಾವಿರ ರೂ ನಗದು, ಪ್ರಶಸ್ತಿ ಪತ್ರ ಒಳಗೊಂಡಿದ್ದು ಗದಗದ ವಾಸುದೇವ ರಾವುತ್ ಈವರೆಗೆ ೫೦೦ಕ್ಕೂ ಹೆಚ್ಚು ಮುಖಪುಟಗಳನ್ನು ಹಾಗೂ ಸಾವಿರಕ್ಕೂ ಹೆಚ್ಚೂ ಪುಸ್ತಕ ಪುಟವಿನ್ಯಾಸವನ್ನು ಮಾಡುತ್ತಲೇ ತೆರೆಮರೆಯಲ್ಲಿರುವ ಕಲಾವಿದರು. ಡಿಸೆಂಬರ್ ೨೪ ರಂದು ಸಿಂದಗಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

