ಮೋರಟಗಿಯಿಂದ ಅರಕೇರಿವರೆಗೆ ದೀಡ್ ನಮಸ್ಕಾರ | ಯುವ ಮುಖಂಡನ ೧೨೦ ಕಿ.ಮೀ. ಕಠಿಣ ಯಾತ್ರೆ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ದು ಕೆರಿಗೊಂಡ
ಮೋರಟಗಿ: ಮುಸ್ಲಿಂ ಯುವ ಮುಖಂಡರೊಬ್ಬರು ಹಿಂದೂ ದೇವರಿಗೆ ಹೊತ್ತ ಹರಕೆಯನ್ನು ತೀರಿಸುವ ಮೂಲಕ ಸಮಾಜಕ್ಕೊಂದು ಸೌಹಾರ್ದ ಸಂದೇಶ ಸಾರುತ್ತಿದ್ದಾರೆ.
ಇದು ಸಣ್ಣ ಹರಕೆಯಲ್ಲ, ಐದು ದಿನಗಳ ಕಠಿಣ ದೇಹದಂಡನೆ. ಈ ಹರಕೆಗೆ ಎಲ್ಲ ಸಮಾಜದ ೬೦ಕ್ಕೂ ಹೆಚ್ಚು ಜನ ಸಾಥ್ ನೀಡಿದ್ದಾರೆ.
ಪಟ್ಟಣದ ಕಾಂಗ್ರೆಸ್ ಯುವ ಮುಖಂಡ ಯುಸೂಫ್ ಯಾಕೂಬ್ ಸಾಬ್ ಮುಲ್ಲಾ ಹರಕೆ ಹೊತ್ತವರು.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದರೆ ಪಟ್ಟಣದಿಂದ ಅರಕೇರಿ ಗುಡ್ಡದಲ್ಲಿರುವ ಭಂಡಾರದ ಒಡೆಯ ಅಮೋಘಸಿದ್ಧೇಶ್ವರ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸುವುದಾಗಿ ಯುಸೂಫ್ ಹರಕೆ ಹೊತ್ತಿದ್ದರು. ಪಟ್ಟಣದಿಂದ ಈ ದೇವಸ್ಥಾನ ೧೨೦ ಕಿ.ಮೀ.ದೂರದಲ್ಲಿದ್ದು, ಬುಧವಾರ ಬೆಳಗ್ಗೆ ಪಟ್ಟಣದ ಕನ್ನಯ್ಯ ಮುತ್ಯಾ ದೇವಸ್ಥಾನದಿಂದ ಹರಕೆ ಯಾತ್ರೆ ಆರಂಭಿಸಿದ್ದಾರೆ. ಪ್ರತಿ ದಿನ ಅಂದಾಜು ೨೫ ಕಿ.ಮೀ. ದೂರ ಕ್ರಮಿಸುತ್ತ ಭಾನುವಾರ ಅಮೋಘಸಿದ್ದೇಶ್ವರ ದೇವಸ್ಥಾನ ತಲುಪಲಿದ್ದಾರೆ.
ಹಂಚನಾಳ, ಗಬಸಾವಳಗಿ, ಯರಗಲ್, ಸಿಂದಗಿ, ಚಿಕ್ಕಸಿಂದಗಿ, ಕನ್ನೊಳ್ಳಿ, ದೇವರಹಿಪ್ಪರಗಿ, ಶಿವಣಗಿ, ಹೊನ್ನುಟಗಿ, ಕವಲಗಿ, ಕಗ್ಗೋಡ, ವಿಜಯಪುರ ಮಾರ್ಗವಾಗಿ ಯಾತ್ರೆ ಸಾಗಲಿದ್ದು, ಮಾರ್ಗ ಮಧ್ಯೆ ಅನೇಕ ಭಕ್ತರು ಯುಸೂಫ್ ಹಾಗೂ ತಂಡದವರಿಗೆ ಉಪಹಾರ, ಹಣ್ಣು ಹಂಪಲು, ವಸತಿ ವ್ಯವಸ್ಥೆ ಕೈಗೊಳ್ಳುತ್ತಿದ್ದಾರೆ. ಯಾತ್ರೆ ಯಶಸ್ವಿಯಾಗಲಿ ಎಂದು ಜಾತ್ಯತೀತವಾಗಿ ಎಲ್ಲ ಸಮಾಜದವರೂ ಹಾರೈಸುತ್ತಿದ್ದಾರೆ.

“ಯುಸೂಫ್ ಅವರ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ಯಾತ್ರೆಯಲ್ಲಿ ಭಾಗವಹಿಸಿದ ಎಲ್ಲರಿಗೂ ದೇವರು ಅನುಗ್ರಹ ಮಾಡಲಿ. ಅವರ ಇಚ್ಛೆಯಂತೆ ಎಲ್ಲ ಸಮಾಜದವರ ಸಮಗ್ರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಿಸುವೆ.”
– ಅಶೋಕ ಮನಗೂಳಿ
ಸಿಂದಗಿ ಶಾಸಕರು

“ಮನಗೂಳಿ ಮನೆತನದವರ ಸಮಾಜ ಸೇವೆ ಅವಿಸ್ಮರಣೀಯವಾಗಿದೆ. ಅಶೋಕ ಅವರ ತಂದೆ ಎಂ.ಸಿ.ಮನಗೂಳಿ ಅವರು ಬರಗಾಲ ಸಂದರ್ಭದಲ್ಲಿ ನಮ್ಮ ಭಾಗದ ಹಳ್ಳಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ಜೀವಗಳನ್ನು ಉಳಿಸಿದ್ದಾರೆ. ಅಶೋಕ ಅವರೂ ಈ ಭಾಗದ ಅಭಿವೃದ್ಧಿ ಬಗ್ಗೆ ಅಪಾರ ಕಳಕಳಿ ಹೊಂದಿದ್ದಾರೆ. ಇವರು ಆಯ್ಕೆಯಾದರೆ ಶಾಖಾಹಾರ ಸೇವಿಸುತ್ತ ದೀಡ್ ನಮಸ್ಕಾರ ಹಾಕುವುದಾಗಿ ಚುನಾವಣೆ ಸಂದರ್ಭದಲ್ಲೇ ಹರಕೆ ಹೊತ್ತಿದ್ದೆ. ಫಲಿತಾಂಶ ಬರುತ್ತಿದ್ದಂತೆ ಹರಕೆ ತೀರಿಸಲು ಮುಂದಾಗಿದ್ದೆ. ಆದರೆ ಆಗ ಮನೆಯಲ್ಲಿ ಹೆರಿಗೆಯಾಗಿ ಸ್ವಲ್ಪ ಅನಾನುಕೂಲವಾಗಿದ್ದರಿಂದ ಈಗ ಹರಕೆ ತೀರಿಸುತ್ತಿದ್ದೇನೆ.”
– ಯುಸೂಫ್ ಮುಲ್ಲಾ
ಕಾಂಗ್ರೆಸ್ ಯುವ ಮುಖಂಡ, ಮೋರಟಗಿ

