ಉದಯರಶ್ಮಿ ದಿನಪತ್ರಿಕೆ
ಇಂಡಿ: ಭಾರತ ಭಾವೈಕ್ಯತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿರುವುದರ ಜೊತೆಗೆ ಧಾರ್ಮಿಕತೆ, ಸಂಪ್ರದಾಯ, ಸಂಸ್ಕೃತಿ, ಆಚರಣೆಗಳಿಗೂ ಇಲ್ಲಿ ತನ್ನದೇ ಆದ ಮಹತ್ವಗಳಿವೆ. ಪ್ರತಿಯೊಂದು ಧರ್ಮದವರು ಶ್ರದ್ಧೆ ಸಂಪ್ರದಾಯಗಳಿಂದ ತಮ್ಮ ತಮ್ಮ ಹಬ್ಬಗಳ ಆಚರಣೆಯನ್ನು ನಡೆಸುತ್ತಾರೆ ಎಂದು ಉಜೈನಿ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ಅವರು ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಕಾರ್ತಿಕ ಮಾಸದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ದೇವರ ಜಾತ್ರೆಯ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ನವರಾತ್ರಿಯ ನಂತರ ಬರುವ ದೀಪಾವಳಿ ದೀಪಗಳ ಹಬ್ಬವಾಗಿದ್ದು, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಉದ್ದೇಶವನ್ನು ತಿಳಿಸುತ್ತದೆ. ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವ ಪ್ರಯಾಣವನ್ನು ಸೂಚಿಸುತ್ತದೆ. ದೀಪಾವಳಿಯ ಹಬ್ಬದಂದು ಬರುವ ಕಾರ್ತಿಕ ಮಾಸ ಕೂಡ ತನ್ನದೇ ಆದ ಮಹತ್ವ ಹಾಗೂ ಐತಿಹಾಸಿಕ ಅಂಶಗಳಿಂದ ಉಲ್ಲೇಖಿತಗೊಂಡಿದೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವವರು ತಮ್ಮ ಪೂರ್ವಜರ ಆಶೀರ್ವಾದ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಕಾರ್ತಿಕ ಮಾಸದಲ್ಲಿ ಬೆಳಗುವ ಸಾಂಪ್ರದಾಯಿಕ ದೀಪಗಳು ಪೂರ್ವಜರ ಆತ್ಮಗಳು ಸ್ವರ್ಗವನ್ನು ತಲುಪುವ ಮಾರ್ಗವನ್ನು ಬೆಳಗಿಸುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಜೈನಾಪುರದ ರೇಣುಕಾ ಶಿವಾಚಾರ್ಯರು, ಮಮದಾಪೂರ ಅಭಿನವ ಮುರುಘೇಂದ್ರ ಸ್ವಾಮಿಗಳು, ಅಗರಖೇಡ ಪ್ರಭುಲಿಂಗ ಸ್ವಾಮಿಗಳು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಬಾಬುಸಾಹುಕಾರ , ತಮ್ಮಣ್ಣ ಪೂಜಾರಿ, ತಮ್ಮಾರಾಯ ಮಿರ್ಜಿ, ಭೀಮರಾಯ ಪಂತೋಜಿ, ಕಲ್ಲಪ್ಪ ಘಂಟಿ, ಎಂ. ಆರ್. ಬೇಗ್, ಯಶವಂತ ಖಸ್ಕಿ ಸೇರಿದಂತೆ ತಡವಲಗಾ ಗ್ರಾಮದ ನೂರಾರು ಭಕ್ತರು ಉಪಸ್ಥಿತರಿದ್ದರು.

