ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಂಬಂಧ ಮುಖ್ಯವಲ್ಲ ಧರ್ಮವೇ ಪ್ರಧಾನ ಎನ್ನುವ ಆದರ್ಶ ಭಗವದ್ಗೀತೆಯ ತತ್ವದಲ್ಲಿ ಅಡಕವಾಗಿದೆ ಎಂದು ಸಾಹಿತಿ, ನಿವೃತ್ತ ಮುಖ್ಯಗುರು ಅಶೋಕ ಮಣಿ ಹೇಳಿದರು.
ಪಟ್ಟಣದ ರೇವಣ ಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಯತಿವರೇಣ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೪ ಸಂಬಂಧಿ ಶ್ಲೋಕ ಪಠಣ ಕೇಂದ್ರದಲ್ಲಿ ಅವರು ಮಾತನಾಡಿದರು.
ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಅಧರ್ಮಕ್ಕೆ ಆದ ಅವನತಿಯನ್ನು ನೋಡಬಹುದಾಗಿದೆ. ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸದರೂ ಧರ್ಮ ಜಯವನ್ನೇ ಸಾಧಿಸಿದೆ. ಅಧರ್ಮದ ಕಾರ್ಯವನ್ನು ಮಾಡಬಾರದು. ಅಲ್ಲದೆ ಅಧರ್ಮಕ್ಕೆ ಎಂದೂ ಪ್ರೋತ್ಸಾಹ ಕೊಡಬಾದರು. ಜೀವನದ ಮೌಲ್ಯವನ್ನು ಎತ್ತಿ ಹಿಡಿಯುವುದು ಗೀತೆಯಾಗಿದೆ. ಸ್ತುತಿಗಳಿಂದ ಕ್ಲೇಶ ನಿವಾರಣೆ ಯಾಗುತ್ತದೆ ಎಂದರು.
ಮುಖ್ಯಗುರು ಎಚ್.ಎನ್.ಇಟಗಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಅತೀ ಕಷ್ಟದ ಸಮಸ್ಯೆಗಳಿಗೆ ಸುಲಭದ ಮಾರ್ಗದಲ್ಲಿ ಪರಿಹಾರ ಭಗವದ್ಗೀತೆಯಲ್ಲಿದೆ. ಅದನ್ನು ಅರಿಯಬೇಕು ಎಂದರು.
ಈ ಸಂದರ್ಭದಲ್ಲಿ ಅಭಿಯಾನದ ಸಂಚಾಲಕ ರಾಮಚಂದ್ರ ಹೆಗಡೆ, ಪ್ರಶಿಕ್ಷಕಿ ರಂಜಿತಾ ಹೆಗಡೆ ಶಿಕ್ಷಕರಾದ ಆರ್.ಎಸ್.ಲಮಾಣಿ. ವೈ.ಎಚ್.ಹಳೇನಿಡಗುಂದಿ, ಬಿ.ಜಿ.ತಾಳಿಕೋಟಿ ಸೇರಿದಂತೆ ಇತರರು ಇದ್ದರು.

