ಸಿಂದಗಿ ಪುರಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಒಳಚರಂಡಿ ಕಾಮಗಾರಿಗೆ ನೀಡಿದ ಅವಧಿ ಮುಗಿದರೂ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಅವರಿಗೆ ನೊಟೀಸ್ ನೀಡಿ ಎಂದು ಈಗಾಗಲೇ ತಿಳಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ನಿಮಗೆ ಯಾವುದಾದರೂ ತೊಂದರೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಾಮಗಾರಿ ಮಾಡಿದರೇ ಆಗದು ಎಂದು ಒಳಚರಂಡಿ ಇಲಾಖೆಯ ಅಧಿಕಾರಿ ಎಂ.ಎಲ್.ಹೋನಕಟ್ಟಿ ಅವರಿಗೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಎಚ್ಚರಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಮಾಡಲಾಗಿದೆ. ನೀವು ಅಂದು ಎಲ್ಲಿಗೆ ರಸ್ತೆ ಇದೆಯೋ ಅದರ ಪಕ್ಕದಲ್ಲಿ ಅರಣ್ಯ ಇಲಾಖೆ ಗಿಡಗಳು ಹಚ್ಚಿದರೆ, ವಿದ್ಯುತ್ ಇಲಾಖೆಯವರು ವಿದ್ಯುತ್ ಕಂಬಗಳು ಪಕ್ಕದಲ್ಲಿ ಹಾಕಿದ್ದಾರೆ. ಹಾಕುವ ಮುಂಚೆ ಯೋಚಿಸಿದರೆ ಇಂದು ರಸ್ತೆ ಮಧ್ಯದಲ್ಲಿ ಕಂಬಗಳು ಬರುತ್ತಿರಲಿಲ್ಲ. ಇದೀಗ ರಸ್ತೆಯ ಮೇಲಿರುವ ಕಂಬಗಳನ್ನು ಸ್ಥಳಾಂತರಿಸಬೇಕಾದರೆ ಅದಕ್ಕೆ ಪುರಸಭೆ ಹಣ ಪಾವತಿಸಬೇಕು ಎನ್ನುತ್ತೀರಿ, ಆದರೆ ಕಂಬಗಳ ಸ್ಥಳಾಂತರಿಸಲು ಸುಮಾರು ೫೦-೬೦ಲಕ್ಷ ರೂ. ಕಟ್ಟಬೇಕಾಗುತ್ತದೆ ಅಷ್ಟೊಂದು ಆದಾಯ ಪುರಸಭೆ ಹೊಂದಿಲ್ಲ. ನಮ್ಮ ಬಜೆಟ್ ನಲ್ಲಿ ಜನರಿಗೆ ಮೂಲಭೂತ ಸೌಕರ್ಯ ನೀಡಬೇಕಾಗಿದೆ ನೀವು ಆದಾಯಕ್ಕಿಂತಲೂ ಹೆಚ್ಚಿನ ಹಣ ವಿದ್ಯುತ್ ಇಲಾಖೆಗೆ ಕಟ್ಟುವುದು ಹೇಗೆ? ನೀವು ಮಾಡಿರುವ ತಪ್ಪಿಗೆ ಪುರಸಭೆಗೆ ಹೊರೆ ಹಾಕುವುದು ಸರಿಯಲ್ಲ. ಪುರಸಭೆ ವತಿಯಿಂದ ಜೆಸಿಬಿ ವಾಹನ ಸೌಲಭ್ಯ ಒದಗಿಸುತ್ತೇವೆ. ಅರಣ್ಯ ಇಲಾಖೆಯ ಗಿಡಗಳು ಮತ್ತು ವಿದ್ಯುತ್ ಕಂಬಗಳು ಸ್ಥಳಾಂತರ ಮಾಡಿ ಕೋಡಿ ಎಂದು ತಿಳಿಸಿದರು.
ಪುರಸಭೆ ಚೆಕ್ ಗಳು ಬೇಕಾಬಿಟ್ಟಿಯಾಗಿ ಸಂದಾಯವಾಗುತ್ತಿವೆ. ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ಗಮನಕ್ಕೆ ಬರುತ್ತಿಲ್ಲವೇ ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ವರದಿಗಾರರ ಪ್ರಶ್ನೆಗೆ ಪುರಸಭೆಯ ಮುಖ್ಯಾಧಿಕಾರಿ ಎಸ್.ರಾಜಶೇಖರ ಉತ್ತರಿಸಿ, ಹಾಗೆ ಆಗಲು ಸಾಧ್ಯವಿಲ್ಲ. ಒಂದು ವೇಳೆ ಬೋಗಸ್ ಚೆಕ್ ಇದ್ದರೆ ಅವರು ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಮತ್ತು ಸಂಬಂದಿಸಿದ ಬ್ಯಾಂಕಗಳೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಮಾಡಲಾಗಿದೆ ಎಂದು ಹೇಳಿದರು.
ಈ ವೇಳೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಮುಖ್ಯಾಧಿಕಾರಿ ಎಸ್. ರಾಜಶೇಖರ, ಅಜರ್ ನಾಟೀಕಾರ, ನಬಿರಸೂಲ್ ಉಸ್ತಾದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಗಳು ಇದ್ದರು.
“ಶಾಸಕರೊಡನೆ ಪುರಸಭೆಗೆ ಬಜೆಟ್ ನೀಡುವ ಕುರಿತು ಚರ್ಚಿಸಿದ್ದೆನೆ. ಸಹಕರಿಸುವ ಭರವಸೆ ನನಗಿದೆ. ನನಗೆ ಬೇಕಾಗುವ ಅಂದಾಜು ಅನುದಾನದ ಕುರಿತು ಶಾಸಕರಿಗೆ ಸ್ವತಃ ಪತ್ರ ಬರೆದು ಮನವಿ ಮಾಡುವೆ.”
– ಶಾಂತವೀರ ಬಿರಾದಾರ
ಪುರಸಭೆ ಅಧ್ಯಕ್ಷರು, ಸಿಂದಗಿ

