ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನಮ್ಮ ದೇಶ ಸಂವಿಧಾನವು ಶಾಶ್ವತ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಅದು ನಮ್ಮ ಮಾರ್ಗದರ್ಶಿ ತತ್ವಗಳಾಗಿ ಕಾರ್ಯನಿರ್ವಹಿಸುತ್ತದೆ. ಸಂವಿಧಾನ ಅಂಗೀಕಾರವಾದ ನ.೨೬ ರಂದು ದೇಶದಲ್ಲಿ ಸಂವಿಧಾನ ದಿನಾಚರಣೆ ಆಚರಿಸುವ ಮೂಲಕ ಸಂವಿಧಾನದ ಆಶಯ, ಮೂಲ ತತ್ವಗಳನ್ನು ಅರಿತುಕೊಂಡು ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ತಾಲೂಕಾಡಳಿತವು ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದಡಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ದೇಶದ ಸಂವಿಧಾನ ರಚಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ ಅಗ್ರಗಣ್ಯವಾಗಿದೆ. ಡಾ.ಅಂಬೇಡ್ಕರ ಅವರು ಓದಿನ ಮೂಲಕ ವೈರಿಗಳನ್ನು ಎದುರಿಸಬಹುದು ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹಾನ್ ನಾಯಕ. ಇಂತಹ ನಾಯಕ ರಚಿಸಿರುವ ಸಂವಿಧಾನದ ಆಧಾರದ ಮೇಲೆ ದೇಶ ನಿಂತಿದೆ. ಸಂವಿಧಾನದ ಪೀಠಿಕೆ ಓದುವ ಮೂಲಕ ಸಂವಿಧಾನದ ಆಶಯವನ್ನು ಜಗತ್ತಿಗೆ ತಿಳಿಸುವ ಮಹಾನ್ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣವೆಂದರು.
ಡಿಎಸ್ಎಸ್ ಮುಖಂಡ ಪರಶುರಾಮ ದಿಂಡವಾರ ಮಾತನಾಡಿ, ದೇಶದಲ್ಲಿರುವ ಎಲ್ಲ ಜಾತಿ, ಧರ್ಮ, ಎಲ್ಲ ವರ್ಗದ ಜನರಿಗೆ ಸಮಾನತೆ ಸಿಗುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರು ಸಂವಿಧಾನ ರಚಿಸಿ ಅಮೂಲ್ಯವಾದ ಸಂವಿಧಾನ ನೀಡಿದ್ದಾರೆ. ಇಂತಹದರಲ್ಲಿ ನಮ್ಮನ್ನು ಗೌರವಿಸುವ ಸಂವಿಧಾನ ಬೇಕಾಗಿದೆ ಎಂದು ಪೇಜಾವರ್ ಶ್ರಿಗಳು ಹೇಳಿಕೆ ನೀಡಿರುವದು ಖಂಡನೀಯ. ಇಂತಹ ಖಂಡನೀಯ ಹೇಳಿಕೆ ನೀಡಿರುವದು ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ. ಇಂತಹ ಹೇಳಿಕೆ ನೀಡಿರುವ ಪೇಶಾವರಶ್ರೀಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಬಿಇಓ ವಸಂತ ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವ್ಹಿ.ಬಿ.ಗೊಂಗಡಿ, ಸಿಡಿಪಿಓ ಶಿಲ್ಪಾ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಜಿ.ಐ.ಬೆಕಿನಾಳ, ವಿರೇಶ ಗೂಡ್ಲಮನಿ, ಅಗ್ನಿಶಾಮಕ ದಳದ ಭೀಮಾಶಂಕರ ಎಂ.ಎಂ., ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಅಕ್ಷರ ದಾಸೋಹ ಅಧಿಕಾರಿ ಸಂಗನಗೌಡ ಬಿರಾದಾರ, ತಹಸೀಲ್ದಾರ ಕಚೇರಿ ಸಿಬ್ಬಂದಿ ಮಂಜುನಾಥ ಹಳ್ಳೂರ, ಡಿಎಸ್ಎಸ್ ಮುಖಂಡರಾದ ಮಹಾಂತೇಶ ಸಾಸಾಬಾಳ, ತಮ್ಮಣ್ಣ ಕಾನಾಗಡ್ಡಿ, ರಾಜು ದಿಂಡವಾರ, ಅರವಿಂದ ಸಾಲವಾಡಗಿ, ಮುಖಂಡರಾದ ರಂಜಾನ ಹೆಬ್ಬಾಳ, ಮಹಾಂತೇಶ ಚಕ್ರವರ್ತಿ, ಶಿವು ಮಡಿಕೇಶ್ವರ ಇತರರು ಭಾಗವಹಿಸಿದ್ದರು.

