ಕುತೂಹಲ ಮೂಡಿಸಿದ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ
ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದಲ್ಲಿ ಡಿ.೨ ರಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ.
ತಾಲೂಕಿನಲ್ಲಿ ಇದುವರೆಗೂ ಒಂಭತ್ತು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿದರೂ ಯಾವ ಸಮ್ಮೇಳನದ ಸರ್ವಾಧ್ಯಕ್ಷರ ಹುದ್ದೆಗೆ ಅರ್ಜಿ ಆಹ್ವಾನ ಮಾಡದೇ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯಕ್ಕೆ ಅನುಪಮ ಸೇವೆ ಸಲ್ಲಿಸಿದ ಧೀಮಂತ ಸಾಹಿತಿಗಳನ್ನು ಗುರುತಿಸಿ ಸರ್ವಾಧ್ಯಕ್ಷ ಹುದ್ದೆಗೆ ಸರ್ವಾನುಮತದಿಂದ ಆಯ್ಕೆ ಮಾಡುವ ಪರಿಪಾಠ ಇಟ್ಟುಕೊಂಡಿತ್ತು. ಇದೇ ಪ್ರಥಮ ಬಾರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಲು ಸಾಹಿತಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ಸರ್ವಾಧ್ಯಕ್ಷರಾಗುವವರೂ ತಾಲೂಕಿಗೆ ಸೀಮಿತವಾಗಿರಬೇಕೆಂಬ ನಿಯಮದ ಜೊತೆಗೆ ಆಧಾರ ಕಾರ್ಡ್ ಲಗತ್ತಿಸಿರಬೇಕು ಎಂಬ ನಿಯಮವನ್ನು ತಾಲೂಕು ಕಸಾಪ ಅಧ್ಯಕ್ಷರು ತಿಳಿಸಿದ್ದಾರೆ. ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಎಂ.ಎಸ್.ಚೌಧರಿ, ವಿವೇಕಾನಂದ ಕಲ್ಯಾಣಶೆಟ್ಟಿ, ಎಸ್.ಐ.ಬಿರಾದಾರ, ಮಹಾಂತೇಶ ಸಂಗಮ, ಭೀಮರಾಯ ಹೂಗಾರ, ಸಿ.ಎಸ್.ಆನಂದ, ವಿಶ್ವನಾಥ ಡೋಣೂರ, ಯಮನಪ್ಪ ಅಂಗಡಗೇರಿ ಎಂಟು ಜನರು ಅರ್ಜಿ ಸಲ್ಲಿಸಿದ್ದಾರೆ.
ಕಳೆದ ೨೦೨೩ ಡಿ.೨೩ ರಂದು ಮನಗೂಳಿ ಪಟ್ಟಣದಲ್ಲಿ ಜರುಗಿದ ತಾಲೂಕಿನ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮನಗೂಳಿ ಪಟ್ಟಣದ ಸಾಹಿತಿಗಳಾದ ಎಸ್.ಐ.ಬಿರಾದಾರ ಅವರ ಆಯ್ಕೆ ಮಾಡಬೇಕೆಂಬ ಪ್ರಸ್ತಾಪ ಬಂದಾಗ ಸ್ಥಳೀಯರನ್ನು ಹೊರತು ಪಡಿಸಿ ಬೇರೆಡೆಯವರನ್ನು ಆಯ್ಕೆ ಮಾಡುವದು ಸೂಕ್ತ ಎಂಬ ಮಾತು ಬಂದು ಮುಂಬರುವ ದಿನಗಳಲ್ಲಿ ನಡೆಯುವ ತಾಲೂಕು ಸಮ್ಮೇಳನದಲ್ಲಿ ಇವರಿಗೆ ಅವಕಾಶ ನೀಡಬೇಕೆಂದು ಆಗ ಇವರ ಬದಲಾಗಿ ಇಂಗಳೇಶ್ವರದ ಶರಣ ಸಾಹಿತಿ ಈರಣ್ಣ ಬೆಕಿನಾಳ ಅವರನ್ನು ಸರ್ವಾಧ್ಯಕ್ಷತೆ ಆಯ್ಕೆ ಮಾಡಲಾಗಿತ್ತು. ಹತ್ತನೇ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಎಸ್.ಐ. ಬಿರಾದಾರ ಅರ್ಜಿ ಸಲ್ಲಿಸಿದ್ದು ಈ ಸಲ ಇವರ ಆಯ್ಕೆಯಾಗುವದೇ ಎಂಬುವದು ಸಾಹಿತ್ಯಾಸ್ತಕರಲ್ಲಿ ಕುತೂಹಲ ಮೂಡಿಸಿದೆ. ಸರ್ವಾಧ್ಯಕ್ಷತೆಗೆ ವಿವೇಕಾನಂದ ಕಲ್ಯಾಣಶೆಟ್ಟಿ, ಸಿ.ಎಸ್.ಆನಂದ ಸೇರಿದಂತೆ ಕೆಲವರ ಹೆಸರು ಪ್ರಬಲವಾಗಿ ಮಾತು ಕೇಳಿ ಬರುತ್ತಿದೆ. ದಲಿತ ಸಾಹಿತಿಗಳನ್ನು ಸರ್ವಾಧ್ಯಕ್ಷತೆಗೆ ಪರಿಗಣಿಸಬೇಕೆಂದು ಭೀಮಆರ್ಮಿ ಸಂಘಟನೆಯು ಮನವಿ ಸಲ್ಲಿಸಿದೆ. ಸರ್ವಾಧ್ಯಕ್ಷರನ್ನು ಆಯ್ಕೆಗೆ ಅರ್ಜಿ ಆಹ್ವಾನಿಸದೇ ಸಾಹಿತಿಗಳು ಮಾಡಿರುವ ಸೇವೆಯನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಬೇಕಿತ್ತು ಎಂಬ ಮಾತು ಕೇಳಿಬರುತ್ತಿದೆ. ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ಕುರಿತು ನ. ೨೭ ರಂದು ಇವಣಗಿ ಗ್ರಾಮದಲ್ಲಿ ಸರ್ವಾಧ್ಯಕ್ಷರ ಆಯ್ಕೆ ಸಮಿತಿ ಮಾಡಲಾಗುವದು ಎಂದು ತಿಳಿದುಬಂದಿದೆ.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ಮಾಡಲಾಗಿದೆ. ಈ ಸಮಿತಿಯು ಸರ್ವಾಧ್ಯಕ್ಷರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಿದೆ. ನಾನು ಕನ್ನಡ ಸಾಹಿತ್ಯ ಸೇವೆಯಲ್ಲಿ ಯಾವುದೇ ಆಸೆಯನ್ನು ಹೊಂದಿಲ್ಲ. ಕನ್ನಡ ನಾಡು-ನುಡಿಗಾಗಿ ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.
ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದುವರೆಗೂ ಎಂಟು ಜನ ಸಾಹಿತಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸೂಕ್ತವಾದ ಸಾಹಿತಿಯನ್ನು ಆಯ್ಕೆ ಸಮಿತಿ ಡಿ.೨೭ ರಂದು ಇವಣಗಿ ಗ್ರಾಮದಲ್ಲಿ ಮಧ್ಯಾನ್ಹದೊಳಗೆ ಆಯ್ಕೆ ಮಾಡಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ಹೇಳಿದರು.
ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಖಂಡ ತಾಲೂಕಿನ ಕೂಡಗಿ ಗ್ರಾಮದಲ್ಲಿ ಡಾ.ಸಂಗಮೇಶ ಹಂಡಗಿ ಸರ್ವಾಧ್ಯಕ್ಷತೆಯಲ್ಲಿ -.೨೬,೨೭ ೧೯೯೪ ರಲ್ಲಿ, ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಬಸವನಬಾಗೇವಾಡಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕ್ರತ ಸಾಹಿತಿ ಕಾ.ಹು.ಬಿಜಾಪುರ ಸರ್ವಾಧ್ಯಕ್ಷತೆಯಲ್ಲಿ ನ.೩೦ ೨೦೦೩ ರಲ್ಲಿ, ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಅಖಂಡ ತಾಲೂಕಿನ ನಿಡಗುಂದಿಯಲ್ಲಿ ಡಾ.ಸಿದ್ದಣ್ಣ ಉತ್ನಾಳ ಸರ್ವಾಧ್ಯಕ್ಷತೆಯಲ್ಲಿ ನ.೧೨ ೨೦೧೩ ರಲ್ಲಿ, ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂಗಳೇಶ್ವರದಲ್ಲಿ ಡಾ.ಸೋಮನಾಥ ಯಾಳವಾರ ಸರ್ವಾಧ್ಯಕ್ಷತೆಯಲ್ಲಿ ಜೂ.೫ ೨೦೧೪ ರಲ್ಲಿ, ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಅಖಂಡ ತಾಲೂಕಿನ ಗೊಳಸಂಗಿಯಲ್ಲಿ ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಸರ್ವಾಧ್ಯಕ್ಷತೆಯಲ್ಲಿ ೨೦೧೫ ರಲ್ಲಿ, ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ಹೂವಿನಹಿಪ್ಪರಗಿಯಲ್ಲಿ ಡಾ.ಸರಸ್ವತಿ ಚಿಮ್ಮಲಗಿ ಸರ್ವಾಧ್ಯಕ್ಷತೆಯಲ್ಲಿ ೨೦೧೬ ರಲ್ಲಿ, ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ನರಲಸಗಿ ಗ್ರಾಮದಲ್ಲಿ ಸಂಶೋಧಕ ಡಾ.ವಾಸುದೇವ ಬಡಿಗೇರ ಸರ್ವಾಧ್ಯಕ್ಷತೆಯಲ್ಲಿ ೨೦೧೮ ರಲ್ಲಿ, ತಾಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಯರನಾಳ ಗ್ರಾಮದಲ್ಲಿ ಹಿರಿಯ ಸಾಹಿತಿ ಲ.ರು.ಗೊಳಸಂಗಿ ಸರ್ವಾಧ್ಯಕ್ಷತೆಯಲ್ಲಿ ೨೦೦೯ ರಲ್ಲಿ, ತಾಲೂಕು ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಮನಗೂಳಿ ಪಟ್ಟಣದಲ್ಲಿ ಶರಣ ಸಾಹಿತಿ ಈರಣ್ಣ ಬೆಕಿನಾಳ ಸರ್ವಾಧ್ಯಕ್ಷತೆಯಲ್ಲಿ ಡಿ.೨೫ ೨೦೨೩ ರಲ್ಲಿ ಒಂಬತ್ತು ಸಮ್ಮೇಳನಗಳು ಜರುಗಿವೆ. ಇದೀಗ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಇವಣಗಿ ಗ್ರಾಮದಲ್ಲಿ ಡ.2 ರಂದು ಜರುಗುವ ಸಮ್ಮೇಳನದ ಸರ್ವಾಧ್ಯಕ್ಷರ ಯಾರು ಆಗಲಿದ್ದಾರೆ ಎಂದು ಕಾಯ್ದು ನೋಡಬೇಕಷ್ಟೇ.

