ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೊಂಡಗೂಳಿ ರೈತ ಸಮುದಾಯಕ್ಕೆ ಆಧಾರವಾಗಬೇಕಿದ್ದ ತೊಗರಿ ಬೆಳೆ ಹವಾಮಾನ ವೈಪರಿತ್ಯದಿಂದ ಸಂಪೂರ್ಣ ಹಾಳಾಗಿದೆ. ತಕ್ಷಣವೇ ರೈತರಿಗೆ ಬೆಳೆ ಹಾನಿಗೆ ಸಂಪೂರ್ಣ ವಿಮೆ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಆವರಣಕ್ಕೆ ಮಂಗಳವಾರ ಆಗಮಿಸಿದ ರೈತರು ಸಂಪೂರ್ಣ ವಿಮೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ವೀರಘಂಟಯ್ಯ ಗದ್ದಗಿಮಠ ಮಾತನಾಡಿ, ಪೂರ್ವ ಮುಂಗಾರು ಬೆಳೆಯಾಗಿ ತೊಗರಿ ಬಿತ್ತನೆ ಮಾಡಲಾಗಿದ್ದು, ಬೆಳೆಯು ಹೂವಿನ ಹಂತದಲ್ಲಿ ಇರುವಾಗ ಹವಾಮಾನ ವೈಪರಿತ್ಯದಿಂದ ಪ್ರತಿ ದಿನ ಮಂಜು ಆವರಿಸಿದ್ದು, ಬೆಳೆಯ ಹೂ ಮತ್ತು ಚಿಗುರಿಕಾಯಿ ಸಂಪೂರ್ಣವಾಗಿ ಉದುರಿ ಹೋಗಿರುವುದರಿಂದ ಬೆಳೆ ಒಣಗಿ ಹೋಗಿರುತ್ತದೆ. ಕೃಷಿಕರು ಸಾವಿರಾರು ಹಣ ಸಾಲ ಮಾಡಿ ಬೀಜ, ಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿ ವ್ಯವಸ್ಥೆ ಮಾಡಿದ್ದ ತೊಗರಿ ಬೆಳೆ ಈ ರೀತಿಯಾಗಿ ಸಂಪೂರ್ಣ ಹಾಳಾಗಿದೆ. ಇದನ್ನೆ ನಂಬಿದ ರೈತರ ಬದುಕು ದುಸ್ತರವಾಗಿದೆ. ಜೀವನಾಧಾರವಾಗಬೇಕಿದ್ದ ತೊಗರಿಬೆಳೆ ಹೊಡೆತ ನೀಡಿದೆ.
ಕೊಂಡಗೂಳಿ ಗ್ರಾಮದಲ್ಲಿ ಸುಮಾರು ೯೦೦ ರೈತರು ಫಸಲ ಭೀಮಾ ಯೋಜನೆಯಡಿ ವಿಮೆಯ ಹಣವನ್ನು ಪಾವತಿಸಿರುತ್ತಾರೆ. ಈ ಮೂಲಕ ಅದಕ್ಕಾಗಿ ತಕ್ಷಣವೇ ಸರ್ಕಾರ ಕೃಷಿ ಇಲಾಖೆ ಮೂಲಕ ಹಾಳಾದ ಬೆಳೆಯ ಸಮೀಕ್ಷೆ ನಡೆಸಿ ತಕ್ಷಣವೇ ರೈತರಿಗೆ ವಿಮೆಯನ್ನು ಘೋಷಿಸಬೇಕು. ಗ್ರಾಮದ ಹಲವು ರೈತರು ಬೆಳೆ ಪರಿಸ್ಥಿತಿಯನ್ನು ಕಂಡು ಭಯಗೊಂಡಿದ್ದು, ಅವರು ಯಾವುದೇ ಅನಾಹುತ ಮಾಡಿಕೊಳ್ಳುವ ಮುಂಚೆ ತಾಲ್ಲೂಕು ಆಡಳಿತ ರೈತರಿಗೆ ಅನುಕೂಲವಾಗುವ ಹಾಗೇ ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿ, ದಿ:೨೯ ರಂದು ಕೊಂಡಗೂಳಿ ಗ್ರಾಮದ ರೈತರು ರಸ್ತೆ ತಡೆ ಹಾಗೂ ಉಗ್ರ ಹೋರಾಟ ಕೈಗೊಂಡು ಎಚ್ಚರಿಸಲಿದ್ದಾರೆ. ಒಂದು ವೇಳೆ ಯಾವುದೇ ರೈತ ಅನಾಹುತಕ್ಕೆ ಇಡಾದರೇ ಅದಕ್ಕೆ ತಾಲ್ಲೂಕು ಆಡಳಿತವೇ ನೇರ ಹೊಣೆ ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ಸಿದ್ದಣ್ಣ ಸಿಂದಗೇರಿ, ಅಪ್ಪಾಸಾಹೇಬ ಬಸರಕೋಡ, ಈರಣ್ಣ ತಾವರಖೇಡ, ಕಾಶೀಲಿಂಗ ಸಿಂದಗೇರಿ, ಜಗದೀಶಗೌಡ ಪಾಟೀಲ, ಪ್ರಭು ಡಿಗ್ಗಾಂವಿ, ಗುರುನಾಥರೆಡ್ಡಿ ಸಿಂದಗೇರಿ, ಚಿನ್ನಾರೆಡ್ಡಿ ಮಲ್ಲಾಬಾದಿ, ಸಿದ್ದನಗೌಡ ಪಾಟೀಲ, ಸಂಪತರೆಡ್ಡಿ ಕೆಂಭಾವಿ, ಶಿವುಕುಮಾರ ಮಲ್ಲಾಬಾದಿ, ತಿಪ್ಪಣ್ಣ ಹೆಬ್ಬಾಳ, ಬಸವರಾಜ ಕರದಾಳಿ, ಚಿದಾನಂದ ಗೊಳಸಾರ ಇದ್ದರು.

