ಸಿಂದಗಿಯಲ್ಲಿ ವ್ಹಿಎಚ್ಪಿ, ಭಜರಂಗದಳ ವತಿಯಿಂದ ಮಠಾಧೀಶರ ನೇತೃತ್ವದಲ್ಲಿ ರೈತರ, ಸಾರ್ವಜನಿಕರ ಜಮೀನು ಉಳಿವಿಗಾಗಿ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: “ಆಸ್ತಿ ಊರ ಮಗ್ಗಲಕ್ ಒಂದಚೂರ ಹೆಚ್ಚಿಗೆ ಇತ್ತು ಅಂದರೆ ಅದನ್ನು ವಕ್ಫ್ ಹೆಸರಿಗೆ ಮಾಡಿಕೊಳ್ಳುವ ಜೊತೆಗೆ ಮಠಮಾನ್ಯಗಳ ಆಸ್ತಿನೂ ತೆಗೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ನಾಳೆ ನಮ್ಮ ಧರ್ಮದ ಉಳಿವಿಗಾಗಿಯೂ ನಾವು ಹೋರಾಡುವ ಪರಿಸ್ಥಿತಿ ಬರುತ್ತದೆ” ಎಂದು ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವ ಹಿಂದೂ ಪರಿಚದ್, ಸಿಂದಗಿ ಬಜರಂಗದಳ ವತಿಯಿಂದ ಮಠಾಧೀಶರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರ, ಸಾರ್ವಜನಿಕರ ಜಮೀನು ಉಳಿವಿಗಾಗಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಂವಿಧಾನದ ಪ್ರಕಾರ ಕಾಯ್ದೆ ಜಾರಿಗೆ ಬರಬೇಕು. ಮುಸ್ಲಿಂರಿಗೊಂದು ಬೇರೆ ಕಾನೂನು ಇದು ಸಂವಿಧಾನ ಬಾಹಿರ. ರೈತರ, ಸಾರ್ವಜನಿಕರ ಮನೆ ಮಠದ ಆಸ್ತಿಗಳು ಯಾರದೋ ಪಾಲಾಗುವುದು ಬೇಡ. ಹಾಗೇನಾದರೂ ಆದರೆ ನಾವು ಮಠಾಧೀಶರು ಸುಮ್ಮನಿರುವುದಿಲ್ಲ. ನ್ಯಾಯ ದೊರಕುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ರಾಜ್ಯದಲ್ಲಿ ಈ ವಿಷಯ ವ್ಯಾಪಕವಾಗಿ ಹರಡಿರುವುದನ್ನು ನೋಡಿದರೆ ಮುಂಬರುವ ದಿನಮಾನಗಳಲ್ಲಿ ಶೋಚನಿಯ ಸ್ಥಿತಿ ಎದುರಾಗಲಿದೆ. ಏಕೆಂದರೆ ರೈತರ, ಸಾರ್ವಜನಿಕರ, ಮಠಮಾನ್ಯ ಹಾಗೂ ದೇವಸ್ಥಾನಗಳ ಜಮೀನುಗಳನ್ನು ಹೇಳದೆ ಕೇಳದೆ ವಕ್ಪ್ ಹೆಸರಿನಿಂದ ನೋಂದಾಯಿಸಿಕೊಂಡಿದ್ದಾರೆ. ಒಬ್ಬರ ಆಸ್ತಿ ದಾನ ಮಾಡಬೇಕಾದರೆ ಆಸ್ತಿಯ ಮಾಲೀಕ ಬಂದು ಬಿಟ್ಟುಕೊಡಬೇಕಾಗುತ್ತದೆ. ಆದರೆ ಇಲ್ಲಿ ಅಂತಹ ಕಾರ್ಯ ಏನೂ ನಡೆದಿಲ್ಲ. ಏಕಾಏಕಿ ವಕ್ಪ್ ಬೋರ್ಡ್ ಹೆಸರಿನಲ್ಲಿ ೧೧ನೆಯ ಕಾಲಂನಲ್ಲಿ ಹೆಸರು ಸೇರ್ಪಡೆಯಾಗಿದ್ದನ್ನು ಖಂಡಿಸುತ್ತೇವೆ. ರೈತರ ಆಸ್ತಿಯನ್ನು ವಕ್ಪ್ ಬೋರ್ಡಿಗೆ ತೆಗೆದುಕೊಳ್ಳುವಂತಹದ್ದು ಇದು ಭಗವಂತನ ಬೋರ್ಡ್ಲ್ಲ. ರೈತರ ಜಮೀನುಗಳು ವಕ್ಪ್ ಬೋರ್ಡಿಗೆ ತೆಗೆದುಕೊಳ್ಳುತ್ತಿರುವ ಸ್ಥಿತಿ ಶೋಚನಿಯ ಎಂದರು.
ಈ ಮೊದಲು ವಿಶ್ವ ಹಿಂದೂ ಪರಿಷತ್, ಸಿಂದಗಿ ಭಜರಂಗದಳ, ಮಠಾಧೀಶರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸಾರಂಗಮಠದಿಂದ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನೆಯಲ್ಲಿ ಆಲಮೇಲ ಶ್ರೀಗಳು, ಬೋರಗಿ ಶ್ರೀಗಳು, ಕನ್ನೊಳ್ಳಿ ಶ್ರೀಗಳು, ಕುಮಸಗಿ ಶ್ರೀಗಳು, ವಿರಕ್ತಮಠದ ಶ್ರೀಗಳು, ಅಲ್ಲಾಪೂರ ಶ್ರೀಗಳು, ನಾಗಣಸೂರ ಶ್ರೀಗಳು, ಗೀತಾ ಅಂಗಡಿ, ಶೇಖಕರಗೌಡ ಹರನಾಳ, ಡಾ.ಶರಣಗೌಡ ಬಿರಾದಾರ, ಶ್ರೀಮಂತ ದುದ್ದಗಿ, ಅಶೋಕ ಅಲ್ಲಾಪುರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಮಲ್ಲು ಸಾವಳಸಂಗ, ಪೀರು ಕೆರೂರ, ಶ್ರೀಕಾಂತ ಬಿಜಾಪುರ, ಸಿದ್ದು ಪೂಜಾರಿ, ಯಲ್ಲು ಇಂಗಳಗಿ, ಶೈಲಜಾ ಸ್ಥಾವರಮಠ, ರಾಜಕುಮಾರ ಭಾಸಗಿ, ಕಾಜು ಬಂಕಲಗಿ, ಅಶೋಕ ನಾರಾಯಣಪುರ, ಸಾಹೇಬಗೌಡ ಅಡವಿ, ಶಿವರಾಜ ಗುತ್ತರಗಿ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಇದ್ದರು.

“ಕೆಲವು ದಿನಗಳ ಹಿಂದೆ ಸಚಿವ ಜಮೀರಅಹ್ಮದ ಖಾನ್ ಅವರು ಮಾಧ್ಯಮದಲ್ಲಿ ಹೇಳಿದ್ದನ್ನು ಕೇಳಿದ್ದೇವೆ. ಜಮೀನುಗಳನ್ನು ಅಲ್ಲಾನ್ ಹೆಸರಲೇ ಮಾಡು ಎಂದು ಅಲ್ಲಾ ನನಗೆ ವಕ್ಪ್ ಬೋರ್ಡಿಗೆ ವರ್ಗಾಯಿಸು ಎಂದು ಹೇಳಿದ್ದಾನೆ ಅದಕ್ಕೆ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಅಲ್ಲಾ ಎಂದರೆ ಏನು ಎಂಬುದನ್ನು ಅವರಿಗೆ ಕೇಳಬೇಕು. ಏಕೆಂದರೆ ಈ ಭೂಮಂಡಲದಲ್ಲಿ ಭಗವಂತ ಎಲ್ಲರಿಗೂ ಆಸರೆ ನೀಡಿದ್ದಾನೆ.”
– ಡಾ.ಪ್ರಭುಸಾರಂಗದೇವ ಶಿವಾಚಾರ್ಯರು
ಸಾರಂಗಮಠ, ಸಿಂದಗಿ

