ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಓವರ್ಟೇಕ್ ಮಾಡಲು ಹೋಗಿ ಮೂರು ಚಕ್ರದ ಪ್ಯಾಜೋ ಆಟೋವೊಂದು ಪಲ್ಟಿಯಾದ ಪರಿಣಾಮ ಆಟೋದಲ್ಲಿದ್ದ ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಹಲವರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಅಮರಗೋಳ ಕ್ರಾಸ್ ಬಳಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ತಾಲೂಕಿನ ಕೊಳೂರು ಗ್ರಾಮದ ಮಾಲನಬಿ ಹವಾಲ್ದಾರ(೩೫) ಎಂದು ಗುರುತಿಸಲಾಗಿದೆ. ಅಟೋದಲ್ಲಿದ್ದ ಕೊಳೂರು ಗ್ರಾಮಸ್ಥರಾದ ವಸಂತಿ ಕತ್ತಿ, ಶರಣಮ್ಮ ಹಗಟಗಿ, ಲಾಲಮಾ ಮತ್ತೇದಾರ, ಬಸಮ್ಮ ತಾರನಾಳ, ಚನ್ನಮ್ಮ ತಂಗಡಗಿ, ನಿಂಗಮ್ಮ ಮಡಿವಾಳರ, ಶಂಕ್ರಮ್ಮ ಪಾಟೀಲ, ರೇಖಾ ಮಡಿವಾಳರ ಇವರಿಗೆ ಗಾಯಗಳಾದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಡಿಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜಯ ತಿಪರೆಡ್ಡಿ, ಕ್ರೆöÊಂ ಪಿಎಸ್ಐ ಆರ್.ಎಲ್.ಮನ್ನಾಬಾಯಿ ಮುಖ್ಯ ಪೇದೆಗಳಾದ ಎಂ.ಬಿ.ಹೂಗಾರ, ಎಸ್.ಜಿ.ಬನ್ನೆಟ್ಟಿ ಸಿಬ್ಬಂದಿಗಳಾದ ಬಿ.ಜೆ.ಕಾಸರ, ಮೌಲಾಲಿ ಮೊಕಾಶಿ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಅಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದ ಬಳಿಯ ಬಿಸಲದಿನ್ನಿ ಗ್ರಾಮದ ಜಮೀನೊಂದರಲ್ಲಿ ಈರುಳ್ಳಿ ಕೀಳುವ ಕೂಲಿ ಕೆಲಸಕ್ಕೆ ಹೋಗುವಾಗ ಟ್ಯಾಂಕರ್ ನ ಓವರ್ಟೇಕ್ ಮಾಡಲು ಹೋಗಿ ಅತಿಯಾದ ವೇಗದಲ್ಲಿ ವಾಹನ ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದ್ದು ವಾಹನ ಚಾಲಕನ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಫೀರ್ಯಾದು ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಸಾವನ್ನಪ್ಪಿದ ಮಹಿಳೆ ಕುಟುಂಬಕ್ಕೆ ಸಾಂತ್ವನ :ಧನಸಹಾಯ
ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಗೆ ಪತಿ ಮತ್ತು ಇಬ್ಬರು ಮಕ್ಕಳಿದ್ದು, ಕೂಲಿ ಕಾರ್ಮಿಕ ಮಹಿಳೆಯ ಮೇಲೆ ನಡೆದ ವಿಧಿಯಾಟಕ್ಕೆ ಸಮಾಜ ಸೇವಕ ಸಿ.ಬಿ.ಅಸ್ಕಿ ಮರುಗಿದ್ದಾರೆ. ಘಟನೆಯ ವಿಷಯ ತಿಳಿದು ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿ ಮೃತ ಕುಟುಂಬಸ್ಥರಿಗೆ ೨೫ ಸಾವಿರ ರೂಗಳ ಧನ ಸಹಾಯ ಮಾಡಿ ಸಾಂತ್ವನ ಹೇಳಿ ಮಾನವೀಯತೆ ಮರೆದಿದ್ದಾರೆ.
ಸಂಚಾರಿ ನಿಯಮಗಳ ಪಾಲನೆಗೆ ಮನವಿ
ಸಂಚಾರಿ ನಿಯಮಗಳ ಪಾಲನೆಗೆ ಕಸಾಪ ಅಧ್ಯಕ್ಷ ಬಿರಾದಾರ ಮನವಿ
ಘಟನೆಯ ಬಳಿಕ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾಧ್ಯಮದವರೊಂದಿಗೆ ಮಾತನಾಡಿ, ಇಂತಹ ಘಟನೆಗಳಿಗೆ ಸಂಚಾರಿ ನಿಯಮಗಳ ಉಲ್ಲಂಘನೆಯೇ ಮುಖ್ಯ ಕಾರಣ ಎನ್ನುವದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು. ಮಧ್ಯ ಸೇವಿಸಿ, ಲೈಸನ್ಸ್ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ಸವಾರಿ ಮಾಡಬಾರದು. ಯಾವುದೇ ತ್ರಿ ಚಕ್ರ, ನಾಲ್ಕು ಚಕ್ರಕ್ಕಿಂತ ಹೆಚ್ಚಿನ ಚಕ್ರಗಳ ವಾಹನಗಳಲ್ಲಿ ಕೂರುವಾಗ ವಾಹನದ ಸುರಕ್ಷತೆ, ಸಂಚಾರಿ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ಗಮನಿಸಿ ಕೂರಬೇಕು. ಗುಂಪಾಗಿ ಹೋಗುವಾಗ ನಿಗಧಿತ ಆಸನಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಪ್ರಾಯಾಣಿಸಬಾರದು. ಸರ್ಕಾರವೂ ಕೂಡ ಸಂಚಾರಿ ನಿಯಮಗಳನ್ನು ಇನ್ನಷ್ಟು ಕಟ್ಟು ನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.

