ವಿಭಾಗ, ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ಆಲಮಟ್ಟಿ ಸಕಲ ರೀತಿಯಿಂದ ಸಜ್ಜು
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಬೆಳಗಾವಿ ವಿಭಾಗ ಮತ್ತು ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ಆಲಮಟ್ಟಿಡ್ಯಾಂಸೈಟ್ ನ ಶಾಲಾ ಮೈದಾನ ಸಜ್ಜಾಗಿದ್ದು, ನ.೧೨ ರಂದು ವಿಭಾಗ ಮಟ್ಟ ಹಾಗೂ ನ.೧೪ ರಂದು ರಾಜ್ಯ ಮಟ್ಟದ ಸ್ಥರ್ಧೆಗಳು ನಡೆಯಲಿವೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ೧೪ ವಯೋಮಾನ (ಪ್ರಾಥಮಿಕ ಶಾಲೆ)ದ ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ನ.೧೧ ರಂದು ೯ ಜಿಲ್ಲೆಗಳ ಕ್ರೀಡಾಪಟುಗಳು ಬರಲಿದ್ದು, ನ.೧೨ ರ ಬೆಳಿಗ್ಗೆ ೭.೩೦ ರಿಂದಲೇ ಸ್ಪರ್ಧೆಗಳು ಜರುಗಲಿವೆ. ಅದೇ ದಿನ ವಿಭಾಗ ಮಟ್ಟದ ಸ್ಪರ್ಧೆಗಳು ಪೂರ್ಣಗೊಳ್ಳಲಿವೆ.
ರಾಜ್ಯ ಮಟ್ಟದ ಉದ್ಘಾಟನೆ:
ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ರಾಜ್ಯದ ನಾನಾ ಭಾಗಗಳಿಂದ ನ,.೧೩ ರಂದು ಕ್ರೀಡಾಪಟುಗಳು ಆಗಮಿಸಲಿದ್ದು, ಆ ದಿನ ನೋಂದಣಿ ನಡೆಯಲಿದೆ. ೧೪ ವಯೋಮಾನದೊಳಗಿನ (ಪ್ರಾಥಮಿಕ ಶಾಲಾ ಹಂತ) ಹಾಗೂ ೧೭ ವಯೋಮಾನದೊಳಗಿನ (ಪ್ರೌಢಶಾಲಾ ಹಂತ) ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗಳು ನ.೧೩ ರಂದು ಸಂಜೆ ೬ ಕ್ಕೆ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಲಿದ್ದಾರೆ. ಅದ್ಧೂರಿ ಉದ್ಘಾಟನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನ.೧೪ ರಂದು ರಾಜ್ಯ ಮಟ್ಟದ ಸ್ಪರ್ಧೆಗಳು ಬೆಳಿಗ್ಗೆ ೭.೩೦ ರಿಂದಲೇ ಆರಂಭಗೊಳ್ಳಲಿವೆ. ಸಂಜೆಯ ವೇಳೆಗೆ ಸ್ಪರ್ಧೆಗಳು ಪೂರ್ಣಗೊಳ್ಳಲಿವೆ.
ವಸತಿ ವ್ಯವಸ್ಥೆ: ವಿಭಾಗ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗೆ ಎಲ್ಲಾ ಬಾಲಕರಿಗೆ ಸಮೀಪದ ಯಲಗೂರದ ಯಾತ್ರಿ ನಿವಾಸದಲ್ಲಿ, ಬಾಲಕಿಯರಿಗೆ ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ಊಟ: ಎಲ್ಲಾ ಕ್ರೀಡಾಪಟುಗಳಿಗೆ, ಅಧಿಕಾರಿಗಳಿಗೆ ಕ್ರೀಡಾಕೂಟ ನಡೆಯುವ ಮೈದಾನದ ಪಕ್ಕದ ಶಾಲೆಯಲ್ಲಿ ಹಾಗೂ ಕ್ರೀಡಾಭಿಮಾನಿಗಳಿಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಾಡಲಾಗಿದೆ. ಕಡಕ್ ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಯೆ, ಶೇಂಗಾ ಹೋಳಿಗೆ ಸೇರಿದಂತೆ ನಾಲ್ಕು ದಿನ ಹತ್ತಾರು ಬೇರೆ ಬೇರೆ ತರಹದ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ೧೫ ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ೨೫ ಕ್ಕೂ ಅಧಿಕ ಪೊಲೀಸ್ ರನ್ನು ನಾಲ್ಕು ದಿನ ಕ್ರೀಡಾಕೂಟದ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಆಲಮಟ್ಟಿ ಪಿಎಸ್ ಐ ಎ.ಎಸ್. ಇಂಡಿಕರ ತಿಳಿಸಿದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳ ೫೦ ಕ್ಕೂ ಅಧಿಕ ದೈಹಿಕ ಶಿಕ್ಷಣ ಶಿಕ್ಷಕರು ನಿರ್ಣಾಯಕರಾಗಿ ಆಗಮಿಸಲಿದ್ದಾರೆ.
“ಈ ಭಾಗದಲ್ಲಿ ನಡೆಯುತ್ತಿರುವ ಮೊದಲ ರಾಜ್ಯ ಮಟ್ಟದ ಕ್ರೀಡಾಕೂಟ ಇದು, ಹೀಗಾಗಿ ಅವಿಸ್ಮರಣೀಯಗೊಳಿಸಲು ೧೨ ಕ್ಕೂ ಅಧಿಕ ಸಮಿತಿಗಳನ್ನು ರಚಿಸಲಾಗಿದ್ದು, ೫೦ ಕ್ಕೂ ಅಧಿಕ ಶಿಕ್ಷಕರ ಬಳಗ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ, ಮೇಲಾಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ.”
– ಚಂದ್ರಶೇಖರ ನುಗ್ಗಲಿ
ಕಾರ್ಯಕ್ರಮ ಸಂಘಟಕ,
ರಾಜ್ಯ ಪ್ರ.ಕಾರ್ಯದರ್ಶಿ
ಶಿಕ್ಷಕರ ಸಂಘ, ಬೆಂಗಳೂರು
ಮೈದಾನದ ಸಿದ್ಧತೆ
ಕಳೆದ ೨೦ ದಿನಗಳಿಂದ ತಾಲ್ಲೂಕಿನ ನಾನಾ ಕಡೆಯಿಂದ ಆಗಮಿಸಿರುವ ೨೫ ಕ್ಕೂ ಅಧಿಕ ದೈಹಿಕ ಶಿಕ್ಷಣ ಶಿಕ್ಷಕರು ಮೈದಾನದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಕಟ್ಟಿಗೆಯ ಹೊಟ್ಟು ಹಾಗೂ ಕೆಂಪು ಮಣ್ಣು ತರಿಸಿ, ೪ ಖೋಖೋ ಮೈದಾನ ನಿರ್ಮಿಸಲಾಗಿದ್ದು, ಕ್ರೀಡಾಪಟುಗಳು ಹಾಗೂ ನಿರ್ಣಾಯಕರು ಮಾತ್ರ ಮೈದಾನದಲ್ಲಿರುವಂತೆ ಮೈದಾನದ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಮೂರು ಎಕರೆ ವಿಸ್ತೃತ ಮೈದಾನವನ್ನು ಸುತ್ತಲೂ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ದೀಪಾಲಂಕಾರ ಮಾಡಲಾಗಿದೆ. ಎರಡು ಬೃಹತ್ ಪೆಡ್ ಲೈಟ್ ವ್ಯವಸ್ಥೆ, ಕ್ಯಾಮರಾ ಕಣ್ಗಾವಲು ಇರಲಿದೆ. ನಾಲ್ಕು ಎಲ್ ಇಡಿ ಪರದೆ ಅಳವಡಿಸಲಾಗಿದ್ದು, ಅದರ ಮೂಲಕವೂ ಖೋಖೋ ಪಂದ್ಯಾವಳಿ ನೇರವಾಗಿ ವೀಕ್ಷಿಸಬಹುದು. ಪ್ರತಿ ಕ್ರೀಡಾಪಟುವಿಗೆ ಮೈದಾನದಲ್ಲಿಯೇ ಶಾಲು ಹೊದಿಸಿ ಸನ್ಮಾನಿಸಲಾಗುತ್ತಿದ್ದು, ಅವರಿಗೆ ಹಣ್ಣು, ನೀರಿನ ವ್ಯವಸ್ಥೆ ನಿರಂತರ ಇರಲಿದೆ.

