ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕ್ರೀಡೆ, ಸಾಂಸ್ಕ್ರತಿಕ ಚಟುವಟಿಕೆಗಳು ಶಿಕ್ಷಣದ ಪ್ರಮುಖ ಅಂಗವಾಗಿವೆ. ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಕ್ರೀಡೆ, ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತಾಗಬೇಕೆಂದು ವಿಜಯಪುರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಮಲ್ಲೇಶ್ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾವಿದ್ಯಾಲಯದ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯ ಶಿಕ್ಷಣ, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕ್ರತಿ ವಿಭಾಗಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ ಎಂಬುವದನ್ನು ಪೋಷಕರು, ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಶೈಕ್ಷಣಿಕವಾಗಿ ಬೆಳವಣಿಗೆಯಾಗುವ ಜೊತೆಗೆ ಕ್ರೀಡೆ, ಸಾಂಸ್ಕ್ರತಿಕವಾಗಿ ವಿದ್ಯಾರ್ಥಿಗಳು ಬೆಳವಣಿಗೆಯಾಗಲು ಈ ವಿಷಯಗಳಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು. ಇದಕ್ಕೆ ಪೋಷಕರ ಪ್ರೋತ್ಸಾಹ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕುವಂತಾದರೆ ಅದು ದೇಶದ ಆಸ್ತಿಯಾಗುತ್ತದೆ ಎಂದರು.
ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ವಿಜಯಪುರದ ಎ.ಎಸ್.ಪಿ.ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್.ಬೆಳಗಲಿ ಮಾತನಾಡಿ, ಮಹಾವಿದ್ಯಾಲಯಗಳು ದೇಶದ ಭವಿಷ್ಯ ನಿರ್ಮಿಸುವ ಶಕ್ತಿ ಕೇಂದ್ರಗಳಾಗಿವೆ. ನಾವೆಲ್ಲರೂ ಇದರ ಭಾಗವಾಗಿ ನಮ್ಮ ಸಾಮರ್ಥ್ಯ, ಕೌಶಲ್ಯಗಳನ್ನು ವ್ಯಕ್ತಪಡಿಸಿ ಉತ್ತಮ ವ್ಯಕ್ತಿತ್ವವನ್ನು ಕಾಲೇಜು ಹಂತದಲ್ಲಿಯೇ ರೂಪಿಸಿಕೊಳ್ಳಬೇಕು. ಜಗತ್ತಿನ ಅನೇಕ ಸಾಧಕರ ವಿದ್ಯಾರ್ಹತೆಯನ್ನು ಗಮನಿಸಿದರೆ ಕಡಿಮೆ ವಿದ್ಯಾರ್ಹತೆ ಹೊಂದಿದ್ದರೂ ಅವರು ಮಾಡಿರುವ ಸಾಧನೆ ಅಪ್ರತಿಮವಾಗಿದೆ. ನಾವು ಕೇವಲ ಸಂಬಳಕ್ಕಾಗಿ ದುಡಿಯುವ ವ್ಯಕ್ತಿಯಾಗದೇ ಸಂಬಳ ಕೊಡುವ ಉದ್ದಮೆದಾರರಾಗಬೇಕೆಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕತೆ, ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯೆಬೇಕು. ಯಾರೂ ಸಮಯಕ್ಕೆ ಮಹತ್ವ ನೀಡುತ್ತಾರೋ ಅವರಿಗೆ ಮಹತ್ವ ನೀಡುವ ಸಮಯ ಬರುತ್ತದೆ. ವಿದ್ಯಾರ್ಥಿಗಳು ಸಾಧಕರಾಗಿ ದೇಶ ಹೆಮ್ಮೆ ಪಡುವಂತೆ ಜೀವನ ನಡೆಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ.ದಿಲೀಪಕುಮಾರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಸವರಾಜ ನಾಯಕೋಡಿ, ಸಾಂಸ್ಕ್ರತಿಕ ಚಟುವಟಿಕೆಗಳ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಸಾಲವಾಡಗಿ, ದೈಹಿಕ ನಿರ್ದೇಶಕ ವಿ.ಎನ್.ರಜಪೂತ, ಎಸ್.ಜೆ.ಸೂರ್ಯವಂಶಿ, ಪಿ.ಎಸ್.ನಾಟೀಕಾರ, ಪಿ.ಎಸ್.ಹೊರಕೇರಿ, ಎಂ.ಆರ್.ಮಮದಾಪೂರ, ಆರ್.ಎನ್.ರಾಠೋಡ, ಆರ್.ಎಂ.ಮುಜಾವರ, ಜಯರಾಮರೆಡ್ಡಿ ಇತರರು ಇದ್ದರು. ಗೀತಾ ಬಾಗೇವಾಡಿ ಸ್ವಾಗತ ಗೀತೆ ಹಾಡಿದರು. ಎಂ.ಕೆ.ಯಾದವ ಸ್ವಾಗತಿಸಿದರು. ಪ್ರೀತಿ ಚವ್ಹಾಣ, ರೂಪಾ ಅಂಬಳನೂರ ನಿರೂಪಿಸಿದರು. ಚಂದ್ರಶೇಖರ ರೆಡ್ಡಿ ವಂದಿಸಿದರು.

