ಉದಯರಶ್ಮಿ ದಿನಪತ್ರಿಕೆ
ಇಂಡಿ: ದೇಶದಲ್ಲಿ ಧರ್ಮವಿಲ್ಲದಿದ್ದರೆ ಭಾರತ ಉಳಿಯುವದಿಲ್ಲ, ಧರ್ಮಕ್ಕೆ ಧೇಶದಲ್ಲಿ ಮಹತ್ವದ ಸ್ಥಾನವಿದೆ. ಧರ್ಮದ ಆತ್ಮ ಆದ್ಯಾತ್ಮ. ಧರ್ಮದ ಸಾರ ಆದ್ಯಾತ್ಮ, ಜೀವನವು ಪರಮಾತ್ಮನ ಕಡೆಗೆ ಸಾಗುವ ಮಾರ್ಗ, ಧರ್ಮದಲ್ಲಿ ಆದ್ಯಾತ್ಮ ಮುಖ್ಯ ಮತ್ತು ಆದ್ಯಾತ್ಮದ ಆತ್ಮ ಭಗವದ್ಗೀತೆಯಾಗಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಪೂಜ್ಯ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಹೇಳಿದರು.
ಅವರು ಶುಕ್ರವಾರ ಪಟ್ಟಣದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಪ್ರತಿಷ್ಠಾನದಿಂದ ನಡೆದ ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಾನವನಿಗೆ ನಕಾರಾತ್ಮಕ ಚಿಂತನೆಗಳಾದ ಮನೋರೋಗ, ಮಧುಮೇಹ ರಕ್ತದ ಒತ್ತಡ, ಮತ್ತು ಹೃದಯ ಕಾಯಿಲೆ ಬರುತ್ತಿದ್ದು ಸಕಾರಾತ್ಮಕ ಚಿಂತನೆಗಳಿಗಾಗಿ ಭಗವದ್ಗೀತೆ ಓದುವದರಿಂದ ಬರುತ್ತದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ.ಸ್ವರೂಪಾನಂದ ಶ್ರೀಗಳು ಮಾತನಾಡಿ, ಬಹುಸಂಖ್ಯಾತ ಹಿಂದೂಗಳಿಗೆ ನಮ್ಮ ಧರ್ಮ ಗ್ರಂಥ ಯಾವುದು ಎಂಬುದೇ ಗೊತ್ತಿಲ್ಲ, ವಿವಿಧ ಧರ್ಮದವರು ಅವರ ಧರ್ಮ ಗ್ರಂಥವನ್ನು ಪಾಲಿಸುತ್ತಾರೆ, ಪಠಿಸುತ್ತಾರೆ, ಆದರೆ ಹಿಂದೂ ಧರ್ಮದವರು ತಮ್ಮ ಧರ್ಮ ಗ್ರಂಥವನ್ನೇ ಓದದೇ ಇರುವುದು ದೌರ್ಭಾಗ್ಯ. ಈಗ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಶ್ರೀಗಳು ಭಗವದ್ಗೀತೆಯ ಬಗ್ಗೆ ಹಿಂದೂಗಳಿಗೆ ತಿಳಿಯಲಿ ಎಂದು ಅಭಿಯಾನ ನಡೆಸುತ್ತಿದ್ದಾರೆ. ಮಕ್ಕಳಿಗೆ ಭಗವದ್ಗೀತೆಯ ಬಗ್ಗೆ ಕಲಿಸಿದಾಗ ಮಾತ್ರ ಮಕ್ಕಳು ಸುಸಂಸ್ಕೃತರಾಗುತ್ತಾರೆ. ಭಗವದ್ಗೀತೆ ಓದಿದರೆ ನೆಮ್ಮದಿ, ಸಂತೋಷ ಸಿಗುತ್ತದೆ ಇದರಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಇಂಡಿ ತಾಲೂಕಾ ಸಂಚಾಲಕ ಕಾಸುಗೌಡ ಬಿರಾದಾರ ಮಾತನಾಡಿ, ನಾವು ಜಾತಿ-ಜಾತಿಗೆ ಸೀಮಿತರಾಗಿದ್ದೇವೆ. ಮೊದಲು ನಾವೆಲ್ಲರೂ ಹಿಂದೂ ಎಂಬುದನ್ನು ಅರಿತು ನಡೆಯಬೇಕಿದೆ. ಜಾತಿ ವ್ಯವಸ್ಥೇ ನಿರ್ಮೂಲನೆಯಾಗಿ ಎಲ್ಲರೂ ಹಿಂದೂಗಳಾದಾಗ ಮಾತ್ರ ನಮ್ಮ ಧರ್ಮ ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಕಿವುಡೆ, ಅನೀಲಗೌಡ ಬಿರಾದಾರ, ಡಿ.ಆರ್. ಶಹಾ, ದತ್ತಾತ್ರೆಯ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಅನೀಲ ಜಮಾದಾರ, ಅಜೀತ್ ಧನಶೆಟ್ಟಿ ಸೇರಿದಂತೆ ಆರ್.ಎಂ. ಶಹಾ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮಹಿಳಾ ಭಜನಾ ತಂಡದ ಸದಸ್ಯರು ಸೇರಿದಂತೆ ಐನೂರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
ಸತೀಶ್ಚಂದ್ರ ಕುಲಕರ್ಣಿ ಸ್ವಾಗತಿಸಿ ವಂದಿಸಿದರು. ಪಿ.ಜಿ. ಕಲ್ಮನಿ ನಿರೂಪಿಸಿದರು.

