ದೇಶದಲ್ಲಿ ವಕ್ಫ್ ಕಾಯ್ದೆ ಸಂಪೂರ್ಣ ರದ್ದು ಮಾಡಿ ರೈತರನ್ನು ಉಳಿಸಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ವಕ್ಪ್ ಬೋರ್ಡ್ ಕಾಯ್ದೆಯಿಂದ ರೈತರಿಗೆ ಆಗುತ್ತಿರುವ ತೊಂದರೆ ಕುರಿತು ವೀಕ್ಷಿಸಿ ರೈತರು, ಸಾರ್ವಜನಿಕರು, ಸ್ವಾಮೀಜಿಗಳಿಂದ ಮನವಿ ಸ್ವೀಕರಿಸಲು ಆಗಮಿಸಿದ ಜೆಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಹಾಗೂ ಸಂಸದ ತೇಜಸ್ವಿ ಸೂರ್ಯ ರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ದೇಶದಲ್ಲಿ ವಕ್ಫ್ ಕಾಯ್ದೆ ಸಂಪೂರ್ಣ ರದ್ದು ಮಾಡಿ ದೇಶದ ರೈತರನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ವಿಜಯಪುರದಿಂದ ಆರಂಭವಾದ ಈ ಹೋರಾಟ ರಾಜ್ಯದ 31 ಜಿಲ್ಲೆಗಳಲ್ಲಿ ಹಾಗೂ ದೇಶದ ಎಲ್ಲ ರಾಜ್ಯಗಳಲ್ಲಿ ಕೂಡ ಹಬ್ಬಿಕೊಂಡಿದೆ. ಇದು ಹೀಗೆ ಮುಂದುವರೆದರೆ ದೊಡ್ಡಮಟ್ಟದ ರೈತ ಕ್ರಾಂತಿ ಆಗಲಿದೆ ಎಂದು ಎಚ್ಚರಿಸಿದರು.
ಈ ವೇಳೆ ರೈತ ಸಂಘದ
ಉಪಾಧ್ಯಕ್ಷ ವೀರೇಶ್ ಗೊಬ್ಬುರ್, ಜಿಲ್ಲಾ ಸಂಚಾಲಕ, ರಾಮನಗೌಡ ಪಾಟೀಲ್ ಬ್ಯಾಲ್ಯಾಳ ಹಾಗೂ ರಾಜ್ಯ ಯುವ ಘಟಕದ ಸಂಚಾಲಕ ಸಿದ್ಧನಗೌಡ ಪಾಟೀಲ್ ಸೇರಿದಂತೆ ಹಲವರು ಇದ್ದರು.
“ಅನ್ನದಾತನನ್ನು ಪೂಜ್ಯನೀಯ ಭಾವನೆಯಿಂದ ಕಾಣುವ ದೇಶ ನಮ್ಮದು. ದೇಶದ ಬೆನ್ನೆಲುಬು ಎಂದು ರೈತರನ್ನು ಕರೆಯುತ್ತಾರೆ.
ಆತ ಕಷ್ಟಪಟ್ಟು ಬಿತ್ತದೇ ಹೋದರೆ ನಾವು ಹಸಿವೆಯಿಂದ ಅಸುನೀಗಬೇಕಾಗುತ್ತದೆ.
ಆದರೆ ಇಂತಹ ರೈತ ಬಾಂಧವರನ್ನು ಸಂಕಷ್ಟಕ್ಕೆ ದೂಡಲು ಕಾಂಗ್ರೆಸ್ ಹವಣಿಸುತ್ತಿದೆ. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಅನ್ನದಾತನ ಜಮೀನನ್ನೇ ಬಲಿ ಕೊಡಲು ಹೊಂಚು ಹಾಕುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮಾನವೀಯತೆಯೇ ಸತ್ತು ಹೋಗಿದೆ.”
– ಉಮೇಶ್ ಕಾರಜೋಳ
ಬಿಜೆಪಿ ಮುಖಂಡರು, ವಿಜಯಪುರ

