ಶ್ರೀಮಠದ ಪೀಠಾಧಿಪತಿ ಡಾ.ಶಿವಲಿಂಗೇಶ್ವರ ಗುರುಮುರುಗೇಂದ್ರ ಶ್ರೀಗಳಿಂದ ಡಿಸಿ ಟಿ.ಭೂಬಾಲನ್ ರಿಗೆ ಮನವಿ ಸಲ್ಲಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ವಿರಕ್ತಮಠವು ೧೨ನೇ ಶತಮಾನದ ಬಸವಣ್ಣನವರ ಕಾಲದ ಮಠವಾಗಿದ್ದು, ಇತಿಹಾಸವುಳ್ಳ ಶ್ರೀಮಠದ ಆಸ್ತಿ ಹೊಡೆಯಲು ಕೆಲವರು ಸಂಚು ರೂಪಿಸಿ ಮಠದ ಸರ್ವೇ ನಂ.೧೦೨೦ ೧ಎಕರೆ ೩೬ಗುಂಟೆ ಜಮೀನ ಪಹಣಿ ಉತಾರಿಯ ಋಣಗಳು ಕಾಲಂ ೧೧ರಲ್ಲಿ ೨೦೧೮-೧೯ನೆಯ ಸಾಲಿನಲ್ಲಿ ಅಕ್ರಮವಾಗಿ ಖಬರಸ್ಥಾನ ಸಿಂದಗಿ (ಸುನ್ನಿ) ವಕ್ಫ ಆಸ್ತಿ ಅಂತ ನಮೂದು ಮಾಡಿದ್ದಾರೆ. ಇದನ್ನು ತೆರವುಗೊಳಿಸಬೇಕು ಎಂದು ಸಿಂದಗಿ ಹಾಗೂ ಸಂಕ ವಿರಕ್ತಮಠದ ಶ್ರೀಮಠದ ಪಿಠಾಧಿಪತಿ ಡಾ.ಶಿವಲಿಂಗೇಶ್ವರ ಗುರುಮುರುಗೇಂದ್ರ ಶ್ರೀಗಳು ಹೇಳಿದರು.
ಸಿಂದಗಿಯ ವಿರಕ್ತಮಠದ ಆಸ್ತಿ ಪಹಣಿಯಲ್ಲಿನ ವಕ್ಫ್ ಬೋರ್ಡ ತೆರವು ಮಾಡಲು ವಿಜಯಪುರದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಅಗತ್ಯ ಧಾಖಲೆಗಳೊಂದಿಗೆ ಮನವಿ ಸಲ್ಲಿಸಿ, ಶ್ರೀಮಠದ ಇತಿಹಾಸದ ಕುರಿತು ವಿವರಿಸಿದರು.
ಹಿನ್ನೆಲೆ: ಸಿಂದಗಿ ವಿರಕ್ತಮಠವು ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಶ್ರೀಮಠದ ಮಠವಾಗಿದ್ದು. ಈ ಮಠದ ಅಧಿನದಲ್ಲಿ ಸಿಂದಗಿ ವಿರಕ್ತಮಠ, ಸಂಕ ವಿರಕ್ತಮಠ, ಮುಚ್ಚಂಡಿ ವಿರಕ್ತಮಠ, ಚಿಕ್ಕೋಡಿ ತಾಲೂಕಿನ ಆಡಿ ವಿರಕ್ತಮಠಗಳಿದ್ದು. ಈ ಎಲ್ಲಾ ಮಠಗಳಿಗೂ ೬೦೦ ವರ್ಷಗಳ ಇತಿಹಾಸದ ದಾಖಲೆಗಳಿವೆ. ಅದರಲ್ಲು ಸಿಂದಗಿ ಮಠದ ಮೊದಲನೇ ಪೀಠಾಧಿಪತಿಗಳು ಪ್ರಸನ್ನೇಶ್ವರ ಶ್ರೀಗಳು, ಎರಡನೇ ಪೀಠಾಧಿಪತಿಗಳು ಚಿರಂತಯ್ಯನವರು, ಮೂರನೇ ಪಿಠಾಧಿಪತಿಗಳು ಷಣ್ಮುಖಯ್ಯನವರು, ನಾಲ್ಕನೇ ಪೀಠಾಧಿಪತಿ ರಾಜಯೋಗಿ ಗುರುಬಸವ ಮಹಾಸ್ವಾಮೀಗಳು ಬೀಳೂರು ಇವರು ನಡೆದಾಡುವ ದೇವರು ಎಂದೇ ಖ್ಯಾತಿಯನ್ನು ಪಡೆದಿದ್ದರು. ಇವರು ನೆರೆಯ ರಾಜ್ಯ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆ ಮಾಡಿ ಅವಿಸ್ಮರಣೀಯರಾಗಿದ್ದರು. ಇವರು ಶಿಕ್ಷಣ ರಂಗದಲ್ಲಿ ಕ್ರಾಂತಿ ಮಾಡಿದ್ದರು. ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹಾಗೂ ಪ್ರೇಮ ಉಳ್ಳವರಾದ ಶ್ರೀಗಳು ಸಮಾಜದಲ್ಲಿಯ ಅಜ್ಞಾನವನ್ನು ಹೋಗಲಾಡಿಸುವುದಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಬೆಳಗಾಂವಿ, ಬಿಜಾಪೂರ, ಜಿಲ್ಲೆಗಳಲ್ಲಿ ಬೃಹತ್ ಮಟ್ಟದ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆ ನೀಡಿದ್ದರು. ಪೂಜ್ಯ ಶ್ರೀಗಳ ಮುಂದಾಲೋಚನೆ, ಚಿಂತನೆಯ ಪರಿಣಾಮವಾಗಿ ಧಾರವಾಡದಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಹುಟ್ಟಿತ್ತು. ಮತ್ತು ಬೀಳೂರು ಶ್ರೀ ಗುರು ಬಸವಾರ್ಯರು ಬಾಗಲಕೋಟೆಯಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘವನ್ನು (೧೯೦೬) ರಲ್ಲಿ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಹೀಗೆ ಹತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ತೆಗೆಯುವುದರ ಮುಖಾಂತರ ಪ್ರತಿಯೊಬ್ಬರಿಗೂ ಅಜ್ಞಾನದಿಂದ ಶಿಕ್ಷಣದ ಮಾರ್ಗಕ್ಕೆ ಕರೆದೊಯ್ದರು. ೧೯೦೪ರಲ್ಲಿ ಅಖೀಲ ಭಾರತ ವೀರಶೈವ ಮಹಾಸಭೆಯು ಅಸ್ತಿತ್ವಕ್ಕೆ ಬಂದಿತು. ಇದೇ ಸಂದರ್ಭದಲ್ಲಿ ಶ್ರೀಗಳನ್ನು ಮುಂಬೈ ಕರ್ನಾಟಕ ಲಿಂಗಾಯತ ಸಮಾಜ ಅಧ್ಯಕ್ಷರು ಕೂಡಾ ಆಗಿದ್ದರು. ಇಂತಹ ಮಹನಿಯರು ಪಿಠಾಧಿಪತಿಗಳಾಗಿದ್ದ ಸಿಂದಗಿ ವಿರಕ್ತಮಠದ ಆಸ್ತಿ ನಂ. ೧೦೨೦ರ ೧ಎಕರೆ ೩೬ ಗುಂಟೆ ಜಮೀನಿನ ಪಹಣಿಯಲ್ಲಿ ಕಾಲಂ ೧೧ ರಲ್ಲಿ ವಕ್ಫ ಬೋರ್ಡ ಸುನ್ನಿ ಖಬರಸ್ಥಾನ ಅಂತಾ ನಮೂದಗಿದ್ದು ಅದನ್ನೂ ಕೂಡಲೇ ತೆರವುಗೊಳಿಸಲು ಸದರಿ ಸಿಂದಗಿ ಮಠದ ಸುಮಾರು ೬೦೦ ವರ್ಷಗಳ ಹಳೆಯ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಅವರಿಗೆ ಮಠದ ಇತಿಹಾಸದ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಶ್ರೀಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಿಂದಗಿ ವಿರಕ್ತಮಠದ ಭಕ್ತರಾದ ನಿಂಗಣ್ಣ ಪಟ್ಟಣಶೆಟ್ಟಿ ಸೇರಿದಂತೆ ಅನೇಕರಿದ್ದರು.

