ವಕ್ಫ್ ಆಸ್ತಿ ವಿವಾದ | ಶಾಸಕ ಬಸನಗೌಡ ಪಾಟೀಲ ನೇತೃತ್ವದ ಸತ್ಯಾಗ್ರಹ | 4ನೇ ದಿನಕ್ಕೆ ಕಾಲಿರಿಸಿದ ಆಹೋರಾತ್ರಿ ಧರಣಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾನೂನು ಬಾಹಿರವಾಗಿ ರೈತರ, ಸಂಘ-ಸಂಸ್ಥೆಗಳ, ಮಠ ಮಾನ್ಯಗಳ ಜಮೀನು, ಅಲ್ಲದೇ ಸರ್ಕಾರಿ ಜಮೀನು, ಇತ್ಯಾದಿ ಆಸ್ತಿಗಳ ಉತಾರೆಯಲ್ಲಿ ವಕ್ಪ್ ಆಸ್ತಿ ಎಂದು ಎಂಟ್ರಿ ಮಾಡಿರುವುದನ್ನು ತಕ್ಷಣ ತೆಗೆದು ಹಾಕುವುದು, ವಕ್ಫ್ ಕಾಯ್ದೆಯನ್ನೇ ದೇಶದಿಂದ ಕೊತ್ತೊಗೆಯುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ 4ನೇ ದಿನಕ್ಕೆ ಕಾಲಿರಿಸಿದೆ.
3ನೇ ದಿನವಾದ ಬುಧವಾರದ ಧರಣಿಯಲ್ಲಿ ಭಾರತೀಯ ದ್ರಾವಿಡ ದಲಿತ ಸೇನೆಯ ರಾಜ್ಯಾಧ್ಯಕ್ಷ ರಮೇಶ ಚಲವಾದಿ ನೇತೃತ್ವದಲ್ಲಿ ಪದಾಧಿಕಾರಿಗಳು ಆಗಮಿಸಿ ಬೆಂಬಲ ನೀಡಿದರು. ಅದೇ ರೀತಿ ಡಾ.ಬಿ.ಆರ್.ಅಂಬೇಡ್ಕರ್ ಯುವ ಬ್ರಿಗೇಡ್ ಇಬ್ರಾಹಿಂಪುರ ಗೇಟ್ ವಿಜಯಪುರ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಮಾರುತಿ ಬೂದಿಹಾಳ ನೇತೃತ್ವದಲ್ಲಿ ಆಗಮಿಸಿ ಬೆಂಬಲ ಸೂಚಿಸಿದರು. ವಿಠ್ಠಲ ರುಕ್ಮಿಣಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಹಾಗೂ ಶಿವಸಿಂಪಿ ಸಮಾಜ ಕಲ್ಯಾಣ ಸಂಘದ ಪದಾಧಿಕಾರಿಗಳು, ಪಂಚಮಸಾಲಿ ಸಮಾಜ ಬಾಂಧವರು, ಜಗಜ್ಯೋತಿ ಯುವ ಸಂಘ ಕೂಡ ಹೋರಾಟಕ್ಕೆ ಬೆಂಬಲ ನೀಡಿದರು. ಅಲ್ಲದೆ, ಅನೇಕ ರಾಜಕೀಯ ಮುಖಂಡರು, ಮಹಿಳಾ ಸಂಘಟನೆಗಳು ಕೂಡ ಬೆಂಬಲ ನೀಡಿದವು.
ಸಂಸದರಾದ ಪಿ.ಸಿ.ಗದ್ದಿಗೌಡರ ಮಾತನಾಡಿ, ಸಿಎಂ ಆದೇಶದಂತೆ ವಕ್ಫ್ ಅದಾಲತ್ ನಡೆಸಿರುವುದಾಗಿ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಆತ ಹೇಳುವುದು ಸುಳ್ಳಾದರೆ ಕ್ರಮ ಕೈಗೊಳ್ಳಿ, ಸಚಿವ ಸ್ಥಾನದಿಂದ ಉಚ್ಚಾಟಿಸಬೇಕು. ಸರ್ಕಾರದ ಯಡವಟ್ಟಿನಿಂದಲೇ ರೈತರ ಪಹಣಿಯಲ್ಲಿ ವಕ್ಫ ಆಸ್ತಿ ಎಂದು ಸೇರ್ಪಡೆ ಆಗಿದೆ. ಸರ್ಕಾರದ ಹಸ್ತಕ್ಷೇಪ ವಿಲ್ಲದೆ ಇದೆಲ್ಲ ಆಗಲು ಸಾಧ್ಯವಿಲ್ಲ ಎಂದರು.
ರೈತರಿಗೆ ನ್ಯಾಯ ಸಿಗಬೇಕೆಂದು ಬಸನಗೌಡ ಪಾಟೀಲ ಯತ್ನಾಳರು ಆರಂಭಿಸಿರುವ ಈ ಹೋರಾಟಕ್ಕೆ ಬೆಂಗಾವಲಾಗಿ ನಿಲ್ಲುತ್ತೇವೆ. ಅದೇ ರೀತಿ ಎಲ್ಲರೂ ವಕ್ಪ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ, ನ್ಯಾಯ ಪಡೆದುಕೊಳ್ಳೊಣ ಎಂದು ಕರೆ ನೀಡಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಮಾತನಾಡಿ, ಹಿಂದಿನಿಂದಲೂ ಮಸ್ಲಿಂರ ಮೇಲೆ ಬಹಳ ಪ್ರೀತಿ ಹೊಂದಿರುವ ಕಾಂಗ್ರೆಸ್, ಮುಸ್ಲಿಂರನ್ನು ಖುಷಿ ಪಡಿಸುವ ಸಲುವಾಗಿ ವಕ್ಫ್ ಬೋರ್ಡ್ ಜಾರಿಗೆ ತಂದರು. ನ್ಯಾಯಾಲಯಕ್ಕೂ ಪ್ರಶ್ನಿಸುವ ಅವಕಾಶವಿಲ್ಲ. ಇದು ದೇಶಕ್ಕೆ ಮಾರಕವಾಗಿದ್ದು, ಇದನ್ನು ಕಿತ್ತಾಕಲೆಂದೆ ಕೇಂದ್ರ ಸರ್ಕಾರ ವಕ್ಪ್ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಜಮೀರ್ ಅದಾಲತ್ ನಡೆಸಿ, ಆಸ್ತಿಗಳನ್ನು ಕಬಳಿಸುವ ಹುನ್ನಾರದ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ ರವರು ನಡೆಸಿರುವ ವಕ್ಫ್ ಹೋರಾಟ ಈಗಾಗಲೇ ದಿಲ್ಲಿವರೆಗೆ ಮುಟ್ಟಿದೆ. ಅವರ ಹೋರಾಟ ಯಶಸ್ಸುಗೊಳ್ಳುವುದು ನಿಶ್ಚಿತ. ಸದಾ ಅವರಿಗೆ ಬೆಂಬಲವಾಗಿ ಇರುತ್ತೇವೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕರಾದ ವಿರಣ್ಣ ಚರಂತಿಮಠ, ದೇಶದಲ್ಲಿ ವಕ್ಫ್ ಆಸ್ತಿ 9.40 ಲಕ್ಷ ಎಕರೆ ಹೇಗಾಯಿತು? ಇವರೇನು ಅರಬಸ್ತಾನ್ ದಿಂದ ತಂದಿದ್ದಾರೂ ನನಗಂತು ಗೊತ್ತಿಲ್ಲ. ಕಾಂಗ್ರೆಸ್ ಬಂದಾಗ ಮುಸ್ಲಿಂರ ಪರ ತುಷ್ಟಿಕರಣ ಅನುಸರಿಸುವುದು ಅಭ್ಯಾಸವಾಗಿದೆ. ಇದು ಇನ್ನೂ ಮುಂದೆ ಬಂದ ಆಗಬೇಕು. ರೈತರ, ಮಠ ಮಾನ್ಯಗಳ ಭೂಮಿ ತಮ್ಮದೆಂದು ತೊಂದರೆ ಕೊಡುವ ಕೆಲಸ ನಡೆಸಿರುವ ಕಾಂಗ್ರೆಸ್ ಸರ್ಕಾರ ಧೋರಣೆ ಖಂಡನೀಯ.
ಯಾವ ದೇಶದಲ್ಲಿಯೂ ಇರದ ವಕ್ಫ್ ನಮ್ಮ ದೇಶದಲ್ಲಿ ಏಕೆ? ದಿಟ್ಟ ನಿಲುವಿನೊಂದಿಗೆ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ಬದಲಾವಣೆಗೆ ಮುಂದಾಗಿದೆ. ವಕ್ಫ್ ಕಿತ್ತಾಕಿ, ಎಲ್ಲ ಭೂಮಿ ಸರ್ಕಾರಕ್ಕೆ ಮರಳಿ ಪಡೆಯಬೇಕು ಎಂದು ಹೇಳಿದರು.
ಗುರುರಾಜ ಆಚಾರ್ಯ ಮಾತನಾಡಿ, ಇದು ಜನಪರ ಹೋರಾಟ. ಅಪರಿಮಿತ ವ್ಯಾಪ್ತಿಯ ಅಧಿಕಾರ ತೆಗೆದು ಹಾಕುವ ಉದ್ದೇಶ ಹೊಂದಲಾಗಿದೆ. ನಮಗೆ ದಾನ ಕೊಟ್ಟಿದ್ದು ಗೊತ್ತೆ ವಿನಹ, ದಾನ ಕೊಟ್ಟಿರುವುದನ್ನು ಕಸಿದುಕೊಳ್ಳುವ ದುರ್ಬುದ್ದಿ ನಮ್ಮದಲ್ಲ. ಕಾನೂನುಬಾಹಿರವಾಗಿ ನಮ್ಮವರ ಆಸ್ತಿ ಕಸಿದುಕೊಳ್ಳುವುದರ ವಿರುದ್ದ ನಮ್ಮ ಹೋರಾಟ ನಿರಂತರ ಎಂದು ಹೇಳಿದರು.
ಕಿಸಾನ ರೈತ ಸಂಘದ ಶಿವರಾಮ ಗಾಂವಕರ, ಶಾಂತವಾದ ಹೋರಾಟ ರಕ್ತ ಕ್ರಾಂತಿಗೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು. ಎಂತಹ ಹೋರಾಟ ನಡೆಸಲು ನಾವು ಬಸನಗೌಡರ ಜೊತೆಗೆ ಇರಲು ಸಿದ್ದ. ಹೀಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ವಕ್ಪ್ ಸಚಿವ ಜಮೀರ್ ರವರು ಜಿಲ್ಲೆಯಲ್ಲಿ ವಕ್ಫ್ ಅದಾಲತ್ ನಡೆಸಿ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿ, ಅಮಾಯಕ ರೈತರ ಜಮೀನುಗಳ ಉತಾರೆಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವ ಹುನ್ನಾರ ಆರಂಭಿಸಿದ್ದರು. ಇದನ್ನು ತಡೆಯಲು ಬಸನಗೌಡ ಪಾಟೀಲ ಯತ್ನಾಳ ರವರು ಹೋರಾಟಕ್ಕೆ ಮುಂದಾದರು. ಶೋಭಾ ಮೇಡಂ ಮತ್ತು ಬಸನಗೌಡರ ಪ್ರಯತ್ನದಿಂದ ದೆಹಲಿಯಿಂದ ಜೆಪಿಸಿ ಚೇರಮನರ ತಂಡ ವಿಜಯಪುರಕ್ಕೆ ಬರುತ್ತಿದೆ. ಅನ್ಯಾಯ ಆಗುತ್ತಿರುವ ರೈತರೊಂದಿಗೆ ಸಮಸ್ಯೆ ಬಗ್ಗೆ ಆಲಿಸುತ್ತಿದ್ದಾರೆ ಎಂದರು.
ಮುಖಂಡರಾದ ಕಾಸುಗೌಡ ಬಿರಾದಾರ, ಸಂಜೀವಕುಮಾರ್ ಐಹೊಳಿ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ದೇವರಹಿಪ್ಪರಗಿ, ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಮಾತನಾಡಿದರು.
ಧರಣಿಯಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಂಸದರಾದ ರಮೇಶ ಜಿಗಜಿಣಗಿ, ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜ ಸ್ವಾಮೀಜಿಗಳು, ಭೀಮಾಶಂಕರ ದತ್ತಾತಯ್ಯ ಸ್ವಾಮೀಜಿಗಳು, ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಮುಖಂಡರಾದ ದಯಾಸಾಗರ ಪಾಟೀಲ, ಸಂಗನಗೌಡ ಬಿರಾದಾರ, ಎಂ.ಎಸ್.ರುದ್ರಗೌಡರ, ಬಸನಗೌಡ ಪಾಟೀಲ ನಾಗರಾಳ ಹುಲಿ ಸೇರಿದಂತೆ ವಿಜಯಪುರ, ಬಾಗಲಕೋಟ, ಕಲಬುರ್ಗಿ ಜಿಲ್ಲೆಯ ರೈತರು, ನಾಗರಿಕರು ಭಾಗವಹಿಸಿದ್ದರು.
ಇಂದು ವಿಜಯಪುರ ಜಿಲ್ಲೆಗೆ ಆಗಮಿಸಲಿರುವ ಜೆಪಿಸಿ ತಂಡಕ್ಕೆ ಸಲ್ಲಿಸಲು ಅಗತ್ಯ ದಾಖಲೆಗಳೊಂದಿಗೆ ನಗರ ಶಾಸಕರ ಜನಸಂಪರ್ಕ ಕಾರ್ಯಾಲಯಕ್ಕೆ ಹಾಗೂ ಧರಣಿ ಸ್ಥಳದಲ್ಲಿ ವಿಜಯಪುರ, ಬಾಗಲಕೋಟ, ಚಿಕ್ಕೋಡಿ, ಕಲಬುರ್ಗಿ, ಬೀದರ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ನೂರಾರು ಅರ್ಜಿಗಳನ್ನು ಸಲ್ಲಿಸಿದರು.

