ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ೧೨ ನೇ ಶತಮಾನದ ಬಸವಾದಿ ಶರಣರ ಸಂದೇಶಗಳನ್ನು ನಾಡಿನಲ್ಲಿ ಶರಣ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸ, ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ ಹೇಳಿದರು.
ಪಟ್ಟಣದ ಶಿವಾನಂದ ಪೂಜಾರಿ ಅವರ ನಿವಾಸದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಲಿಂ. ಮಹಾದೇವಪ್ಪ ಶಿವಪ್ಪ ಪೂಜಾರಿ ಸ್ಮರಣಾರ್ಥ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರು ರಚಿಸಿರುವ ವಚನಗಳಲ್ಲಿ ಮಾನವೀಯ ಮೌಲ್ಯಗಳಿವೆ. ವಚನಗಳಲ್ಲಿರುವ ಜೀವನ ಮೌಲ್ಯಗಳನ್ನು ಅರಿತು ನಡೆದರೆ ಸಮಾಜದಲ್ಲಿ ಸನ್ಮಾರ್ಗದಲ್ಲಿ ನಡೆಯಲು ಪೂರಕವಾಗಿದೆ. ಇಂತಹ ವಚನ ಸಂದೇಶವನ್ನು ಶರಣ ಸಾಹಿತ್ಯ ಪರಿಷತ್ತು ಶಾಲೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನಮಾಸನಕ್ಕೆ ಮುಟ್ಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದರು.
ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ವಿರೇಶ ಕುಂಟೋಜಿ ಮಾತನಾಡಿ, ವಿಶ್ವಗುರು ಬಸವೇಶ್ವರರು ಬಯಸಿದ ಉದಾತ್ತ ಸಮಾಜ ಕಟ್ಟುವ ಕಾರ್ಯವನ್ನು ಮತ್ತು ಧಾರ್ಮಿಕ ಪ್ರಪಂಚದಲ್ಲಿ ಉಂಟು ಮಾಡಿದ ಕ್ರಾಂತಿಯನ್ನು ಪುಷ್ಠಿಕರಿಸಲು ಅವರ ಸಮಕಾಲೀನ ಅನೇಕ ಶರಣರು ಅವರೊಂದಿಗೆ ಇದ್ದರು ಎಂಬುವದನ್ನು ನಾವು ನೋಡುತ್ತೇವೆ. ಶರಣರು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಹೇಳುವ ಮೂಲಕ ಸ್ವರ್ಗ-ನರಕಗಳ ಕಲ್ಪನೆಯ ಬಗ್ಗೆ ನಾವು ಮಾಡುವ ಕಾಯಕಗಳ ಮೂಲಕ ಸ್ವರ್ಗ-ನರಕ ಇರುವಾಗಲೇ ಪಡೆಯಬಹುದು ಎಂದು ಹೇಳಿದರು. ಬದುಕಿನ ಕಲೆಯನ್ನು ಬಸವಾದಿ ಶರಣರು ನುಡಿದಂತೆ ನಡೆಯುವ ಮೂಲಕ ನಮಗೆ ತೋರಿಸಿಕೊಟ್ಟಿದ್ದಾರೆ. ಬಸವಾದಿ ಶರಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಕೆ.ಸೋಮನಕಟ್ಟಿ, ಶಿವಾನಂದ ಪೂಜಾರಿ ಇತರರು ಇದ್ದರು.
ಸಾವಿತ್ರಿ ಕಲ್ಯಾಣಶೆಟ್ಟಿ ಪ್ರಾರ್ಥಿಸಿದರು. ಆರ್.ಜಿ.ಅಳ್ಳಗಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜನಪದ ಗಾಯಕ ಬಸವರಾಜ ಹಾರಿವಾಳ, ಪಿಎಚ್ಡಿ ಪದವಿ ಪಡೆದ ಕಿರಣ ನಡಕಟ್ಟಿ ಅವರನ್ನು ಸನ್ಮಾನಿಸಲಾಯಿತು.

