ಅನ್ಯಾಯಕ್ಕೊಳಗಾದವರ ಅಹವಾಲು ಸ್ವೀಕಾರ | ವಕ್ಫ್ ಕಾಯ್ದೆ ತಿದ್ದುಪಡಿ ಜಂಟಿ ಸಂಸದೀಯ ಸಮಿತಿ ಚೇರಮನ್ ಆಗಮನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟ ಅವಧಿ ಅಹೋರಾತ್ರಿ ಧರಣಿ ಸ್ಥಳಕ್ಕೆ ಇದೇ ನ. 7 ರಂದು ಬೆಳಿಗ್ಗೆ 10.30 ಗಂಟೆಗೆ ವಕ್ಫ್ ಕಾಯ್ದೆ ತಿದ್ದುಪಡಿ ಜಂಟಿ ಸಂಸದೀಯ ಸಮಿತಿ (ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ) ಚೇರಮನ್ ಜಗದಾಂಬಿಕಾ ಪಾಲ್ ರವರ ತಂಡ ಆಗಮಿಸಿ, ಅನ್ಯಾಯಕ್ಕೆ ಒಳಗಾದವರಿಂದ ಅಹವಾಲು ಸ್ವೀಕರಿಸಲಿದೆ ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅದಾಲತ್ ನಡೆಸಿ, ನೀಡಿರುವ ಮೌಖಿಕ ಆದೇಶದಂತೆ ರೈತರ, ದೇವಸ್ಥಾನಗಳ, ಮಠ-ಮಾನ್ಯಗಳ, ಸರ್ಕಾರಿ, ಇತ್ಯಾದಿ ಜಮೀನು/ಆಸ್ತಿಗಳ ಉತಾರೆಯಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಆಸ್ತಿ ಎಂದು ಎಂಟ್ರಿ ಮಾಡಿದಲ್ಲದೆ, ಹಲವರಿಗೆ ನೋಟಿಸ್ ಸಹ ನೀಡಲಾಗಿದೆ. ಈ ಕುರಿತಂತೆ ಅನ್ಯಾಯಕ್ಕೆ ಒಳಗಾದವರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಬರಲಿರುವ ಚಳಿಗಾಲದ ಲೋಕಸಭಾ ಅಧಿವೇಶನದಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆ ವಿಷಯವನ್ನು ಮಂಡಿಸಲಿದ್ದಾರೆ.
ಅದರ ಪೂರ್ವಭಾವಿ ಆಗಿ ಬರಲಿರುವ ಸದರಿ ತಂಡಕ್ಕೆ ಬೀದರ, ಕಲಬುರ್ಗಿ, ಕೊಪ್ಪಳ, ಬಳ್ಳಾರಿ, ರಾಯಚೂರ, ಯಾದಗಿರಿ, ವಿಜಯಪುರ, ಬಾಗಲಕೋಟ, ಚಿಕ್ಕೋಡಿ ಭಾಗದ ರೈತರು, ಮಠಾಧೀಶರು, ಸಂಘ- ಸಂಸ್ಥೆಯವರು, ದೇವಸ್ಥಾನ ಸಮಿತಿಯವರು, ನಾಗರಿಕರು ತಮ್ಮ ಆಸ್ತಿಗಳು ಕಾನೂನು ಬಾಹಿರವಾಗಿ ವಕ್ಫ್ ಆಗಿದ್ದರ ಕುರಿತು ಅಗತ್ಯ ದಾಖಲೆಗಳನ್ನು ತಮ್ಮ ಮನವಿಪತ್ರದೊಂದಿಗೆ ಧರಣಿ ಸ್ಥಳಕ್ಕೆ ಅಥವಾ ವಿಜಯಪುರ ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯಕ್ಕೆ ಒಂದು ದಿನ ಮುಂಚಿತವಾಗಿ (ನವೆಂಬರ್ 6) ಅಂದರೆ ಇಂದು ಸಂಜೆ 5 ರೊಳಗಾಗಿ ಆಗಮಿಸಿ ಸಲ್ಲಿಸಬೇಕು ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ವಿನಂತಿಸಿದ್ದಾರೆ.


