ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರೈತರ ಜಮೀನುಗಳ ಉತಾರೆಯಲ್ಲಿ ವಕಪ್ ಎಂದು ನಮೂದಾಗಿರುವ ಹಿನ್ನೆಲೆ ಆಕ್ರೋಶಗೊಂಡ ತಾಲೂಕಿನ ಕುಂಟೋಜಿ ಗ್ರಾಮದ ರೈತರು ಸೋಮವಾರ ಗ್ರಾಮದಿಂದ ಬೈಕ್ ರ್ಯಾಲಿ ಮೂಲಕ ಪಟ್ಟಣಕ್ಕೆ ಆಗಮಿಸಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯವರೆಗೆ ಸಾಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ನಮ್ಮ ಸ್ವಂತ ಮಾಲ್ಕಿ ಕಬ್ಜಾವಹಿವಾಟಿನ ಜಮೀನುಗಳ ಪೈಕಿ ಕೆಲವನ್ನು ಖರೀದಿ ಮಾಡಿದ್ದು ಇನ್ನೂ ಕೆಲವು ಪಿತ್ರಾರ್ಜಿತ ಆಸ್ತಿಗಳಿವೆ. ರ.ಸ.ನಂ ೨೭೭, ೨೭೮, ೨೭೯, ೨೮೯, ೨೯೦, ೨೯೧, ೩೦೦, ೩೦೧, ೩೦೨, ೩೦೩, ೩೦೪, ೩೦೫, ೩೧೧, ೩೧೨, ೩೧೩ ಮತ್ತು ೪೬೬/೨ ಈ ಎಲ್ಲ ಜಮೀನಿಗಳ ಉತಾರೆಯ ೧೧ ನೇ ಕಾಲಂ ನಲ್ಲಿ ವಕ್ಫ್ ಆಸ್ತಿ ಕರ್ನಾಟಕ ಸರ್ಕಾರ ಎಂದು ನಮೂದಿಸಲಾಗಿದೆ. ಇದರಿಂದ ನಮಗೆ ಯಾವುದೇ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ. ಹಾಗಾಗಿ ಈ ಜಮೀನುಗಳ ಉತಾರೆ ಮತ್ತು ೧೯೭೩ ರ ಗೆಜೆಟ್ ನಲ್ಲಿ ಸಮೂದಾಗಿರುವ ವಕ್ಫ್ ಆಸ್ತಿ ಕರ್ನಾಟಕ ಸರ್ಕಾರ ಇದನ್ನು ತೆಗೆದು ಹಾಕಬೇಕು ಎಂದು ಮನವಿ ಪತ್ರದಲ್ಲಿ ನಮೂದಿಸಲಾಗಿದೆ.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಗುರು ಸುಳ್ಳಳ್ಳಿ, ಸಿದ್ದು ಹೆಬ್ಬಾಳ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಮನವಿ ಪತ್ರಕ್ಕೆ ರುದ್ರಯ್ಯ ಮಠ, ನಾಗಯ್ಯ ಮಠ, ಇಂದುಧರಯ್ಯ ಮಠ, ಬಸಯ್ಯ ಮಠ, ಚಂದ್ರಶೇಖರ ಕೊಳೂರ, ವಿರೇಶ ಕೊಳೂರ, ರಮೇಶ ಉಗರಗೋಳ, ಅಮರಪ್ಪ ರಕ್ಕಸಗಿ, ಪಾರ್ವತವ್ವ ಉಗರಗೋಳ ಸೇರಿದಂತೆ ಒಟ್ಟು ೨೬ ರೈತರು ಸಹಿ ಹಾಕಿದ್ದಾರೆ.

