ವಿಜಯಪುರ ಜಿಲ್ಲೆಯ ಮಠಾಧೀಶರಿಂದ ರೈತರ ಉಳಿವಿಗಾಗಿ ವಕ್ಫ್ ಮಂಡಳಿ ರದ್ದು ಮಾಡಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದಲ್ಲಿ ವಕ್ಫ್ ಮಂಡಳಿಯಿಂದಾಗಿ ರೈತರು, ಸಾರ್ವಜನಿಕರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸಂಪೂರ್ಣ ವಕ್ಫ್ ಮಂಡಳಿಯನ್ನೆ ರದ್ದುಗೊಳಿಸಿ, ಇಲ್ಲಿಯವರೆಗೂ ಆಗಿರುವ ಗೆಜೇಟನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಮಠಾಧೀಶರು ಹಾಗೂ ರೈತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಬಸವೇಶ್ವರ ವೃತ್ತದಿಂದ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿ ನಾಡಿನ ಯಾವ ರೈತರಿಗೂ ಹಾಗೂ ಸಾರ್ವಜನಿಕರಿಗೆ ಅನ್ಯಾಯವಾಗಬಾರದು, ಮಠಾಧೀಶರು ಯಾವಾಗಲೂ ರೈತರಪರ ಕಾಳಜಿ ಉಳ್ಳವರು, ಯಾವೊಬ್ಬ ರೈತರಿಗೆ ಅನ್ಯಾಯವಾದರೂ ನಾವೂ ಸಹಿಸುವುದಿಲ್ಲ, ಕೂಡಲೇ ವಕ್ಫ್ಗೆ ಸಂಬಂಧಿಸಿದಂತೆ ಎಲ್ಲ ಕೆಲಸಗಳನ್ನು ಕೂಡಲೇ ನಿಲ್ಲಿಸಬೇಕು, ಇಲ್ಲವಾದಲ್ಲಿ ರೈತರ ದೊಡ್ಡ ಕ್ರಾಂತಿಯಲ್ಲಿ ನಾವೂ ಪಾಲ್ಗೊಳುತ್ತೆವೆ ಎಂದು ಸಿಂದಗಿಯ ಸಾರಂಗಮಠದ ಪ್ರಭು ಸಾರಂಗದೇವರು ಹೇಳಿದರು.
ಇದೇ ವೇಳೆ ತಡವಲಗ ಸ್ವಾಮೀಜಿ ಮಾತನಾಡಿ, ಇಡೀ ದೇಶದಲ್ಲಿ ವಕ್ಫ್ ಮಂಡಳಿಯ ಕುತಂತ್ರದಿಂದಾಗಿ ರೈತರು, ಸಾರ್ವಜನಿಕರು ಬೀದಿಗೆ ಬರುವಂತಹ ದೊಡ್ಡಮಟ್ಟದ ಹುನ್ನಾರ ನಡೆದಿರುವುದು ನೋಡಿದ್ದೆವೆ. ಹಾಗೂ ನಮ್ಮ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ರೈತರು ಇದರಿಂದ ಸಮಸ್ಯೆಗಳನ್ನ ಎದುರಿಸುತ್ತಿರುವುದು ನೋಡಿದ್ದೇವೆ, ಇದೊಂದು ಕರಾಳ ಕಾಯಿದೆ, ಕೂಡಲೇ ಈ ಮಂಡಳಿಯನ್ನೆ ಸಂಪೂರ್ಣವಾಗಿ ರದ್ದುಮಾಡಬೇಕು ಎಂದರು.
ದೇವರ ಹಿಪ್ಪರಗಿ ಸದಯ್ಯನಮಠದ ಗಂಗಾಧರ ಸ್ವಾಮಿಜಿ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರರವರು ಬರೆದಿರುವ ಸಂವಿಧಾನದಡಿ ಭಾರತ ದೇಶ ಜಾತ್ಯಾತೀತ ಹಾಗೂ ಒಂದು ದೇಶಕ್ಕೆ ಒಂದೇ ಕಾನೂನು ಇಲ್ಲಿ ಎಲ್ಲರಿಗೂ ನ್ಯಾಯ ಸಿಗುವ ನಿಟ್ಟಿನಲ್ಲಿ ಮುಂದಾಲೋಚನೆಯಿಂದ ಬರೆದಿರುವ ಸಂವಿಧಾನವನ್ನು ಕೇವಲ ಭಾರತ ಮಾತ್ರವಲ್ಲ ವಿದೇಶಿಗರು ನಮ್ಮ ಸಂವಿಧಾನವನ್ನು ಚೆನ್ನಾಗಿದೆ ಎಂದು ಎತ್ತಿಹಿಡಿದಿದ್ದಾರೆ, ಆದ್ದರಿಂದ ಕೂಡಲೇ ಈ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಕೈಬಿಟ್ಟು ರೈತರನ್ನು ಉಳಿಸುವಂತಹ ಕೆಲಸ ಮಾಡಬೇಕು ಎಂದರು.
ಮನಗೂಳಿ ಸಂಗನಬಸವ ಸ್ವಾಮಿಜಿ ಮಾತನಾಡುತ್ತಾ, ವಕ್ಫ್ ಮಂಡಳಿಯ ಏಕರೂಪದ ಕಾನೂನಿನಡಿ ಅನ್ಯಾಯಕೊಳಗಾದ ರೈತರು ಹಾಗೂ ಸಾರ್ವಜನಿಕರು ಯಾವ ನ್ಯಾಯಾಲಕ್ಕೆ ಹೋದರೂ ನ್ಯಾಯ ಕೇಳುವಂತಿಲ್ಲ, ಕೃಷಿ ಸಾಲ ಪಡೆಯುವಂತಿಲ್ಲ, ಜಮೀನು ಮಾರಾಟ ಹಾಗೂ ವರ್ಗಾವಣೆ ಮಾಡುವಂತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ, ಇದರಿಂದ ಇಡೀ ನಾಡಿನ ಅನ್ನದಾತರು ಆತಂಕಕ್ಕೊಳಗಾಗಿದ್ದಾರೆ, ಕೂಡಲೇ ಇಂತಹ ಕರಾಳ ಕಾಯಿದೆಯನ್ನ ಹೊಂದಿರುವ ವಕ್ಫ್ ಮಂಡಳಿ ನಮ್ಮ ದೇಶಕ್ಕೆ ಮಾರಕವಾಗಿದೆ, ಇದನ್ನು ಬೇರು ಸಮೇತವಾಗಿ ಕಿತ್ತೊಗೆಯಬೇಕು ಎಂದರು.
ಈ ವೇಳೆ ರೈತ ಮುಖಂಡರಾದ ಅರವಿಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ನಿರೂಪಿಸಿದರು, ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ ವಂದನಾರ್ಪಣೆ ಮಾಡಿದರು.
ರೈತ ಮುಖಂಡರಾದ ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ಸೋಮು ಬಿರಾದಾರ, ಸಂಗಪ್ಪ ಟಕ್ಕೆ, ನಜೀರ ನಂದರಗಿ, ಅರವಿಂದ ರಜಪೂತ, ಮನೋಜ ಮಹಾಂತಮಠ, ಚನ್ನಬಸಯ್ಯ ಹಿರೇಮಠ, ರಾಮಸಿಂಗ ರಜಪೂತ, ಮಹಾಂತೇಶ ಮಮದಾಪುರ, ಭಾಷಾಸಾಬ ಮನಗೂಳಿ, ಸಂಗಮೇಶ ಹುಣಸಗಿ, ಸುಭಾಸ ಸಜ್ಜನ, ವಿರಣ್ಣ ಸಜ್ಜನ, ವಿರೇಶ ಗೊಬ್ಬುರ, ಶಿವಶರಣ ರೆಡ್ಡಿ ಭೈರೊಡಗಿ, ಶಶಿಕಾಂತ ಬಿರಾದಾರ, ಸಿದ್ದನಗೌಡ ಪಾಟೀಲ, ಶರಣಗೌಡ ಪಾಟೀಲ, ಮಹಾದೇವ ಕದಮ, ಭಾಗವಹಿಸಿದ್ದರು.
“ನೇಗಿಲಯೋಗಿಯ ರಕ್ಷಣೆಗಾಗಿ ನಾಡಿನ ಎಲ್ಲಾ ಮಠಾಧೀಶರು ಒಟ್ಟಾಗಿ ಕಾವಿಯೋಗಿಗಳ ಹೋರಾಟ ಮಾಡಿ ರೈತರಿಗೆ ಬೆಂಬಲಸೂಚಿಸುತ್ತಿದ್ದು, ರೈತರು ಹಾಗೂ ಮಠಮಾನ್ಯಗಳು ಒಂದೇ ನಾಣ್ಯದ ಎರಡು ಮುಖಗಳಂತೆ, ಈ ನಾಡು ಸುರಕ್ಷಿತವಾಗಿ ಉಳಿಯಬೇಕಾದರೆ ರೈತರು ಉಳಿಯಬೇಕು, ಎಂಬ ದಿಟ್ಟ ಸಂದೇಶವನ್ನು ಕೊಡುತ್ತಿರುವುದು ಎಲ್ಲಾ ಸ್ವಾಮಿಜಿಗಳ ರೈತಪರ ಕಾಳಜಿ ಕಾಣುತ್ತಿದೆ.”
– ಉಮೇಶ ಕಾರಜೋಳ
ಅಧ್ಯಕ್ಷರು, ಯುವ ಭಾರತ ಸಮಿತಿ
೬೦ ಕ್ಕೂ ಹೆಚ್ಚು ಶ್ರೀಗಳು ಭಾಗಿ
ಈ ವೇಳೆ ಬಂಥನಾಳದ ಶ್ರೀಗಳು, ಹತ್ತಳ್ಳಿ ಶ್ರಿಗಳು, ಮಸಬಿನಾಳ ಶ್ರಿಗಳು, ಹಿರೂರ ಶ್ರೀಗಳು, ಕಲಕೇರಿಯ ಶ್ರೀಗಳು, ಕೊರವಾರ ಚೌಕಿಮಠ ಶ್ರೀಗಳು, ಕೆರೂಟಗಿ ಶ್ರೀಗಳು, ವಡವಡಗಿ ಶ್ರೀಗಳು, ಚಬನೂರ ಶ್ರೀಗಳು, ಕುಂಟೋಜಿ ಶ್ರೀಗಳು, ನಾಗಠಾಣ ಶ್ರೀಗಳು, ಮುತ್ತಗಿ ಶ್ರೀಗಳು, ಮಲಘಾಣ ಶ್ರೀಗಳು, ಆಲಮೆಲ ಶ್ರೀಗಳು, ನಾದ ಶ್ರೀಗಳು, ಬೋರಗಿ ಶ್ರೀಗಳು, ಅಥರ್ಗಾ ಶ್ರೀಗಳು, ಮಮದಾಪುರ ಶ್ರೀಗಳು, ಗುಂಡಕನಾಳ ಶ್ರೀಗಳು, ಅಗರಖೇಡ ಶ್ರೀಗಳು, ಇಂಚಗೇರಿ ಶ್ರೀಗಳು, ತಡವಲಗಾ ಶ್ರೀಗಳು, ಶರಶ್ಯಾಡ ಶ್ರೀಗಳು, ಮುಳವಾಡ ಶ್ರೀಗಳು, ಅಂಬಳನೂರ ಶ್ರೀಗಳು, ಇಟಗಿ ಶ್ರೀಗಳು, ಗುಣದಾಳ ಶ್ರೀಗಳು, ಕೋಲಾರ ಶ್ರೀಗಳು, ಕುಮಸಗಿ ಶ್ರೀಗಳು, ಸೇರಿದಂತೆ ೬೦ ಕ್ಕೂ ಹೆಚ್ಚು ಶ್ರೀಗಳು ಪಾಲ್ಗೊಂಡಿದ್ದರು.

