ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕರುನಾಡಿನಲ್ಲಿ ಕನ್ನಡ ಭಾಷೆ ಸಾರ್ವಭೌಮವಾಗಬೇಕಾದರೆ ಕನ್ನಡದ ಬಳಕೆ ಹೆಚ್ಚು ನಡೆಯಬೇಕಾದ ಅಗತ್ಯವಿದೆ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಕರುನಾಡು ಸಾಹಿತ್ಯ ಪರಿಷತ್ತು ಕರ್ನಾಟಕ ರಾಜ್ಯೋತ್ಸವದಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪೂಜ್ಯರಿಗೆ ಬಿನ್ನವತ್ತಳೆ ಸಮರ್ಪಣೆ, ಕರುನಾಡು ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪ್ರದಾನ, ರುಬಿಯಾಬೇಗಂ ನದಾಫ್ ಅವರ ಏಳುಬೀಳಿನ ಹಾದಿ ಆತ್ಮಕಥನ ಕೃತಿ ಬಿಡುಗಡೆ ಹಾಗೂ ಪ್ರಭಾಕರ ಖೇಡದ ಅವರ ನಲವತ್ತರ ಬಾಲಕಿ ಕಥಾ ಸಂಕಲನ ಪುಸ್ತಕ ಪರಿಚಯ ಹಾಗೂ ಚುಟುಕು ಕವಿಗೋಷ್ಠಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಬೆಳವಣಿಗೆಗೆ ಕೇವಲ ರಾಜಧಾನಿ ಬೆಂಗಳೂರನ್ನು ಮುಂದಿಟುಕೊಳ್ಳಬಾರದು. ಕನ್ನಡ ಬಳಕೆ ವಿಶಾಲವಾಗುವಂತೆ ನೋಡಬೇಕಿದೆ. ರಾಜ್ಯದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿ, ಕನ್ನಡ ಶಾಲೆಗಳಿಗೆ ಮಕ್ಕಳ ಸಂಖ್ಯೆ ಹೆಚ್ಚಳವಾಗುವಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಸರ್ಕಾರಿ ಶಾಲೆಗೂ ಖಾಸಗಿ ಶಾಲೆಗೂ ಸ್ಥಳ ದೂರ ಇರುವಂತೆ ಸರ್ಕಾರ ಗಮನ ಹರಿಸಬೇಕಿದೆ. ಕನ್ನಡ ಭಾಷೆ ಬೆಳವಣಿಗೆ ಕೇವಲ ನಾಟಕೀಯ ಕೌಶಲ್ಯ ಅಗತ್ಯವಿಲ್ಲ . ಕೇವಲ ವೇದಿಕೆಯಲ್ಲಿ ಕನ್ನಡದ ಬಗ್ಗೆ ಮಾತನಾಡುವಂತಾಗಬಾರದು ಎಂದರು.
ಇಂದು ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ನಿಜವಾದ ಪ್ರತಿಭೆಗಳಿಗೆ ಪ್ರಶಸ್ತಿಗಳು ಸಿಗುವಂತಾದರೆ ಪ್ರಶಸ್ತಿಗಳಿಗೆ ಮೌಲ್ಯ ಬರುತ್ತದೆ. ಟಕ್ಕಳಕಿಯ ಬಾಬು ಮಾಸ್ತರ ಅವರು ರಂಗಭೂಮಿಯಲ್ಲಿ ಸಾಕಷ್ಟು ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ. ಇಂತಹವರನ್ನು ಗುರುತಿಸಿ ಕರುನಾಡು ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವದು ಶ್ಲಾಘನೀಯ. ಇಂತಹ ಪ್ರತಿಭೆಗಳನ್ನು ಸರ್ಕಾರ ಗುರುತಿಸಿ ಮುಂದಿನ ದಿನಗಳಲ್ಲಿ ಇಂತಹವರಿಗೆ ಪ್ರಶಸ್ತಿ ನೀಡುವಂತಾಗಬೇಕಾದ ಅಗತ್ಯವಿದೆ ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಕಾರ್ಯಕ್ರಮ ಉದ್ಘಾಟಿಸಿದ ನರಸಲಗಿ ಎಂಡಿಎಸ್ಪಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಎಂ.ನರಸರೆಡ್ಡಿ ಮಾತನಾಡಿದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ ಅವರು ರುಬಿಯಾಬೇಗಂ ನದಾಫ ಅವರ ಏಳುಬೀಳಿನ ಹಾದಿ ಕೃತಿ ಬಿಡುಗಡೆಗೊಳಿಸಿದರು.
ಕನ್ನಡ ಜನಪದ ಪರಿಷತ್ತಿನ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ಏಳುಬೀಳಿನ ಹಾದಿ ಕೃತಿ ಪರಿಚಯಿಸಿದರು. ನಲವತ್ತರ ಬಾಲಕಿ ಕಥಾ ಸಂಕಲನದ ಪರಿಚಯವನ್ನು ಡಾ. ಬಸವರಾಜ ಹಡಪದ ಪರಿಚಯಿಸಿದರು.
ರಂಗಭೂಮಿ ನಿರ್ದೇಶಕ ಬಾಬು ಮಾಸ್ತರ ಟಕ್ಕಳಕಿ ಹಾಗೂ ಪತ್ರಕರ್ತೆ ಲಕ್ಷ್ಮೀ ಬಾಗಲಕೋಟ ಅವರಿಗೆ ಕರುನಾಡು ರಾಜ್ಯೋತ್ಸವ ಪ್ರಶಸ್ತಿ, ಕ್ರೀಡಾಪಟು ಬಸವರಾಜ ಬಾಗೇವಾಡಿ ಅವರಿಗೆ ಕರುನಾಡು ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿದ್ದಲಿಂಗ ಸ್ವಾಮೀಜಿ, ಆನಂದದೇವರು ಅವರಿಗೆ ಬಿನ್ನವತ್ತಳೆ ಸಮರ್ಪಿಸಲಾಯಿತು.
ರಾಜ್ಯೋತ್ಸವದಂಗವಾಗಿ ಜರುಗಿದ ಚುಟುಕು ಕವಿಗೋಷ್ಠಿಯಲ್ಲಿ ಮಹಾಂತೇಶ ಸಂಗಮ, ಪ್ರಭಾಕರ ಖೇಡದ, ಕಲ್ಲು ಬಾಗೇವಾಡಿ, ಕಾಶೀನಾಥ ಅವಟಿ, ಎಚ್.ಆರ್.ಬಾಗವಾನ, ಶಿವಪುತ್ರ ಅಜಮನಿ, ನೀಲಪ್ಪ ಅಂಗಡಿ, ಶಾಂತಾ ಚೌರಿ, ಅರುಂಧತಿ ಹತ್ತಿಕಾಳ, ಬಸಮ್ಮ ಹಂಜಗಿ, ಸಹದೇವ ಗುಡದಿನ್ನಿ, ದ್ರಾಕ್ಷಾಯಿಣಿ ಬಾಗೇವಾಡಿ, ಪ್ರವೀಣ ನಂದಿ ಇತರರು ಭಾಗವಹಿಸಿ ತಮ್ಮ ಸ್ವರಚಿತ ಚುಟುಕು ವಾಚಿಸಿದರು.
ಪರಿಷತ್ತಿನ ಜಿಲ್ಲಾ ಖಜಾಂಚಿ ಸಂಗಮೇಶ ತಾಳಿಕೋಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಕರುನಾಡು ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ನೀಲಪ್ಪ ಅಂಗಡಿ ಸ್ವಾಗತಿಸಿದರು. ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಸಂತೋಷ ಪಾಟೀಲ ನಿರೂಪಿಸಿದರು. ಕರುನಾಡು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಅಸ್ಲಂ ಶೇಖ ವಂದಿಸಿದರು.

