ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಸತತ ೩೭ ವರ್ಷಗಳಿಂದ ಪಾದಯಾತ್ರೆಯ ಮೂಲಕ ಯಾತ್ರೆ ಕೈಗೊಂಡಿರುವ ಬಳ್ಳಾರಿ ಜಿಲ್ಲೆಯ ಹೆಚ್. ಓಬಳಾಪುರದ ಭಕ್ತಾಧಿಗಳು ಪಟ್ಟಣದ ಭಕ್ತರ ಊಟೋಪಚಾರದ ಸೇವೆಯ ನಂತರ ಪಂಢರಾಪುರಕ್ಕೆ ಪಾದಯಾತ್ರೆ ಬೆಳೆಸಿದರು.
ಶನಿವಾರ ಸಾಯಂಕಾಲ ಪಟ್ಟಣಕ್ಕೆ ಆಗಮಿಸಿದ ಬಳ್ಳಾರಿ, ಭದ್ರಾವತಿ, ಸೇರಿದಂತೆ ವಿವಿಧ ಪ್ರದೇಶಗಳ ನೂರಾನಲ್ವತ್ತಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಟ್ಟಣದ ಶಾಲಾ ಆವರಣದಲ್ಲಿ ಭದ್ರಾವತಿ ಗೋಂದಿಮಠದ ಶ್ರೀಸ್ವಾಮಿನಾಮ ದೇವಾನಂದ ಭಾರತಿ ನೇತೃತ್ವದಲ್ಲಿ ಕೀರ್ತನೆ, ಭಜನೆಗಳನ್ನು ನೆರವೇರಿಸಿ ವಾಸ್ತವ್ಯ ಹೂಡಿದರು.
ಈ ಸಂದರ್ಭದಲ್ಲಿ ಪಟ್ಟಣದ ಸದ್ಭಕ್ತರು ಯಾತ್ರಾರ್ಥಿಗಳಿಗೆ ಸಾಯಂಕಾಲದ ಫಳಾರ, ರಾತ್ರಿ ಊಟ, ನೀರು, ಬಾಳೆಹಣ್ಣು ಸೇರಿದಂತೆ ಲೈಟ್ ಸೇವೆ ಒದಗಿಸಿದರು.
ಪ್ರತಿ ವರ್ಷದ ಪಾದಯಾತ್ರೆ ಸಮಯಕ್ಕೆ ಪಟ್ಟಣದ ಜನತೆ ನೀಡುತ್ತಿರುವ ಸಹಕಾರ ಕುರಿತು ಪಾದಯಾತ್ರೆ ಸಮಿತಿಯ ಖಜಾಂಚಿ ರಮೇಶ ತೊಗರಿ ಮಾತನಾಡಿ, ಅಕ್ಟೋಬರ್ ೧೯ರಿಂದ ಬಳ್ಳಾರಿ ಜಿಲ್ಲೆಯ ಹೆಚ್. ಓಬಳಾಪುರದಿಂದ ಆರಂಭಗೊಂಡ ಈ ಯಾತ್ರೆಯಲ್ಲಿ ೬೫ ಮಹಿಳೆಯರು ಸೇರಿ ನೂರಾನಲ್ವತ್ತಕ್ಕೂ ಹೆಚ್ಚು ಜನರಿದ್ದು, ಸತತವಾಗಿ ೨೨ ದಿನಗಳ ಕಾಲುನಡಿಗೆಯಲ್ಲಿ ಸಾಗಿ ನವೆಂಬರ್ ೯ ಶನಿವಾರ ಕಾರ್ತಿಕ ಶುದ್ಧ ಅಷ್ಟಮಿಯಂದು ಪಂಢರಾಪುರ ತಲುಪುತ್ತದೆ. ನಂತರ ಎಲ್ಲ ಪಾದಯಾತ್ರಿಗಳು ತಮ್ಮ ತಮ್ಮ ಗ್ರಾಮಕ್ಕೆ ತೆರಳಲಿದ್ದಾರೆ ಎಂದರು.
ಯಾತ್ರೆಯ ನೇತೃತ್ವವನ್ನು ಭದ್ರಾವತಿ ಗೋಂದಿಮಠದ ಸ್ವಾಮಿ ನಾಮದೇವಾನಂದ ಭಾರತಿ, ಚಂದ್ರಶೇಖರಸ್ವಾಮಿ ಗೋಂದಿಮಠ, ಎಂ. ಓಬಳೇಶ, ಕಿಂಡ್ರಿ ಕೊಟ್ರೇಶ, ನಾಣ್ಯಾಪೂರ ಸಂತೋಷ, ಸಣ್ಣ ಯಂಕಪ್ಪ, ಮಹಾದೇವಪ್ಪ, ಕುಮಾರಸ್ವಾಮಿ, ಚನ್ನಪ್ಪ, ಕಿಮ್ಯನಾಯ್ಕ, ಯಂಕನಾಯ್ಕ, ಪಿ.ತಿಮ್ಮಣ್ಣ, ದುರುಗಪ್ಪ, ಗೋವಿಂದಪ್ಪ, ಹುಲುಗಪ್ಪ, ಶಂಕರನಾಯ್ಕ ಲಕ್ಷö್ಮಣ, ಐಗಾರ ದುರುಗೇಶ, ನಾಗರಾಜ ಚೋರನೂರ ಮೈಸೂರು ರಮೇಶ ವಹಿಸಿದ್ದರು.

