ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜೋರಾಗುತ್ತಿದ್ದಂತೆ ನಗರದಲ್ಲಿ ಅಂಗಡಿ ಮುಂಗಟುಗಳ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ ಆದರೆ ಸಿದ್ದಲಿಂಗ ಶ್ರೀಗಳ (ಹಳೆಯ ಎಸ್.ಬಿ.ಐ) ರಸ್ತೆಯ ಅಂಗಡಿಗಳ ಸಣ್ಣ ಪುಟ್ಟ ವ್ಯಾಪಾರಸ್ಥರು ಬೀದಿಗೆ ಬರುವ ಪರಿಸ್ಥಿತಿ ಉದ್ಭವವಾಗಿದೆ. ಕಳೆದ 2013 ರಲ್ಲಿ ಮಾಸ್ಟರ್ ಪ್ಲ್ಯಾನ್ ನಲ್ಲಿ ಅಂಗಡಿಗಳು ತೇರುವಾಗಿದ್ದು, ಸದ್ಯಕ್ಕೆ ಎರಡು ಬದಿಯ ಚರಂಡಿ ಮೇಲಿರುವ ಅಂಗಡಿಗಳನ್ನು ಮಾತ್ರ ತೆರವುಗೊಳಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ಚುರುಕುಗೊಂಡಿದ್ದು ಸಂತಸದ ವಿಷಯ. ಅದರಿಂದ ಪಟ್ಟಣ ಅಭಿವೃದ್ಧಿಯಾಗುವ ಎಲ್ಲ ಗುಣಲಕ್ಷಣಗಳು ಕಾಣುತ್ತಿವೆ. ಬಸ್ ನಿಲ್ದಾಣದಿಂದ ಹಳೆಯ ಮೋರಟಗಿ ರೋಡವರೆಗೆ ಮದ್ಯ ರಸ್ತೆಯಿಂದ 45 ಫಿಟ್ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಈಗಾಗಲೇ ತೆರವು ಮಾಡಿಕೊಳ್ಳುತ್ತಿದ್ದಾರೆ. ಈ ಕಾರ್ಯ ಈಗಾಗಲೇ ಟಿಪ್ಪು ಸುಲ್ತಾನ್ ವೃತ್ತದವರೆಗೂ ಬಂದು ತಲುಪಿದೆ. ಟಿಪ್ಪು ಸುಲ್ತಾನ ವೃತ್ತದ ರಸ್ತೆಯಿಂದ ಇನ್ನೂಳಿದ ಅಂಗಡಿಗಳನ್ನು ಸಹ ಇದೇ ರೀತಿ ತೆರವು ಮಾಡಲಿದ್ದಾರೆ. ಇನ್ನೂ ತೊಂಟದ ಸಿದ್ದಲಿಂಗ ಶ್ರೀಗಳ (ಹಳೆಯ ಎಸ್.ಬಿ.ಐ) ರಸ್ತೆಯಲ್ಲಿ ಎರಡು ಭಾಗದಲ್ಲಿ ಚರಂಡಿ ಮೇಲಿರುವ ಅಂಗಡಿಗಳನ್ನು ಮಾತ್ರ ತೆರುವುಗೊಳಿಸಬೇಕು. ಅದನ್ನು ಮೀರಿ ತೆರವಿಗೆ ಮುಂದಾದರೆ ವ್ಯಾಪಾರವನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳು ಬೀದಿಗೆ ಬರುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ. ಇದನ್ನು ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಸೂಕ್ಷ್ಮವಾಗಿ ಗಮನಿಸಿ ವ್ಯಾಪಾರಸ್ಥರ ಸಂಕಷ್ಟವನ್ನು ಆಲಿಸಿ ಅಂಗಡಿಗಳ ತೆರವಿಗೆ ಅನುಕೂಲು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

