ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿಕಾರಿದ ಸಚಿವ ಎಂ.ಬಿ.ಪಾಟೀಲ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಬಿಜೆಪಿಯವರು ರೈತರಿಗೆ ನೋಟಿಸ್ ನೀಡಿದ್ದಲ್ಲದೆ, ಭೂದಾಖಲೆಯಲ್ಲಿ ವಕ್ಫ್ ಹೆಸರನ್ನೂ ಸೇರಿಸಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ರೈತರ ಹೆಸರನ್ನು ಪಟ್ಟಿ ಮಾಡಿದ ಸಚಿವರು, ಬಿಜೆಪಿಯವರು ಭೂ ದಾಖಲೆಗಳಲ್ಲಿ ವಕ್ಫ್ ಹೆಸರನ್ನು ನಮೂದಿಸಿ ಭೂಮಿಯನ್ನು ಕಬಳಿಸಿಕೊಂಡಿರುವ ರೈತರ ಪಟ್ಟಿ ಇದಾಗಿದೆ. ಹಿಂದಿನ ಬಿಜೆಪಿ ಸರ್ಕಾರವು ವಕ್ಫ್ ಭೂಮಿ ಎಂದು ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿದರು.
ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಹಿಂದೂಗಳ ಹೋರಾಟಗಾರರು ಎಂದು ಕರೆಸಿಕೊಳ್ಳುವವರು ಕೆಲವರು ಒತ್ತಾಯಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಮತ್ತು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಮಾಡಲು ಬಿಜೆಪಿ ವಕ್ಫ್ ವಿಷಯವನ್ನು ಎತ್ತುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರ ರೈತರಿಂದ ಒಂದು ಇಂಚು ಭೂಮಿಯನ್ನು ಸಹ ಕಸಿದುಕೊಳ್ಳುತ್ತಿಲ್ಲ ಮತ್ತು ಭೂ ದಾಖಲೆಗಳನ್ನು ಸರಳೀಕರಿಸಲು ಯೋಜಿಸುತ್ತಿದೆ. 1974ರಲ್ಲಿ ಕಣ್ತಪ್ಪಿನಿಂದ ವಿಜಯಪುರ ನಗರದ ಮಹಾಲಬಾಗಾಯತನ ಸರ್ವೇ ನಂಬರ್ ಗಳ ಮುಂದೆ ಹೊನವಾಡ ಎಂದು ಸೇರಿದ್ದರಿಂದಾಗಿ ಈ ಲೋಪವಾಗಿದೆ. ಆ ಬಳಿಕ 1977ರಲ್ಲಿ ಹೊನವಾಡ ಎಂಬುದನ್ನು ತೆಗೆದು ಹಾಕಲಾಗಿದೆ. ರೈತರ ಭೂಮಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದ್ದು, ಸರ್ಕಾರ ಯಾವುದೇ ರೈತರ ಒಂದು ಒಕರೆ ಜಮೀನನ್ನೂ ಕೂಡ ವಕ್ಫ್ ಗೆ ನೀಡಿಲ್ಲ. ಹೊನವಾಡದಲ್ಲಿ ವಕ್ಫ್ ಆಸ್ತಿ 1200 ಎಕರೆ ಇಲ್ಲ. ಅಲ್ಲಿರುವುದೇ ಕೇವಲ 10 ಎಕರೆ 29 ಗುಂಟೆ ಮಾತ್ರ ಎಂದು ಸ್ಪಷ್ಟಪಡಿಸಿದರು.

