ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಭಾಷೆಗೆ ಶ್ರೀಮಂತ ಇತಿಹಾಸವಿದ್ದು, ತನ್ನದೇ ಶ್ರೇಷ್ಠತೆಯ ಆಸ್ಮಿತೆಯನ್ನು ಹೊಂದಿದೆ. ಅನ್ಯ ಭಾಷೆಗಳ ಹಾವಳಿಗಳ ಮಧ್ಯೆಯೂ ಕನ್ನಡ ಭಾಷೆ ತನ್ನ ಗತ ವೈಭವದಿಂದ ಅಸ್ಮಿತೆ ಉಳಿಸಿಕೊಂಡು ಮಿನುಗಿದೆ. ಕನ್ನಡ ಸಂಸ್ಕೃತಿಯ ಬೆಡಗು, ಭಿನ್ನಾಣ ವೈವಿಧ್ಯಮಯವಾಗಿದೆ ಎಂದು ನಗರದ ಉದ್ಯಮಿ ಸಂಜೀವ ಪಾಟೀಲ (ಕನ್ನೂರ) ಹೇಳಿದರು.
ನಗರದ ಆಶ್ರಮ ರಸ್ತೆಯಲ್ಲಿರುವ ರಾಮಕೃಷ್ಣ ಬಡಾವಣೆಯಲ್ಲಿ ಗಜಾನನ ಮಿತ್ರ ಮಂಡಳಿ ಶುಕ್ರವಾರ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡಾವಣೆಯ ಹಿರಿಯರಾದ ಶ್ರೀಶೈಲ ಮಹಾಜನಶೆಟ್ಟಿ ಅವರು ನಾಡ ಧ್ವಜಾರೋಹಣ ನೆರವೇರಿಸಿದರು.
ಶಿಕ್ಷಕ ಎಸ್.ಜಿ.ಹೆಬ್ಬಾಳ, ಯೋಗ ಶಿಕ್ಷಕಿ ಸಾವಿತ್ರಿ ಮಠ ಮತ್ತು ಬಡಾವಣೆಯ ಮಾಲಿಕ ಸಿದ್ರಾಮ ಅಂಜಿಖಾನೆ ಮಾತನಾಡಿ, ಕರ್ನಾಟಕ ಏಕೀಕರಣ ದಿನ ನಮಗೆಲ್ಲ ವಿಶೇಷ ದಿನವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಚದುರಿ ಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ 1956 ರ ನವೆಂಬರ್ 1 ರಂದು ಏಕೀಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1 ರಂದು ನಾವು ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡ ಬಂದಿದ್ದೇವೆ. ರಾಜ್ಯೋತ್ಸವ ಸಂಭ್ರಮದ ಹಿಂದೆ ನಾಡಿನ ಏಕೀಕರಣಕ್ಕಾಗಿ ಹಗಲಿರುಳು ಶ್ರಮಿಸಿದ ಅನೇಕ ಮಹನೀಯರ ಹೋರಾಟದ ಬಲವಿದೆ. ಕನ್ವಡ ಮನಗಳು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಯನ್ನು ಮೆರೆದಿದ್ದಾರೆ.ಆ ಮಹಾನ ಚೇತನಗಳನ್ನೆಲ್ಲಾ ಇಂದು ಕೃತಜ್ಞತೆಯಿಂದ ಸ್ಮರಿಸಬೇಕು. ಏಕೆಂದರೆ ಆ ಮಹಾನುಭಾವರು ಕನ್ನಡ ಭಾಷಿಕರ ರಾಜ್ಯವನ್ನಾಗಿ ಕನಾ೯ಟಕ ರೂಪುಗೊಳ್ಳಲು ಶ್ರಮಿಸಿದ್ದಾರೆ ಎಂದರು.
ಈರಣ್ಣ ಧಾರವಾಡಕರ, ವಿಶ್ವನಾಥ್ ಕೋಟಿನ, ಮಂಜುನಾಥ ಹೂಗಾರ, ಜಂಗಮಶೆಟ್ಟಿ, ಕೆಇಬಿ ಅಬಿಯಂತರ ಗೊಳಸಂಗಿ, ರವಿ ಉಮರ್ಜಿ, ರಾಜು ಹುನ್ನೂರ, R. R. ರಜಪೂತ, M.ಕನಕರೆಡ್ಡಿ, J. K.ರಜಪೂತ, ಕಿಶೋರ್ ಮೇತ್ರೆ, ಸುಚಿತಾ ಮೇತ್ರೆ. ಸ್ವಾತಿ ಅಂಜಿಖಾನೆ, ಶೈಲಜಾ ಪಾಟೀಲ, ಗೀತಾ ಕೋಟಿನ, ರಾಜೇಶ್ವರಿ ಹೂಗಾರ, ರೂಪಾ ಹೊಸಮನಿ, ಸುನೀತಾ ರಜಪೂತ ಸೇರಿದಂತೆ ಅನೇಕರಿದ್ದರು

“ಕನ್ನಡ ನಾಡಿನಲ್ಲಿ ಕನ್ನಡವೇ ಪ್ರಥಮ, ಪ್ರಧಾನ, ಸಾರ್ವಭೌಮ ಭಾಷೆ. ಶಿವಶರಣರು, ದಾಸರು, ಕವಿ-ಸಾಹಿತಿಗಳಿಂದ ಕಂಗೊಳಿಸುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ. ಕನ್ನಡ ಅನ್ನದ ಭಾಷೆ, ಜೀವದ ಭಾಷೆ, ಪವಿತ್ರ ಭಾಷೆ, ಹೃದಯದ ಭಾಷೆಯಾಗಿ ನಾವು ಕಾಣಬೇಕಿದೆ. ನಾವೆಲ್ಲ ಕೇವಲ ನವೆಂಬರ್ ಕನ್ನಡಿಗರಾಗದೆ ನಂ.೧ ಕನ್ನಡಿಗರಾಗೋಣ. ನಂ.೧ ಕನ್ನಡಿಗರಾದರೆ ಸಾವಿರ ಸಾವಿರ ವರ್ಷಗಳ ಸುದೀರ್ಘ ಇತಿಹಾಸವನ್ನು ನಾವು ಕಾಣಬಹುದಾಗಿದೆ.”
– ಸಂಜೀವ ಪಾಟೀಲ (ಕನ್ನೂರ)
ಉದ್ಯಮಿ, ವಿಜಯಪುರ

