ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಭಿವೃದ್ಧಿಯಲ್ಲಿ ಭಾಷೆಯ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ ತುಳಸಿಮಾಲ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡವು ಸಮೃದ್ಧ ಸಾಹಿತ್ಯ ಪರಂಪರೆ ಮತ್ತು ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿದ ಭಾಷೆಯಾಗಿದ್ದು, ಇಂದಿನ ಸಮಾಜದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಭಾಷೆಯಾಗಿ ಬೆಳೆಯಬೇಕಾಗಿದೆ. ಕನ್ನಡದಲ್ಲಿ ಈ ಕ್ಷೇತ್ರಗಳಿಗೆ ಸಂಬಂಧಿಸಿದ ಜ್ಞಾನವನ್ನು ಸೃಷ್ಟಿಸುವುದು ಮತ್ತು ನವೀನ ಪೀಳಿಗೆಗೆ ಸ್ಥಳೀಯ ಭಾಷೆಯಲ್ಲಿ ಬೋಧನೆ ನೀಡುವುದು ಅತ್ಯಾವಶ್ಯಕವಾಗಿದೆ. ಇದಕ್ಕಾಗಿ ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ತತ್ವಜ್ಞಾನ ಸಾಹಿತ್ಯವನ್ನು ರಚನೆ ಮಾಡುವುದರ ಜೊತೆಗೆ ಪಠ್ಯಪುಸ್ತಕಗಳಲ್ಲಿ ಕನ್ನಡ ಬಳಕೆಯನ್ನು ಪ್ರೋತ್ಸಾಹಿಸುವುದು ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು ಕನ್ನಡದ ಬೆಳವಣಿಗೆಗೆ ಅವಶ್ಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಪ. ಗು. ಸಿದ್ದಾಪುರ ಅವರು ಮಾತನಾಡಿ ಕನ್ನಡದ ಕಂಪು ಗಡಿಯಾಚೆ, ಕಡಲಾಚೆ ಪಸರಿಸಿ ಬೇಕು. ಮಹಾರಾಷ್ಟçದಲ್ಲಿ ಕನ್ನಡ ಹೆಸರಿನ ಊರಿನ ಬಗ್ಗೆ ಪ್ರಸ್ತಾಪಿಸಿ, ಕನ್ನಡ ಅಂಕಿಗಳ ಬಳಕೆ ಹೆಚ್ಚಾಗಬೇಕೆಂದು ಆಶಿಸಿದರು. ಕನ್ನಡಕ್ಕೆ ಕಿಟೆಲ್, ಮಧುರಚೆನ್ನರ ಸೇವೆಯನ್ನು ಸ್ಮರಿಸುತ್ತ ಕನ್ನಡವನ್ನು ಪ್ರೀತಿಸಿ, ಅನ್ಯ ಭಾಷೆಗಳನ್ನು ಗೌರವಿಸಿ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ರಸ ಪ್ರಶ್ನೆಗಳನ್ನು ಕೇಳಿ ಬಹುಮಾನ ವಿತರಿಸಿದರು. ವಂದೇಮಾತರ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮತ್ತು ಪ್ರೊ. ಬಳಿಗಾರ ಕನ್ನಡ ಗೀತೆಗಳನ್ನು ಹಾಡಿದರು. ಪ್ರೊ. ಹನುಮಂತಯ್ಯ ಪೂಜಾರ ಕಾರ್ಯಕ್ರಮ ನಿರೂಪಿಸಿದರು.

