ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಪಟ್ಟಣದಲ್ಲಿ ಶುಕ್ರವಾರ ಬೆಳಕಿನ ಹಬ್ಬ ದೀಪಾವಳಿಯ ಅಮವಾಸ್ಯೆಯ ಸಂಭ್ರಮ ಎಲ್ಲೆಡೆ ಕಂಡುಬಂದಿತ್ತು. ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ದೇವರಿಗೆ ಅಲಂಕಾರ ಪೂಜೆ ನೆರವೇರಿಸಲಾಗಿತ್ತು. ಎಲ್ಲೆಲ್ಲೂ ವಿಶೇಷ ಪೂಜೆ, ಪುನಸ್ಕಾರಗಳಲ್ಲಿ ಜನರು ನಿರತರಾಗಿದ್ದರು.
ಪಟ್ಟಣದ ಬಸವೇಶ್ವರ ವೃತ್ತದ ಸುತ್ತಲೂ ಸೇರಿದಂತೆ ಮಾರುಕಟ್ಟೆ ಪ್ರದೇಶದಲ್ಲಿ ದೀಪಾವಳಿ ಹಬ್ಬದ ಖರೀದಿಯ ಭರಾಟೆ ಜೋರಾಗಿರುವದು ಕಂಡು ಬಂದಿತ್ತು. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಜನಜಂಗುಳಿಯೋ ಜನಜಂಗುಳಿ. ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಲಗ್ಗೆ ಇಟ್ಟ ಜನರು ಪೂಜೆಗೆ ಅಗತ್ಯವಿರುವ ಚೆಂಡು ಹೂ, ಸೇವಂತಿಗೆ, ಬಾಳೆದಿಂಡು, ಕಬ್ಬು, ಸೇಬು, ಬಾಳೆಹಣ್ಣು , ಕಬ್ಬು, ಕುಂಬಳಕಾಯಿ ಸೇರಿದಂತೆ ವಿವಿಧ ಹಣ್ಣು-ಹಂಪಲಗಳನ್ನು ಖರೀದಿಸಿದರು.
ಮಾರುಕಟ್ಟೆಯಲ್ಲಿ ಚೆಂಡು ಹೂವು, ಸೇವಂತಿಗೆ ಹೂ ಯಥೇಚ್ಛವಾಗಿ ಮಾರಾಟ ಮಾಡಲಾಗುತ್ತಿತ್ತು. ಕಳೆದ ಸಲದ ದೀಪಾವಳಿಗೆ ಹೋಲಿಸಿದರೆ ಈ ವರ್ಷದ ಹಬ್ಬದಲ್ಲಿ ಈ ಹೂವಿನ ಮಾರಾಟ ದರ ಹೆಚ್ಚಳವಾಗಿರಲಿಲ್ಲ. ಚೆಂಡು ಹೂ ಪ್ರತಿ ಕೆಜಿಗೆ ರೂ. ೭೦-೧೦೦ ರವರೆಗೆ, ಸೇವಂತಿಗೆ ಹೂ ರೂ.೧೫೦-೨೦೦ ರವರೆಗೆ ಮಾರಾಟವಾಯಿತು. ಹೊತ್ತಾಗುತ್ತಿದ್ದಂತೆ ಹೂವಿನ ದರ ಕೊಂಚ ಕಡಿಮೆಯಾಗಿತ್ತು ಕಂಡುಬಂದಿತ್ತು. ವಿವಿಧ ಹಣ್ಣುಗಳ ದರ ಹೆಚ್ಚಳವಿತ್ತು. ಕುಂಬಳಕಾಯಿ ರೂ.50 ರಿಂದ 300 ರವರೆಗೆ, ಬಾಳೆ ಗಿಡ ಪ್ರತಿ ಜೋಡಿಗೆ ರೂ. 30-1000 ರವರೆಗೂ ಮಾರಾಟವಾದವು. ಪಟ್ಟಣದ ಹೊರವಲಯದಲ್ಲಿ ಹಾಕಲಾಗಿದ್ದ ಪಟಾಕಿ ಅಂಗಡಿಗಳಲ್ಲಿ ಪಟಾಕ್ಷಿ ವ್ಯಾಪಾರವೂ ಜೋರಾಗಿತ್ತು.
ದೀಪಾವಳಿ ಹಬ್ಬದಂದು ಲಕ್ಷ್ಮೀ ಪೂಜೆ ಮಾಡುವದರಿಂದ ಮನೆಯಲ್ಲಿ ಲಕ್ಷ್ಮೀ ಶಾಶ್ವತ ನೆಲೆಸುತ್ತಾಳೆ ಎಂಬ ಭಾವನೆ ಇರುವದರಿಂದ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಕುಟುಂಬ ಬಾಂಧವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ ಎಂದು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಬಂದಿದ್ದ ಜಟ್ಟಿಂಗರಾಯ ಮಾಲಗಾರ ಹೇಳಿದರು.
ಬೆಳಗ್ಗೆಯಿಂದಲೇ ಹಬ್ಬದ ಚಟುವಟಿಕೆಗಳು ಆರಂಭವಾಗಿದ್ದವು. ಮನೆಗೆ ಚೆಂಡು ಹೂ ತರುತ್ತಿದ್ದಂತೆ ಮನೆ ಮಂದಿ ಸೇರಿಕೊಂಡು ಚೆಂಡು ಹೂ ದಾರದಲ್ಲಿ ಪೋಣಿಸಿ ಬಾಗಿಲು ತೋರಣದ ಮೇಲೆ ಕಟ್ಟಿದರು. ಮಹಿಳೆಯರು ಹಬ್ಬದ ಅಡುಗೆ ಮಾಡಿದ ನಂತರ ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ಶ್ರದ್ದಾ ಭಕ್ತಿಯಿಂದ ಲಕ್ಷ್ಮೀ ಪೂಜೆಯಲ್ಲಿ ಭಾಗಿಯಾದರು.
ವಿವಿಧ ವಾಹನಗಳ ಮಾಲೀಕರು, ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಯನ್ನು ಶ್ರದ್ದೆಯಿಂದ ಆಚರಿಸಿದರು. ಪೂಜೆಯಾದ ನಂತರ ಮಕ್ಕಳು ಸೇರಿದಂತೆ ಎಲ್ಲರೂ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ಕೆಲವರು ದೀಪವಾಳಿ ಅಮವಾಸ್ಯೆ ದಿನದಂದು ಇಡೀ ರಾತ್ರಿ ಜಾಗರಣೆ ಮಾಡಿ ಲಕ್ಷ್ಮೀ ದೇವಿಯ ಮುಂದಿನ ದೀಪ ನಂದದಂತೆ ನೋಡಿಕೊಂಡರು. ಪ್ರತಿ ಮನೆ, ಅಂಗಡಿ-ಮುಂಗಟ್ಟುಗಳ ಮುಂದೆ ಹಣತೆ, ರಂಗೋಲಿ, ಆಕಾಶ ಬುಟ್ಟಿ, ರಂಗು ರಂಗಿನ ವಿದ್ಯುದೀಪಗಳ ಅಲಂಕಾರ ರಾರಾಜಿಸುತ್ತಿತ್ತು.
ಪಟ್ಟಣ ಸೇರಿದಂತೆ ಕೆಲವೆಡೆ ಮಾತ್ರ ಶುಕ್ರವಾರ ದೀಪಾವಳಿ ಅಮವಾಸ್ಯೆ ಆಚರಣೆ ಮಾಡಿದರು. ಉಳಿದಂತೆ ಕೆಲಗ್ರಾಮಗಳಲ್ಲಿ ಗುರುವಾರವೇ ದೀಪಾವಳಿ ಅಮವಾಸ್ಯೆ ಆಚರಣೆ ಜನರು ಮಾಡಿದರು. ಶನಿವಾರ ದೀಪಾವಳಿ ಪಾಡ್ಯ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆಯಲ್ಲಿದ್ದಾರೆ. ದೀಪಾವಳಿ ಪಾಡ್ಯದಂದು ಗುಳವ್ವರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ನೆರವೇರುವುದು ಸಂಪ್ರದಾಯ.
ಪಟ್ಟಣದ ಹೃದಯ ಭಾಗದಲ್ಲಿ ಮಾರುಕಟ್ಟೆಗೆ ಹೆಚ್ಚಿನ ಜನರು ಆಗಮಿಸಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾದಂತೆ ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸುವದು ಕಂಡುಬಂದಿತ್ತು. ಪ್ರತಿ ವರ್ಷದ ದೀಪಾವಳಿಯ ಹಬ್ಬದಲ್ಲಿ ಆಗುತ್ತಿದ್ದಂತೆ ವಿಪರೀತ ಜನಸಂದಣಿ ಆಗದಂತೆ ವ್ಯಾಪಾರ ವಹಿವಾಟು ನಡೆಯಿತು. ಪೊಲೀಸ್ ಸಿಬ್ಬಂದಿಗಳು ವಾಹನ ಸಂಚಾರ ಸುಗಮವಾಗುವಂತೆ ಮಾಡಲು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ವ್ಯಾಪಾರಸ್ಥರನ್ನು ರಸ್ತೆ ಬದಿಯಿಂದ ಹಿಂದಕ್ಕೆ ಸರಿಸುವುದು ಕಂಡುಬಂದಿತ್ತು.

