ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನಿತ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡದೇ ಹೋದರೆ ಅದು ನಶಿಸಿಹೋಗುವದರಲ್ಲಿ ಸಂದೇಹವಿಲ್ಲ. ಅದಕ್ಕಾಗಿ ಮಕ್ಕಳು ತಮ್ಮ ತಂದೆ-ತಾಯಿಯನ್ನು ಪಪ್ಪಾ-ಮಮ್ಮಿ ಎಂದು ಕರೆಯದೇ ಅಪ್ಪ-ಅಮ್ಮಾ ಎಂದು ಕರೆಯುವ ಮೂಲಕ ಮನೆಯಿಂದಲೇ ಕನ್ನಡ ಭಾಷೆಯ ಬಳಕೆ ಮಾಡಿದರೆ ಖಂಡಿತ ಕನ್ನಡ ಉಳಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರ ವಹಿಸಿದಂತೆ ಎಂದು ಸ್ಥಳೀಯ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅಶೋಕ ಹಂಚಲಿ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಂದು ಪ್ರತಿಯೊಬ್ಬ ಮಗು ಪಪ್ಪಾ-ಮಮ್ಮಿ, ಅಂಕಲ್-ಆಂಟಿ ಬಳಕೆ ಹೆಚ್ಚು ಮಾಡುವದನ್ನು ನೋಡುತ್ತಿದ್ದೇವೆ. ಮಕ್ಕಳು ಈ ಆಂಗ್ಲ ಶಬ್ದಗಳ ಬದಲಾಗಿ ಕನ್ನಡದ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಕಾಕಾ-ಚಿಕ್ಕಮ್ಮ, ಅತ್ತೆ, ಅಕ್ಕ-ಅಣ್ಣ, ಮಾಮಾ-ಅತ್ತಿಗೆ ಇಂತಹ ಶಬ್ದಗಳನ್ನು ನಿತ್ಯವೂ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಉಳಿಕೆಗೆ ನಾವೆಲ್ಲರೂ ಮುಂದಾಗುವ ಅಗತ್ಯವಿದೆ. ಬದುಕಿನಲ್ಲಿ ಆದಷ್ಟು ಕನ್ನಡ ಭಾಷೆಯನ್ನು ಬಳಕೆ ಮಾಡಲು ಮುಂದಾಗಬೇಕೆಂದರು.
ತಾಯಿ ನುಡಿ ಕನ್ನಡವನ್ನು ಕನ್ನಡಿಗರು ಕಾಪಾಡಬೇಕಿದೆ. ಹೃದಯದಿಂದ ಕನ್ನಡ ಭಾಷೆಯ ಬರುವಂತಾಗಬೇಕು. ಕೇವಲ ಕನ್ನಡದ ಬಗ್ಗೆ ಮಾತನಾಡಿದರೆ ಸಾಲದು. ಕನ್ನಡದ ಜಾಗೃತಿಗೆ ಸದಾ ಮುಂದಾಗಬೇಕೆಂದರು.
ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಜೀವನದಲ್ಲಿ ಕನ್ನಡ ಅಳವಡಿಸಿಕೊಂಡಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ತಾವು ಶಿಕ್ಷಕ ವೃತ್ತಿಯಲ್ಲಿದ್ದಾಗ ಆಂಗ್ಲ ಭಾಷೆ ಪಾಠ ಮಾಡುವ ಸಂದರ್ಭದಲ್ಲಿ ಕನ್ನಡ ಭಾಷಾ ಶಿಕ್ಷಕ ಇಲ್ಲದೇ ಇರುವದರಿಂದಾಗಿ ತಾವು ಕನ್ನಡ ಪಾಠ ಮಾಡಿದೆ. ಮುಂದೆ ಕನ್ನಡ ಸಾಹಿತ್ಯವನ್ನು ತೆಗೆದುಕೊಂಡು ಕೆಎಎಸ್ ಪರೀಕ್ಷೆ ತೇರ್ಗಡೆಯಾಗಿದೆ. ಕನ್ನಡದ ಶಕ್ತಿ ಅಪಾರವಾಗಿದೆ ಎಂದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ರಾಜ್ಯಕ್ಕೆ ವಿವಿಧೆಡೆಗಳಿಂದ ಜನರು ವಲಸೆ ಬಂದಿದ್ದಾರೆ. ಅವರ ಭಾಷೆ ಬೆಳೆಯದಂತೆ ಕನ್ನಡಿಗರು ನೋಡಿಕೊಳ್ಳಬೇಕು. ಕರವೇ ಹೋರಾಟ ಫಲದಿಂದಾಗಿ ಈಗಾಗಲೇ ಕನ್ನಡ ನಾಮಫಲಕ ಶೇ. ೬೦ ರಷ್ಟು ಇರಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಕರವೇ ಶೇ.೮೦ ರಷ್ಟು ಉದ್ಯೋಗ ಕನ್ನಡಿಗರಿಗೆ ಸಿಗಬೇಕೆಂದು ಹೋರಾಟ ಮಾಡಲಿದೆ ಎಂದರು.
ಸಾನಿಧ್ಯ ವಹಿಸಿದ್ದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾತೃಭಾಷೆಯು ಎಲ್ಲೆಡೆ ಬಳಕೆಯಾಗಬೇಕು. ಎಪಿಎಂಸಿಗಳಲ್ಲಿ ದಲ್ಲಾಳಿಗಳು ಅನ್ಯ ಭಾಷೆಯಲ್ಲಿ ಕೂಗುತ್ತಾರೆ. ಇದರ ಬದಲಾಗಿ ಅವರು ಕನ್ನಡದಲ್ಲಿಯೇ ಅಂಕಿಗಳನ್ನು ಹೇಳುವಂತಾಗಬೇಕು. ಇದರಿಂದಾಗಿ ರೈತರಿಗೆ ಅನುಕೂಲವಾಗುತ್ತದೆ. ಸರ್ಕಾರ ಕನ್ನಡ ಶಾಲೆಗಳಿಗೆ ಆದ್ಯತೆ ನೀಡಬೇಕು. ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡುವಂತಾಗಬೇಕೆಂದರು.
ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಕರವೇ ಮುಖಂಡ ಸುನೀಲ ರಾಠೋಡ ಮಾತನಾಡಿದರು.
ವೇದಿಕೆಯಲ್ಲಿ ತಾಪಂ ಇಓ ಪ್ರಕಾಶ ದೇಸಾಯಿ, ಬಿಇಓ ವಸಂತ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಅಪ್ರೋಜಅಹ್ಮದ ಪಟೇಲ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಜಯಕರ್ನಾಟಕ ಅಧ್ಯಕ್ಷ ಶರಣು ಹೂಗಾರ, ಡಿಎಸ್ಎಸ್ ಮುಖಂಡ ಅರವಿಂದ ಸಾಲವಾಡಗಿ ಇದ್ದರು.
ಅಕ್ಕನಾಗಮ್ಮ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆ ಹಾಡಿದರು. ಬಿಇಓ ವಸಂತ ರಾಠೋಡ ಸ್ವಾಗತಿಸಿದರು. ಶಿಕ್ಷಕರಾದ ಕೊಟ್ರೇಶ ಹೆಗ್ಡಾಳ, ಬಿ.ವಿ.ಚಕ್ರಮನಿ ನಿರೂಪಿಸಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ ವಂದಿಸಿದರು.
ನಾಡದೇವಿ ಭಾವಚಿತ್ರ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಭಾವಚಿತ್ರದ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಸಾಂಸ್ಕ್ರತಿಕ ನಾಯಕ ಬಸವಣ್ಣ, ಭುವನೇಶ್ವರಿ, ಸಂಗೊಳ್ಳಿ ರಾಯಣ್ಣ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ಹಂಚಿನಾಳ ಕರವೇ ಕಾರ್ಯಕರ್ತರು ಕನ್ನಡ ಗೀತೆಗಳಿಗೆ ಮಾಡಿದ ಲೇಜಿಮ್ ನೃತ್ಯ ಜನರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ವಿವಿಧ ಶಾಲೆಯ ಸಿಬ್ಬಂದಿ, ಕೆಲವೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಲವು ಆಭಾಸಗಳು
ಸಮಾರಂಭದಲ್ಲಿ ಉಪನ್ಯಾಸಕರು ಮಾತನಾಡಿದ ನಂತರ ಉದ್ಘಾಟನೆ, ಪ್ರಾಸ್ತವಿಕ ನುಡಿ, ಅತಿಥಿಗಳ ಭಾಷಣ ಜರುಗಿತು. ನಾಡದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿಲ್ಲ. ನಿರೂಪಕರು ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ನಿಯಮದಂತೆ ಹಾಕಲಾಗಿದ್ದ ಎಲ್ಲ ಗಣ್ಯರ ಹೆಸರನ್ನು ಅವರು ಬಾರದೇ ಇದ್ದರೂ ಅವರು ವೇದಿಕೆಗೆ ಬರುವಂತೆ ಹೇಳಿದರು. ತಾಪಂ ಅಧಿಕಾರಿ ಕನ್ನಡದ ಶಾಲು ಹಾಕಿಕೊಳ್ಳದೇ ಇರುವುದನ್ನು ಗಮನಿಸಿದ ಕರವೇ ಕಾರ್ಯಕರ್ತರು ನಂತರ ಅವರಿಗೆ ವೇದಿಕೆಯಲ್ಲಿ ಹಾಕಿದ್ದು ಕಂಡುಬಂದಿತ್ತು.

