ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದಲ್ಲಿ ಪ್ರಮುಖ ರಸ್ತೆಗಳಲ್ಲಿನ ತೆರವು ಕಾರ್ಯವನ್ನು ಪುರಸಭೆಯವರು ನಿಲ್ಲಿಸಿದ್ದು ಈಗಾಗಲೇ ತೆರವುಗೊಳಿಸಿದ ಅಂಗಡಿಕಾರರಿಗೆ ಅನ್ಯಾಯವಾಗಿದೆ ಎಂದು ಕೆಲ ಅತೃಪ್ತ ಆತ್ಮಗಳು ಜನರ ಮನಸ್ಸನ್ನು ಕಲುಷಿತಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಸಿಂದಗಿಯ ಜನತೆ ಇಂತಹ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಟ್ಟಣದ ಪ್ರಮುಖ ಬೀದಿಗಳಾದ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದವರೆಗೆ, ಅಂಬೇಡ್ಕರ್ ವೃತ್ತದಿಂದ ಕನ್ನಡಶಾಲೆಯ ಕಾಂಪೌಂಡಿಗೆ ಹೊಂದಿಕೊಂಡಿರುವ ಎಲ್ಲ ಅಂಗಡಿಗಳನ್ನು, ಬಸವೇಶ್ವರ ವೃತ್ತದಿಂದ ಕೆಇಬಿವರೆಗಿನ ಎರಡೂ ಬದಿಗಳಲ್ಲಿನ ಅಂಗಡಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬ ಇರುವುದರಿಂದ ಮೂರ್ನಾಲ್ಕು ದಿನಗಳವರೆಗೆ ಪುರಸಭೆ ಸಿಬ್ಬಂದಿಗಳಿಗೆ ರಜೆ ಇರುವುದರಿಂದ ಕಾರ್ಯಾಚರಣೆಯನ್ನು ಎರಡು ಮೂರು ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ. ಇನ್ನುಳಿದಂತೆ ಬಸವೇಶ್ವರ ವೃತ್ತದಿಂದ ವಿವೇಕಾನಂದ ವೃತ್ತದ ಹಾಗೂ ಕನಕದಾಸ ವೃತ್ತದವರೆಗೆ, ಕೆಇಬಿಯಿಂದ ಅಂಬೇಡ್ಕರ್ ವೃತ್ತದವರೆಗೆ,ಟಿಪ್ಪು ಸುಲ್ತಾನ್ ವೃತ್ತದಿಂದ ಮೋರಟಗಿ ನಾಕಾವರೆಗಿನ ಅಂಗಡಿಕಾರರಿಗೆ ತೆರವುಗೊಳಿಸುವಿಕೆಯ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು ಕಾರ್ಯಾಚರಣೆಯನ್ನು ಮಂಗಳವಾರ, ಬುಧುವಾರ ಹಾಗೂ ಗುರುವಾರ ಮೂರು ದಿವಸ ಬಿಡದೇ ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಲಾಗುವುದು.
ಈ ಕಾರ್ಯಾಚರಣೆಯಲ್ಲಿ ಯಾವುದೇ ಸಂದರ್ಭದಲ್ಲಿ ಯಾರ ಮುಲಾಜಿಗೂ ಒಳಗಾಗದೇ, ಶ್ರೀಮಂತ ಬಡವನೆನ್ನುವ ಭೇಧ-ಭಾವ ಮಾಡದೇ ಸರಕಾರಿ ರಸ್ತೆಯ ಅಳತೆಯ ವ್ಯಾಪ್ತಿಗೆ ಬರುವ ಎಲ್ಲಾ ಅತಿಕ್ರಮಿತ ಅಂಗಡಿಗಳನ್ನು ತೆರವುಗೊಳಿಸಲಾಗುವುದೆಂದು ಶಾಂತೂ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

